ಅನಿಲ್ ಕುಮಾರ್ ಸಾವಿಗೆ ಹೃದಯಾಘಾತ ಕಾರಣ, ಆಕ್ಸಿಜನ್ ಕೊರತೆ ಇಲ್ಲ: ಚಾರುಲತಾ ಸೋಮಲ್
ಚಾಮರಾಜನಗರ, ಸೆಪ್ಟೆಂಬರ್, 20: ಪ್ರಮುಖ ಯಾತ್ರಸ್ಥಳವಾದ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದಿದ್ದ ಚಿತ್ರದುರ್ಗ ಜಿಲ್ಲೆಯ ಅನಿಲ್ ಕುಮಾರ್ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾನೆ ಎನ್ನುವ ಆರೋಪ ಕೇಳಿಬಂದಿತ್ತು. ಆದರೆ ಇದೀಗ ಚಿತ್ರದುರ್ಗ ಜಿಲ್ಲೆಯ 32 ವರ್ಷದ ಅನಿಲ್ ಕುಮಾರ್ ಅವರ ಸಾವಿಗೆ ಹೃದಯಾಘಾತವೇ ಕಾರಣ. ತುರ್ತು ವಾಹನದ ಆಕ್ಸಿಜನ್ ಕೊರತೆಯಲ್ಲ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ಪಷ್ಟನೆ
ಉಸಿರಾಟದ ತೊಂದರೆ, ಅತಿಯಾದ ಬೆವರುವಿಕೆ, ಕೈ ಕಾಲುಗಳು ತಣ್ಣಾಗದ ಸ್ಥಿತಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕು ಬಸವನಪುರ ಗ್ರಾಮದ ಅನಿಲ್ ಕುಮಾರ್ ಅವರನ್ನು ತುರ್ತು ಚಿಕಿತ್ಸೆಗಾಗಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಮಧ್ಯಾಹ್ನ ಸುಮಾರು 3:27ರ ಸುಮಾರಿಗೆ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿತ್ತು. ಕೂಡಲೇ ಇವರಿಗೆ ತುರ್ತು ಘಟಕದಲ್ಲಿ ಇಸಿಜಿ ಹಾಗೂ ವೈದ್ಯಕೀಯ ಪ್ರಮುಖ ಚಿಕಿತ್ಸೆಗಳನ್ನು ಮಾಡಲಾಗಿತ್ತು. ಅವರ ಆರೋಗ್ಯವನ್ನು ಪರೀಕ್ಷಿಸಿ ಆಸ್ಪತ್ರೆಯಲ್ಲಿಯೇ ದಾಖಲು ಮಾಡಲಾಯಿತು. ಮತ್ತು ಇಸಿಜಿಯಲ್ಲಿ ಹೃದಯಾಘಾತ ಆಗಿರುವುದು ದೃಢಪಟ್ಟಿರುತ್ತದೆ. ನಂತರ ಎಲ್ಲಾ ಬಗೆಯ ತುರ್ತು ಔಷಧಗಳನ್ನು ಕೂಡಲೇ ನೀಡಲಾಗಿದೆ. ಕೃತಕ ಉಸಿರಾಟಕ್ಕೆ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿದ್ದಾರೆ.
ತಕ್ಷಣ ಅವರೊಂದಿಗೆ ಬಂದಿದ್ದವರಿಗೆ ರೋಗಿಯ ಗಂಭೀರ ಸ್ಥಿತಿಯ ಬಗ್ಗೆ ವಿವರವಾಗಿ ತಿಳಿಸಿದ್ದು, ಉನ್ನತ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಲಾಯಿತು. ರೋಗಿಯ ಸಂಬಂಧಿಕರ ಒಪ್ಪಿಗೆ ಪಡೆದು ಆಸ್ಪತ್ರೆಯ ತುರ್ತು ವಾಹನದಲ್ಲಿ ಆಕ್ಸಿಜನ್ ಸಮೇತವಾಗಿ ಒಬ್ಬ ವೈದ್ಯಕೀಯ ಸಿಬ್ಬಂದಿ ಜೊತೆ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಹೋಗಲು ವ್ಯವಸ್ಥೆ ಮಾಡಿಕೊಡಲಾಯಿತು. ಸರಿ ಸುಮಾರು 4 ಗಂಟೆಯ ವೇಳೆಗೆ ತುರ್ತು ವಾಹನ ಸಿಬ್ಬಂದಿಯು ರೋಗಿಯ ಬಿಪಿ ನಾಡಿ ಮಿಡಿತ ಪರೀಕ್ಷಿಸಿದ್ದು, ಸಹಜ ಉಸಿರಾಟ ಇಲ್ಲವೆಂದು ವಾಪಾಸ್ ಕರೆದುಕೊಂಡು ಬಂದಿದ್ದಾರೆ. ನಂತರ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕಕ್ಕೆ ಕಳುಹಿಸಿ ವೈದ್ಯಕೀಯ ನಿಯಮದ ಪ್ರಕಾರ ತಕ್ಷಣ ಸಿಪಿಆರ್ ಚಿಕಿತ್ಸೆ ಆರಂಭಿಸಿದ್ದಾರೆ. ಅಲ್ಲಿ ಆಕ್ಸಿಜನ್ ಹಾಗೂ ಎಲ್ಲ ಅವಶ್ಯಕ ಔಷಧಗಳನ್ನು ಕೊಡಲಾಗಿದೆ.

ರೋಗಿಯ ಪ್ರಾಣ ಉಳಿಸಲು ಎಲ್ಲಾ ಪ್ರಯತ್ನವನ್ನು ವೈದ್ಯರು, ಸಿಬ್ಬಂದಿ ಮಾಡಿದ್ದಾರೆ. ಆದರೂ ಎಲ್ಲಾ ಪ್ರಯತ್ನಗಳ ನಂತರವೂ ರೋಗಿಯ ಉಸಿರಾಟ ಮತ್ತು ಹೃದಯ ಬಡಿತ ಸಹಜ ಸ್ಥಿತಿಗೆ ಮರಳಿರುವುದಿಲ್ಲ. ಕೊನೆಯದಾಗಿ ಇಸಿಜಿ ಮಾಡಲಾಗಿದ್ದು, ಅದರಲ್ಲಿ ರೋಗಿಯ ಹೃದಯಬಡಿತ ಸಂಪೂರ್ಣ ಸ್ತಬ್ಧವಾಗಿರುವುದು ದೃಢಪಟ್ಟಿತ್ತು. ಸಂಜೆ 4.30ರ ವೇಳೆಗೆ ರೋಗಿಯ ಸಾವಿಗೆ ಕಾರಣ ಹೃದಯಾಘಾತವೆಂದು ತಿಳಿಸಿ ಅವರ ಸಂಬಂಧಿಕರಿಗೆ ಮೃತ ದೇಹವನ್ನು ಹಸ್ತಾಂತರ ಮಾಡಲಾಯಿತು. ತುರ್ತು ವಾಹನದಲ್ಲಿ ಆಕ್ಸಿಜನ್ ಸಮೇತವಾಗಿ ಚಿಕಿತ್ಸೆ ನೀಡಲಾಗಿದೆ. ರೋಗಿಯ ಸಾವಿಗೆ ಕಾರಣ ಹೃದಯಾಘಾತವೇ ಹೊರತು, ತುರ್ತು ವಾಹನದ ಆಕ್ಸಿಜನ್ ಕೊರತೆಯಿಂದ ಅಲ್ಲವೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನಿಲ್ ಕುಟುಂಬಸ್ಥರ ಆರೋಪ ಏನು?
ಚಿತ್ರದುರ್ಗ ಮೂಲದ ಅನಿಲ್ (32) ಮೃತಪಟ್ಟ ಯುವಕನಾಗಿದ್ದಾನೆ. ಅನಿಲ್ ಮತ್ತು ಕುಟುಂಬದವರು ನಿನ್ನೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿದ್ದು, ದರ್ಶನ ಮುಗಿಸಿ ವಾಪಸ್ ಹಿಂತಿರುಗುವಾಗ ಅನಿಲ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅನಿಲ್ನನ್ನು ಆ್ಯಂಬುಲೆನ್ಸ್ನಲ್ಲಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದು, ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದ ಕಾರಣ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಮೈಸೂರಿನ ಜಯದೇವ ಆಸ್ಪತ್ರೆಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾಗ ಅನಿಲ್ ಅಸುನೀಗಿದರು ಎಂದು ಅನಿಲ್ ಪತ್ನಿ ಮತ್ತು ಕುಟುಂಬಸ್ಥರು ಆರೋಪಿಸಿದ್ದರು.

ನಿನ್ನೆ ವೈದ್ಯಾಧಿಕಾರಿ ನೀಡಿದ ಸ್ಪಷ್ಟನೆ
ಚಿಕಿತ್ಸೆ ಸಿಗದೇ ಯುವಕ ಮೃತಪಟ್ಟಿದ್ದಾನೆ ಎಂಬ ಆರೋಪವನ್ನು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಂಜುನಾಥ್ ಅಲ್ಲಗಳೆದಿದ್ದರು. ಕಾರ್ಡಿಯಕಾರೆಸ್ಟ್ ಆಗಿದೆ. ಆಕ್ಸಿಜನ್ ಕೊಟ್ಟು ಮೈಸೂರಿಗೆ ಕಳುಹಿಸುವ ಸಂದರ್ಭದಲ್ಲಿ ಹೃದಯಾಘಾತ ಆಗಿದ್ದು, ಮತ್ತೆ ಒಳಗೆ ಕರೆದು ಚಿಕಿತ್ಸೆ ನೀಡಿದರೂ ಪ್ರಯೋಜನ ಆಗಲಿಲ್ಲ. ಯುವಕನ ಸಾವಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ ಎಂದಿದ್ದರು. ಇದೀಗ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಪ್ರಕಟಣೆ ಹೊರಡಿಸಿದ್ದು, ತುರ್ತು ವಾಹನದಲ್ಲಿ ಆಕ್ಸಿಜನ್ ಸಮೇತವಾಗಿ ಚಿಕಿತ್ಸೆ ನೀಡಲಾಗಿದೆ. ರೋಗಿಯ ಸಾವಿಗೆ ಕಾರಣ ಹೃದಯಾಘಾತವೇ ಹೊರತು, ತುರ್ತು ವಾಹನದ ಆಕ್ಸಿಜನ್ ಕೊರತೆಯಿಂದ ಅಲ್ಲವೆಂದು ತಿಳಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications