ಭಾರತದ ಅತೀ ಶ್ರೀಮಂತ ಮಹಿಳೆ ಯಾರು ಗೊತ್ತಾ? ನೀತಾ ಅಂಬಾನಿಯೂ ಅಲ್ಲ, ಕಿರಣ್ ಮಜುಂದಾರೂ ಅಲ್ಲ!
ದೇಶದ ಶ್ರೀಮಂತ ಮಹಿಳೆ ಯಾರು ಅಂತ ಕೇಳಿದ್ರೆ ನಮ್ಮ ಕಣ್ಣೆದುರು ಬರೋದು ಹೆಚ್ಚು ಪ್ರಚಾರದಲ್ಲಿರುವ ನೀತಾ ಅಂಬಾನಿ, ಕಿರಣ್ ಮಜುಂದಾರ್ ಮೊದಲಾದವರು. ಆದರೆ ರಿಯಲ್ ನಾಯಕಿ ಬೇರೆಯೇ ಇದ್ದಾರೆ.
ಒಂದಿಷ್ಟು ವರ್ಷಗಳ ಕೆಳಗೆ ತಾನಾಯ್ತು ತನ್ನ ಪಾಡಾಯ್ತು ಎಂಬಂತೆ ಇದ್ದ ಗೃಹಿಣಿಯೊಬ್ಬರು ಮುಂದೊಂದು ದಿನ ಕೋಟ್ಯಂತರ ರೂಪಾಯಿ ಸಾಮ್ರಾಜ್ಯದ ಒಡತಿಯಾಗುತ್ತಾರೆ, ಭಾರತದ ಅತೀ ಶ್ರೀಮಂತ ಮಹಿಳೆಯಾಗಿ ಹೊರಹೊಮ್ಮುತ್ತಾರೆ ಅಂತ ಯಾರೊಬ್ಬರೂ ಊಹಿಸೋದು ಸಾಧ್ಯವಿರಲಿಲ್ಲ. ತಲೆ ಮೇಲೆ ಸೆರಗು ಹೊತ್ತು, ಹೆಚ್ಚಾಗಿ ನಿರಾಭರಣೆಯಾಗಿ ಕಂಗೊಳಿಸುವ ಇವರು ಮಧ್ಯಮ ವರ್ಗದ ಮನೆಯ ಹೆಣ್ಮಗಳಂತೆ ಕಾಣುತ್ತಾರೆ. ಅವರ ಲುಕ್, ಡ್ರೆಸಿಂಗ್ ಸ್ಟೈಲ್, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ರೀತಿ ಎಲ್ಲ ಮೇಲ್ನೋಟಕ್ಕೆ ಸರಳವಾಗಿಯೇ ಕಾಣುತ್ತದೆ. ಮೊದಲ ಬಾರಿ ಇವರನ್ನು ನೋಡಿ ಇವರ ಅಂತಸ್ತಿನ ಬಗ್ಗೆ ಹೇಳಿದರೆ ಯಾರೊಬ್ಬರೂ ನಂಬುವುದು ಕಷ್ಟ. ಅಂದಹಾಗೆ ಇವರ ನೆಟ್ ವರ್ಥ್ 36 ಲಕ್ಷ ಕೋಟಿ ರೂಪಾಯಿಗಳು.

ಅಸ್ಸಾಂ ಹೆಣ್ಣುಮಗಳು ತುಂಬು ಕುಟುಂಬಕ್ಕೆ ಬಂದಾಗ
ಈ ಹೆಣ್ಮಗಳು ಅಸ್ಸಾಂ ಮೂಲದವರು. ಚಿಕ್ಕ ವಯಸ್ಸಿಗೇ ಮದುವೆಯಾಗಿ ಹರಿಯಾಣಕ್ಕೆ ಬರುತ್ತಾರೆ. ಇವರ ಪತಿ ಮೊದಲಿಗೆ ಮದುವೆಯಾದದ್ದು ಇವರ ಅಕ್ಕನನ್ನು. ಆಕೆಯ ಅಕಾಲಿಕ ನಿಧನದ ಬಳಿಕ ಅವರ ಎರಡನೇ ಹೆಂಡತಿಯಾಗಿ, ಅವರ ಆರು ಮಕ್ಕಳ ತಾಯಿಯಾಗಿ ಬರುತ್ತಾರೆ. ಗಂಡನಿಗೂ ಇವರಿಗೂ ಬರೋಬ್ಬರಿ 20 ವರ್ಷಗಳ ಅಂತರ.
ಗಂಡನ ಮನೆಯದು ದೊಡ್ಡ ಅವಿಭಕ್ತ ಕುಟುಂಬ. ಸ್ವಲ್ಪ ಆಧುನಿಕ ಹಿನ್ನೆಲೆಯಿಂದ ಬಂದರೂ ಗಂಡನ ಮನೆಯ ಪರಿಸರಕ್ಕೆ ಬಹುಬೇಗ ಒಗ್ಗಿಕೊಳ್ಳುವ ಈ ಹೆಣ್ಮಗಳಿಗೆ ಆ ಕುಟುಂಬದವರ ಒಗ್ಗಟ್ಟು ನೋಡಿ ಬಹಳ ಖುಷಿಯಾಗುತ್ತದೆ. ತನ್ನ ಮಕ್ಕಳನ್ನೂ ಇದೇ ರೀತಿ ಒಗ್ಗಟ್ಟಿನಿಂದ ಬೆಳೆಸಬೇಕು ಎಂದುಕೊಳ್ಳುತ್ತಾರೆ. ಹಾಗೇ ಬೆಳೆಸುತ್ತಾರೆ ಸಹ.
ಒಂದು ಕಡೆ ಗಂಡ ತನ್ನದೆ ಉದ್ಯಮ ಆರಂಭಿಸಿ ಅದನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಧಾವಂತದಲ್ಲಿದ್ದರೆ ಈಕೆ ಮನೆಗೆ ಕೊಂಚವೂ ಬಿಸಿ ತಟ್ಟದ ಹಾಗೆ ಮನೆಮಂದಿಯನ್ನು ಪೊರೆಯುತ್ತಾರೆ. ಗಂಡನ ಉದ್ಯಮಕ್ಕೆ ಬೇಕಾದ ನೈತಿಕ ಬೆಂಬಲ ನೀಡುತ್ತ ಬರುತ್ತಾರೆ.
ಯಾರು ಈಕೆ?
ಅಂದಹಾಗೆ ಈ ಹೆಣ್ಮಗಳ ಹೆಸರು ಸಾವಿತ್ರೀ ಜಿಂದಾಲ್. ಜಿಂದಾಲ್ ಸಾಮ್ರಾಜ್ಯದ ಅನಭಿಷಿಕ್ತ ರಾಣಿ. ದೇಶದ ಅತೀ ಶ್ರೀಮಂತ ಮಹಿಳೆ. ವಿಶ್ವದ 50 ಅತೀ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು. ಈ ಗಟ್ಟಿಗಿತ್ತಿ ಕೇವಲ ಹಣದ ಕಾರಣಕ್ಕೆ ಮಾತ್ರ ವಿಶ್ವಮಟ್ಟದಲ್ಲಿ ಸುದ್ದಿ ಮಾಡಿಲ್ಲ. ಅತೀ ಹೆಚ್ಚು ಸಮಾಜ ಸೇವೆ ಮಾಡುವ ಮೂಲಕ, ಕೌಟುಂಬಿಕ ಮೌಲ್ಯವನ್ನು ಕಾಯುತ್ತಿರುವ ಕಾರಣಕ್ಕೂ ಮಾದರಿಯಾಗಿದ್ದಾರೆ.
ಪತಿಯ ದುರಂತ ಅಂತ್ಯ
ಸಾವಿತ್ರೀ ಜಿಂದಾಲ್ ಪತಿ ಓಂ ಪ್ರಕಾಶ್ ಜಿಂದಾಲ್ 2025ರಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಅಸುನೀಗುತ್ತಾರೆ. ಮನೆವಾರ್ತೆ ನೋಡಿಕೊಂಡಿದ್ದ ಹೆಣ್ಮಗಳು ದಿಕ್ಕೇ ತೋಚದೆ ಕೂರುತ್ತಾರೆ. ಓ.ಪಿ ಜಿಂದಾಲ್ ಸಾಮ್ರಾಜ್ಯ ಕುಸಿಯಿತು ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ಈ ಗಟ್ಟಿಗಿತ್ತಿ ಹೆಣ್ಣುಮಗಳು ಮೈಕೊಡವಿ ಎದ್ದು ನಿಲ್ಲುತ್ತಾರೆ.
ಜವಾಬ್ದಾರಿ ಹಂಚಿಕೆ
ಓ.ಪಿ ಜಿಂದಾಲ್ ಅವರ ಇಡೀ ಉದ್ಯಮದ ಜವಾಬ್ದಾರಿಯನ್ನು ತನ್ನ ನಾಲ್ವರು ಪುತ್ರರಿಗೆ ಹಂಚುತ್ತಾರೆ. ಸಜ್ಜನ್ ಜಿಂದಾಲ್, ನವೀನ್ ಜಿಂದಾಲ್, ರತನ್ ಜಿಂದಾಲ್ ಮತ್ತು ಪೃಥ್ವಿರಾಜ್ ಜಿಂದಾಲ್ ಜಿಂದಾಲ್ ಸಾಮ್ರಾಜ್ಯದ ಬೇರೆ ಬೇರೆ ಬಿಸಿನೆಸ್ ವಿಂಗ್ಗಳ ಜವಾಬ್ದಾರಿ ಹೊರುತ್ತಾರೆ. ಆದರೆ ಸಂಪೂರ್ಣ ಹಿಡಿತ ಸಾವಿತ್ರಿ ಅವರದಾಗಿರುತ್ತಾರೆ.
ಬಿಸಿನೆಸ್ನಲ್ಲಿ ಹೊಸ ಮೈಲಿಗಲ್ಲು
ಸಾವಿತ್ರಿ ಎಂಥಾ ಲೀಡರ್ ಎಂದರೆ ಜವಾಬ್ದಾರಿ ಹಂಚಿ ಸಾಮ್ರಾಜ್ಯ ವಿಸ್ತರಣೆಗೆ ಮುಂದಾಗುತ್ತಾರೆ. ಬಿಸಿನೆಸ್ನಲ್ಲಿ ಅಧಿಕ ಲಾಭ ದಾಖಲಿಸುತ್ತಾ ಮುನ್ನಡೆಯುತ್ತಾರೆ.
ರಾಜಕೀಯದಲ್ಲೂ ಮುನ್ನಡೆ
ಇವರು ಹರಿಯಾಣ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುತ್ತಾರೆ. ಹರಿಯಾಣ ರಾಜ್ಯ ಸರ್ಕಾರದ ಸಚಿವೆಯಾಗಿಯೂ ಅಧಿಕಾರ ಹಿಡಿಯುತ್ತಾರೆ. ರಾಜಕೀಯ ರಂಗದಲ್ಲೂ ಸೈ ಎನಿಸಿಕೊಳ್ಳುತ್ತಾರೆ. ಜೊತೆಗೆ ಹಿಸಾರ್ನಲ್ಲಿ ಮಹಾರಾಜ ಅಗ್ರಸೇನ್ ಮೆಡಿಕಲ್ ಕಾಲೇಜ್ ಅನ್ನೂ ಮುನ್ನಡೆಸುತ್ತಾರೆ.
ಗೃಹಿಣಿಯೊಬ್ಬರು ಐವತ್ತನೇ ವಯಸ್ಸಲ್ಲಿ ಉದ್ಯಮ ಕ್ಷೇತ್ರ ಅಡಿಯಿಟ್ಟು ಅದರಲ್ಲಿ ಯಶಸ್ವಿಯಾಗಿ ಮುನ್ನಡೆದು ಭಾರತದ ಅತೀ ಶ್ರೀಮಂತ ಮಹಿಳೆ ಅಂತ ಗುರುತಿಸಿಕೊಂಡಿರುವುದು ಸಣ್ಣ ಸಾಧನೆಯಲ್ಲ. ದೊಡ್ಡ ಸಾಧನೆ ಮಾಡಿದ ಅಹಂ ಇಲ್ಲದೇ ಸಾವಿತ್ರಿ ಇದನ್ನು ಸರಳತೆಯಿಂದಲೇ ಎದುರುಗೊಳ್ಳುತ್ತಾರೆ.
(ಬರಹ: ಭವಾನಿ ಭಟ್)














Click it and Unblock the Notifications