ಯಳಂದೂರು ಆದರ್ಶ ಶಾಲೆಯ ವಿದ್ಯಾರ್ಥಿ ನಿಗೂಢ ನಾಪತ್ತೆ
ಚಾಮರಾಜನಗರ, ಅಕ್ಟೋಬರ್ 9: ಎಂದಿನಂತೆ ಶಾಲೆಗೆ ಹೋಗುವುದಾಗಿ ಮನೆಯಿಂದ ಹೊರಟ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲೆಗೆ ತೆರಳದೆ ನಾಪತ್ತೆಯಾಗಿರುವ ಘಟನೆ ಯಳಂದೂರಿನಲ್ಲಿ ನಡೆದಿದೆ.
ಯಳಂದೂರು ತಾಲೂಕಿನ ಮೆಳಹಳ್ಳಿ ಗೇಟ್ ಬಳಿ ಇರುವ ಆದರ್ಶ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದವಿದ್ಯಾರ್ಥಿ ವಿ.ಮೋಹನ್ ಕುಮಾರ್ ನಾಪತ್ತೆಯಾದ ವಿದ್ಯಾರ್ಥಿ.

ಈತ ಗಣಿಗನೂರು ಗ್ರಾಮದ ವಿಷಕಂಠಮೂರ್ತಿ ಹಾಗೂ ಕವಿತಾ ದಂಪತಿಯ ಪುತ್ರನಾಗಿದ್ದು, ಓದುವ ಸಲುವಾಗಿ ಈತನನ್ನು ಅಜ್ಜಿಮನೆಗೆ ಕಳುಹಿಸಲಾಗಿತ್ತು. ಅದರಂತೆ ಸಂತೆಮರಹಳ್ಳಿ ಸಮೀಪದ ಹೆಗ್ಗವಾಡಿ ಗ್ರಾಮದಲ್ಲಿರುವ ಅಜ್ಜಿ ನಾಗರಾಜಮ್ಮರವರ ಮನೆಯಲ್ಲಿದ್ದುಕೊಂಡು ಮೆಲ್ಲಹಳ್ಳಿಗೇಟ್ ಬಳಿಯ ಆದರ್ಶ ಶಾಲೆಗೆ ಪ್ರತಿನಿತ್ಯ ಸೈಕಲ್ ನಲ್ಲಿ ಹೋಗಿ ಬರುತ್ತಿದ್ದ.
ಈ ನಡುವೆ ಶಾಲೆಗೆಂದು ಎಂದಿನಂತೆ ಮನೆಯಿಂದ ಸೈಕಲ್ನಲ್ಲಿ ಹೊರಟವನು ಸಂಜೆಯಾದರೂ ಮನೆಗೆ ಮರಳಿಲ್ಲ. ಈ ಸಂದರ್ಭ ಶಾಲೆಗೆ ಹೋಗಿ ವಿಚಾರಿಸಿದಾಗ ಆತ ಶಾಲೆಗೂ ಹೋಗದೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಯಾವುದೇ ರೀತಿಯ ಸುಳಿವು ಸಿಕ್ಕಿಲ್ಲ. ತಮಗೆ ತಿಳಿದ ಕಡೆಗಳಿಗೆಲ್ಲ ತೆರಳಿ ಹುಡುಕಾಟ ನಡೆಸಿದ ಹೆತ್ತವರು ಇದೀಗ ಬೇರೆ ದಾರಿ ಕಾಣದೆ ಪೊಲೀಸರಿಗೆ ದೂರು ನೀಡಿದ್ದಾರೆ.
ವಿದ್ಯಾರ್ಥಿ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರು ಮಗ ನಾಪತ್ತೆಯಾಗಿಲ್ಲ. ಆತನನ್ನು ಯಾರೋ ಅಪಹರಿಸಿರಬೇಕೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕುದೇರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈತನ ಸುಳಿವು ಸಿಕ್ಕಲ್ಲಿ ಮೊ.ಸಂಖ್ಯೆ 9741733949, 9740006736, 08226-234439 ಅಥವಾ ಹತ್ತಿರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.
ಇತ್ತ ಮಗ ದೂರವಾಗಿರುವ ಹಿನ್ನಲೆಯಲ್ಲಿ ಹೆತ್ತವರು ಕಂಗಾಲಾಗಿದ್ದು, ಅನ್ನ ನೀರು ಬಿಟ್ಟು ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದಾರೆ. ವಿದ್ಯಾರ್ಥಿ ಎಲ್ಲಿಗೆ ಹೋದ ಏನಾದ ಎಂಬುದು ಮಾತ್ರ ನಿಗೂಢವಾಗಿದೆ.












Click it and Unblock the Notifications