ಬಂಡೀಪುರ ಕಾಡಂಚಿನಲ್ಲಿ ಶುರುವಾಯ್ತು ಚಿರತೆ ಭಯ!
ಚಾಮರಾಜನಗರ, ಆಗಸ್ಟ್ 18: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ಜನರು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಲೇ ಇರುತ್ತದೆ. ಈ ವ್ಯಾಪ್ತಿಯಲ್ಲಿ ಕಾಡಾನೆ, ಹುಲಿ, ಚಿರತೆ, ಕಾಡುಹಂದಿ ಹೀಗೆ ಒಂದಲ್ಲ ಒಂದು ಪ್ರಾಣಿಗಳು ದಾಳಿ ಮಾಡಿ ಭಯ ಹುಟ್ಟಿಸುತ್ತಿವೆ.
ಇದೀಗ ರಾಘವಾಪುರ ಕೆರೆ ಸಮೀಪದ ಜಮೀನಿನಲ್ಲಿ ಮನೆ ಹೊಂದಿರುವ ಆರ್.ಸಿ.ನಾಗರಾಜು ಎಂಬುವರ ಮನೆಯ ಬಳಿ ಕಟ್ಟಿಹಾಕಿದ್ದ ಎರಡು ನಾಯಿಗಳನ್ನು ಕೊಂದು ಹಾಕಿರುವ ಘಟನೆ ನಡೆದಿದ್ದು, ಚಿರತೆಯೇ ನಾಯಿಯನ್ನು ಕೊಂದು ಹಾಕಿರಬಹುದೆಂದು ಸಂಶಯ ವ್ಯಕ್ತಪಡಿಸಲಾಗಿದೆ. ಇದಕ್ಕೆ ಕಾರಣವೂ ಇದೆ.
ಗ್ರಾಮದಲ್ಲಿ ಚಿರತೆ ಇರುವುದು ಗೊತ್ತಾದ ಬಳಿಕ ಗ್ರಾಮಸ್ಥರು ಹೊರಗೆ ಓಡಾಡಲು ಭಯಪಡುವಂತಾಗಿದೆ. ರಾತ್ರಿ ಎರಡು ನಾಯಿಯ ಮೇಲೆ ದಾಳಿ ಮಾಡಿದ ಸಂದರ್ಭ ನಾಯಿಗಳ ಅರಚಾಟವನ್ನು ಕೇಳಿ ಮನೆಯವರು ಓಡಿ ಬಂದಿದ್ದಾರೆ ಆಗ ಅಲ್ಲಿಂದ ತಪ್ಪಿಸಿ ಓಡಿಹೋಗಿದೆ.
ಈ ಹಿಂದೆ ಗ್ರಾಮಕ್ಕೆ ಸಮೀಪದ ತಗ್ಗಲೂರು ಗ್ರಾಮದ ಮಹದೇವಪ್ಪ ಎಂಬುವರ ಜಮೀನಿನಲ್ಲಿ ಬೋನು ಇರಿಸಿದ್ದಾಗ ಮರಿ ಚಿರತೆ ಸೆರೆಯಾಗಿತ್ತು. ಹೀಗಾಗಿ ಅದರ ತಾಯಿ ಗ್ರಾಮ ವ್ಯಾಪ್ತಿಯಲ್ಲಿ ಓಡಾಡುತ್ತಿರಬಹುದೆಂದು ಗ್ರಾಮಸ್ಥರ ನಂಬಿಕೆಯಾಗಿದೆ. ಜತೆಗೆ ಚಿರತೆ ಸಮೀಪದಲ್ಲಿನ ಹಳ್ಳದಮಾದಹಳ್ಳಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ್ದನ್ನು ಕೆಲವರು ನೋಡಿದ್ದಾರೆ.
ಇದೀಗ ನಾಯಿಯನ್ನು ಸಾಯಿಸಿ ಹೋಗಿರುವುದು ಕೂಡ ಅದೇ ಚಿರತೆಯ ಕೃತ್ಯವಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಮನೆಯಿಂದ ಹೊರಗೆ ಬರಲು ಭಯವಾಗಿದ್ದು, ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ.












Click it and Unblock the Notifications