ಮತ್ತೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದವು ಮೂರು ಹುಲಿ
ಬಂಡೀಪುರ ಸಫಾರಿ ತೆರಳುವವರಿಗೆ ಪ್ರಿನ್ಸ್ ಮಾತ್ರವಲ್ಲದೆ ಇತರೆ ಹುಲಿಗಳು ಕಾಣ ಸಿಗುತ್ತಿರುವುದು ಖುಷಿ ತಂದಿದೆ. ಯಾವಾಗ ಹುಲಿಗಳು ಕಾಣಸಿಗುತ್ತಿವೆ ಎಂಬ ಸುದ್ದಿ ಬಂತೋ ಸಫಾರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ.
ಗುಂಡ್ಲುಪೇಟೆ, ಜನವರಿ 25: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಮೂರು ದಿನಗಳಿಂದ ಸತತವಾಗಿ ಹುಲಿಗಳು ಕಾಣ ಬರುತ್ತಿದ್ದು, ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಮಂಗಳವಾರ ಮುಂಜಾನೆ ಸಫಾರಿಗೆ ತೆರಳಿದ್ದ ಛಾಯಾಗ್ರಾಹಕ ಮಂಜುನಾಥ ಹೆಗಡೆ ಅವರ ಕ್ಯಾಮರಾ ಕಣ್ಣಿಗೆ ಬಂಡೀಪುರದ ಬಸವನಕಟ್ಟೆ ಕೆರೆಯಲ್ಲಿ ನೀರು ಕುಡಿಯುತ್ತಿರುವ ತಾಯಿ ಹಾಗೂ ಎರಡು ಮರಿ ಹುಲಿಗಳು ಸಿಕ್ಕಿವೆ.
ಸುಮಾರು 15 ನಿಮಿಷಗಳ ಕಾಲ ಕೆರೆ ಬಳಿಯಿದ್ದ ಇವು, ನೀರು ಕುಣಿದು ದಣಿವಾರಿಸಿಕೊಂಡು ಮತ್ತೆ ಅರಣ್ಯದೊಳಕ್ಕೆ ಹೋಗಿವೆ. ಇದೀಗ ಬಂಡೀಪುರ ಸಫಾರಿ ತೆರಳುವವರಿಗೆ ಪ್ರಿನ್ಸ್ ಮಾತ್ರವಲ್ಲದೆ ಇತರೆ ಹುಲಿಗಳು ಕಾಣ ಸಿಗುತ್ತಿರುವುದು ಖುಷಿ ತಂದಿದೆ. ಯಾವಾಗ ಹುಲಿಗಳು ಕಾಣಸಿಗುತ್ತಿವೆ ಎಂಬ ಸುದ್ದಿ ಬಂತೋ ಸಫಾರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ.[ಬಂಡೀಪುರದಲ್ಲಿ ಹುಲಿಗಳ ದರ್ಶನ, ಪ್ರವಾಸಿಗರಿಗೆ ರೋಮಾಂಚನ]
ಬಂಡೀಪುರ ಸಫಾರಿ ವಾಹನ ಚಾಲಕ ಸುನೀಲ್ ಎಂಬುವರಿಗೂ ಬೇರೆ ಮಾರ್ಗದಲ್ಲಿ ಎರಡು ಹುಲಿಗಳು ದರ್ಶನ ನೀಡಿವೆ. ಅರಣ್ಯದೊಳಗಿದ್ದ ಹುಲಿಗಳೆಲ್ಲ ಈಗ ನೀರು ಮತ್ತು ಆಹಾರ ಹುಡುಕಿಕೊಂಡು ಒಂದೆಡೆಯಿಂದ ಮತ್ತೊಂದೆಡೆಗೆ ಅಲೆಯುತ್ತಿದ್ದು, ಆಗಾಗ ಪ್ರವಾಸಿಗರ ಕಣ್ಣಿಗೆ ಬಿದ್ದು ಅಚ್ಚರಿ ಮೂಡಿಸುತ್ತಿವೆ.