28 ದಿನದಲ್ಲಿ ಮಲೆ ಮಾದೇಶ್ವರದಲ್ಲಿ 1.25 ಕೋಟಿ ಕಾಣಿಕೆ ಸಂಗ್ರಹ
ತುಮಕೂರು, ಜೂನ್ 28 : ಕರ್ನಾಟಕದ ಶ್ರೀಮಂತ ದೇವಾಲಯಗಳ ಪೈಕಿ ಮಲೆ ಮಹದೇಶ್ವರವೂ ಒಂದು. ಕೇವಲ 28 ದಿನದಲ್ಲಿ ದೇವಾಲಯದಲ್ಲಿ 1.25 ಕೋಟಿ ಹುಂಡಿ ಹಣ ಸಂಗ್ರಹವಾಗಿದೆ.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ದೇವಾಲಯದ ಮೇ ತಿಂಗಳ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆಯಿತು. 1,28,50,373 ರೂಪಾಯಿ ಸಂಗ್ರಹವಾಗಿದೆ. 70 ಗ್ರಾಂ ಚಿನ್ನ ಮತ್ತು 1.100 ಗ್ರಾಂ ಬೆಳ್ಳಿ ಹುಂಡಿಯಲ್ಲಿ ಸಿಕ್ಕಿದೆ.
ಪ್ರತಿ ತಿಂಗಳಿಗೊಮ್ಮೆ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಆನಂದ್, ಶ್ರೀ ಸಾಲೂರು ಬೃಹನ್ಮಠದ ಶ್ರೀ ಪಟ್ಟದ ಗುರುಸ್ವಾಮಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತದೆ.

ಕಳೆದ ತಿಂಗಳು 32 ದಿನಗಳಲ್ಲಿ ಹುಂಡಿಯ ಎಣಿಕೆ ಕಾರ್ಯ ನಡೆದಿತ್ತು. 1.60 ಕೋಟಿ ಹಣ ಸಂಗ್ರಹವಾಗಿತ್ತು. ದಿನದಿಂದ ದಿನಕ್ಕೆ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮಲೆ ಮಹದೇಶ್ವರ ಕ್ಷೇತ್ರದ ಅಭಿವೃದ್ಧಿಗಾಗಿ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಆದರೆ, ಮೂಲ ಸೌಕರ್ಯಗಳ ಕೊರತೆ ಇದೆ ಎಂದು ಭಕ್ತರು ಆರೋಪಿಸಿದ್ದಾರೆ.
ಕುಕ್ಕೆ ಸುಬ್ರಮಣ್ಯ ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲಿ ಮೊದಲ ಸ್ಥಾನದಲ್ಲಿದೆ. 2018-19ನೇ ಸಾಲಿನಲ್ಲಿ ದೇವಾಲಯದ ಆದಾಯ 92,09,13,824 ರೂ.ಗಳು. ವರ್ಷದಿಂದ ವರ್ಷಕ್ಕೆ ದೇವಾಲಯದ ಆದಾಯ ಹೆಚ್ಚುತ್ತಲೇ ಇದೆ.












Click it and Unblock the Notifications