ಗಂಡ ಮಾತನಾಡಲಿಲ್ಲ ಎಂದು ಬೆಂಕಿ ಹೊತ್ತಿಸಿಕೊಂಡ ಇಪ್ಪತ್ತರ ಗೃಹಿಣಿ
ಚಾಮರಾಜನಗರ, ಮೇ 18: ಈ ಸುದ್ದಿಯೇ ಮನ ಕಲಕುವಂಥದ್ದು. ಘಟನೆ ನಡೆದಿರುವುದು ಚಾಮರಾಜನಗರ ಜಿಲ್ಲೆಯಲ್ಲಿ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 209ರ ಕುವೆಂಪು ಬಡಾವಣೆಯ ಯುವತಿ ಗುರುವಾರ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹೊತ್ತಿಸಿಕೊಂಡಿದ್ದಾರೆ. ಆಕೆ ಹೆಸರು ರಕ್ಷಿತಾ. ವಯಸ್ಸು ಇಪ್ಪತ್ತು. ವಿವಾಹಿತೆಯಾದ ಆಕೆಯ ಸ್ಥಿತಿ ಸದ್ಯಕ್ಕೆ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಸೂರಿನ ಗಂಗೋತ್ರಿ ಬಡಾವಣೆಯವರಾದ ರಕ್ಷಿತಾ ನಾಲ್ಕು ತಿಂಗಳ ಹಿಂದೆ ಕೆಎಸ್ ಆರ್ ಟಿಸಿ ಡಿಪೋದಲ್ಲಿ ಉದ್ಯೋಗಿಯಾಗಿದ್ದ ಶ್ರೀನಿವಾಸ್ ಎಂಬಾತನ ಜತೆಗೆ ಮದುವೆಯಾಗಿತ್ತು. ಆದರೆ ಕೆಲ ದಿನಗಳಿಂದ ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ರಕ್ಷಿತಾರಿಂದ ಶ್ರೀನಿವಾಸ್ ಮಾಂಗಲ್ಯವನ್ನು ಕಸಿದುಕೊಂಡಿದ್ದ ಎಂದು ಆರೋಪಿಸಲಾಗಿದೆ.
ರಕ್ಷಿತಾ ಗುರುವಾರ ಡಿಪೋ ಬಳಿ ಬಂದಾಗ ಶ್ರೀನಿವಾಸ್ ಮಾತನಾಡಿರಲಿಲ್ಲ. ಇದರಿಂದ ನೊಂದುಕೊಂಡ ರಕ್ಷಿತಾ ಪೆಟ್ರೋಲ್ ಸುರಿದುಕೊಂಡು, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆ ನಂತರ ಸ್ತಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಪ್ಪತ್ತು ವರ್ಷದ ಗೃಹಿಣಿ ವಿವಾಹವಾಗಿ ನಾಲ್ಕೇ ತಿಂಗಳಲ್ಲಿ ಇಂಥ ಕೃತ್ಯಕ್ಕೆ ಪ್ರಯತ್ನಿಸಿರುವುದು ಮನಸ್ಸಿಗೆ ಖೇದವುಂಟು ಮಾಡುವಂತಿದೆ.