ಮರಿ ಆನೆ ಉಳಿಸಲು ಹೆಣ್ಣಾನೆ ದಾಳಿ: 60 ಪ್ರಯಾಣಿಕರನ್ನು ರಕ್ಷಿಸಿದ ಚಾಲಕ
Recommended Video

ಚಾಮರಾಜನಗರ, ಜೂನ್.25 : ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮೂಲೆಹೊಳೆ ಎಂಬಲ್ಲಿ ನಿನ್ನೆ ಸಂಜೆ 60 ಜನರಿದ್ದ ಕೆಎಸ್ಆರ್ ಟಿಸಿ ಬಸ್ ಮೇಲೆ ಹೆಣ್ಣಾನೆಯೊಂದು ದಾಳಿ ಮಾಡಿದೆ. ಆಗ ಸತತ ಹಾರ್ನ್ ಹಾಕುವ ಮೂಲಕ ಆನೆಯನ್ನು ಓಡಿಸಿದ ಬಸ್ ಚಾಲಕನ ಸಮಯ ಪ್ರಜ್ಞೆ ಈಗ ಬಸ್ ಪ್ರಯಾಣಿಕರ ಶ್ಲಾಘನೆಗೆ ಒಳಗಾಗಿದೆ.
ಆಗಿದ್ದಾದರೂ ಏನು?
ಭಾನುವಾರ ಬೆಳಗ್ಗೆ 7.30ಕ್ಕೆ ಚಿಕ್ಕಮಗಳೂರಿನಿಂದ ಹೊರಟ ಚಿಕ್ಕಮಗಳೂರು-ಕಲ್ಲಿಕೋಟೆ ಬಸ್ ಸಂಜೆ 4ರ ಸುಮಾರಿಗೆ ಮೂಲೆಹೊಳೆ ಮೂಲಕ ಸಾಗುತ್ತಿತ್ತು. ದಟ್ಟಾರಣ್ಯದಲ್ಲಿ ಬಸ್ ಚಾಲಕ ನಿಧಾನವಾಗಿಯೇ ಬಸ್ ಚಲಾಯಿಸುತ್ತಿದ್ದ. ಆಗ ಎದುರಾದದ್ದೇ 5 ಆನೆಗಳ ಹಿಂಡು. ಅದರಲ್ಲಿತ್ತು ಒಂದು ಪುಟಾಣಿ ಕಾಡಾನೆ ಮರಿ.
ಈ ಕಾಡಾನೆ ಮರಿಗೆ ಬಸ್ ತೊಂದರೆ ಕೊಡಬಹುದೆಂಬ ಭೀತಿಯಿಂದ ಹೆಣ್ಣಾನೆ ಬಸ್ ಮೇಲೆ ದಾಳಿ ಮಾಡಿತು. ಸುಮಾರು 50 ಮೀಟರ್ ದೂರದಿಂದ ಓಡಿ ಬಂದ ಕಾಡಾನೆ ಚಾಲಕನ ಸಮೀಪ ಬಸ್ ಗೆ ತನ್ನ ಸೊಂಡಿಲಿನಿಂದ ಹೊಡೆಯಿತು.

ಆನೆ ದಾಳಿಯಿಂದ ತಪ್ಪಿಸಲು ಚಾಲಕ ಬಸ್ ಅನ್ನು ರಿವರ್ಸ್ ಗೇರ್ ನಲ್ಲಿ ಸ್ವಲ್ಪ ದೂರ ಕೊಂಡೊಯ್ದರೂ ಪ್ರಯೋಜನವಾಗಲಿಲ್ಲ. ಬದಲಿಗೆ ಸತತ ಹಾರ್ನ್ ಹಾಕುವಾಗ ಆನೆ ಓಡಿ ಹೋಯಿತು. ಈ ಘಟನೆಯ ನಂತರ ಬದುಕಿದೆಯಾ ಬಡಜೀವವೇ ಎಂಬಂತೆ ಪ್ರಯಾಣಿಕರು ಉದ್ಘಾರ ತೆಗೆದದ್ದಂತು ಸುಳ್ಳಲ್ಲ.











Click it and Unblock the Notifications