ಸಾಲೂರು ಮಠದಲ್ಲಿ ಸ್ವಾಮೀಜಿಗಳ ಮನಸ್ತಾಪ ಸ್ಫೋಟ, ಹಿರಿಯ ಸ್ವಾಮೀಜಿ ಬೆಂಬಲಿಗನ ಮೇಲೆ ಹಲ್ಲೆ
ಚಾಮರಾಜನಗರ, ಸೆಪ್ಟೆಂಬರ್.17: ಪವಾಡ ಪುರುಷ ಮಲೆ ಮಹದೇಶ್ವರ ನೆಲೆಸಿರುವ ಮಹದೇಶ್ವರ ಬೆಟ್ಟದ ಸನ್ನಿಧಿಯಲ್ಲಿರುವ ಸಾಲೂರು ಮಠದಲ್ಲಿ ದಾಸೋಹದ ಅಧಿಕಾರಕ್ಕಾಗಿ ಇಬ್ಬರು ಸ್ವಾಮೀಜಿಗಳ ನಡುವೆ ಜಟಾಪಟಿ ನಡೆಯುತ್ತಿದ್ದು, ಕಿರಿಯ ಸ್ವಾಮೀಜಿಯೊಬ್ಬರು ಹಿರಿಯ ಸ್ವಾಮೀಜಿಯ ಬೆಂಬಲಿಗರೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಈ ಸಂಬಂಧ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠ ದಾಸೋಹಕ್ಕೆ ಖ್ಯಾತಿ ಪಡೆದಿದ್ದು, ಇಲ್ಲಿ ಹಲವಾರು ವರ್ಷಗಳಿಂದ ಹಿರಿಯ ಸ್ವಾಮೀಜಿ ಗುರುಸ್ವಾಮಿಯವರು ದಾಸೋಹದ ಉಸ್ತುವಾರಿ ನೋಡಿಕೊಂಡು ಬರುತ್ತಿದ್ದರು.
ಗುರುಸ್ವಾಮಿಗಳಿಗೆ ಸಂಗಮೇಶ್ ಎಂಬುವವರು ಸಹಾಯಕರಾಗಿದ್ದು, ಗುರುಸ್ವಾಮಿಯವರ ಅನುಪಸ್ಥಿತಿಯಲ್ಲಿ ಸಂಗಮೇಶ್ ದಾಸೋಹದ ಜವಬ್ದಾರಿ ನೋಡಿಕೊಳ್ಳುತ್ತಿದ್ದರು.

ಇದನ್ನು ಸಹಿಸದ ಸಾಲೂರು ಮಠದ ಕಿರಿಯ ಸ್ವಾಮೀಜಿ ಮುಮ್ಮಡಿ ಮಹದೇವಸ್ವಾಮಿರವರು ಶನಿವಾರ ರಾತ್ರಿ ಹಿರಿಯ ಸ್ವಾಮೀಜಿ ಗುರುಸ್ವಾಮಿರವರ ಬೆಂಬಲಿಗ ಸಂಗಮೇಶ್ ಮೇಲೆ ಹಲ್ಲೆ ನಡೆಸಿದರು ಎಂದು ಹೇಳಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಸಾಲೂರು ಮಠದ ಸ್ವಾಮೀಜಿಗಳ ನಡುವೆ ಕಳೆದ ಕೆಲವು ವರ್ಷಗಳ ಹಿಂದಿನಿಂದಲೂ ಶೀತಲ ಸಮರ ನಡೆಯುತ್ತಿದ್ದು, ಇಬ್ಬರು ಸ್ವಾಮೀಜಿಗಳ ಮನಸ್ತಾಪ ಶನಿವಾರ ಸ್ಫೋಟಗೊಂಡು ಸಂಗಮೇಶ್ ಮೇಲೆ ಹಲ್ಲೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications