ಮುಂಬೈ ಜೈಲಲ್ಲಿ ಗಾಳಿ, ಬೆಳಕಿರಲ್ಲ, ಎಂದ ಮಲ್ಯ, ವಿಡಿಯೋ ಕೇಳಿದ ಜಡ್ಜ್!
ಲಂಡನ್, ಆಗಸ್ಟ್ 01: ಸಾವಿರಾರು ಕೋಟಿ ರುಪಾಯಿ ಸಾಲ ಮಾಡಿ, ಲಂಡನ್ನಿಗೆ ಪರಾರಿಯಾಗಿರುವ ಭಾರತದ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ವಿಚಾರಣೆಗಾಗಿ ಕರೆ ತರುವ ಪ್ರಯತ್ನ ಮುಂದುವರೆದಿದೆ. ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ನಡೆದ ಅಂತಿಮ ಹಂತದ ವಿಚಾರಣೆ ವಿವರ ಇಲ್ಲಿದೆ...
ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಮಲ್ಯ ಅವರು, ತಮ್ಮ ಬಳಿ 14,000 ಕೋಟಿ ರು ಮೌಲ್ಯದ ಆಸ್ತಿ ಇದ್ದು, ಇದನ್ನು ಮಾರಿ, ಸಾಲ ವಾಪಸ್ ಮಾಡುತ್ತೇನೆ ಎಂದು ಒಪ್ಪಿಕೊಂಡರು.
ಆದರೆ, ಭಾರತಕ್ಕೆ ಹೋದರೆ ಅಲ್ಲಿನ ಜೈಲುಗಳ ಪರಿಸ್ಥಿತಿ ಸರಿಯಿಲ್ಲ, ಮುಂಬೈನ ಜೈಲುಗಳಲ್ಲಿ ಗಾಳಿ, ಬೆಳಕು ಇರಲ್ಲ ಎಂದು ಜೈಲಿನ ಸ್ಥಿತಿ ಗತಿ ತಿಳಿಸುವ ಫೋಟೋಗಳನ್ನು ಜಡ್ಜ್ ಮುಂದೆ ಇಡಲಾಯಿತು. ಆದರೆ, ಇದಕ್ಕೆ ತೃಪ್ತರಾಗದ ಜಡ್ಜ್, ಜೈಲಿನ ಸೆಲ್ ಗಳ ವಿಡಿಯೋ ನೀಡುವಂತೆ ಸೂಚಿಸಿದರು.
ಮುಂಬೈಯಲ್ಲಿರುವ ಆರ್ಥರ್ ರೋಡ್ ಜೈಲಿನಲ್ಲಿ ಮಲ್ಯರನ್ನು ಇರಿಸಲು ನಿರ್ಧರಿಸಲಾಗಿದೆ ಎಂದು ಭಾರತದ ಪರ ವಕೀಲರು ಹೇಳಿದರು.
ಆ ಜೈಲಿನ ಬರಾಕ್ ಸಂಖ್ಯೆ 12ರಲ್ಲಿರುವ ಸೌಲಭ್ಯಗಳು ಮತ್ತು ವಿವಿಧ ವಿವರಗಳನ್ನು ತೋರಿಸುವ ವೀಡಿಯೊವೊಂದನ್ನು ಸಲ್ಲಿಸುವ ಭರವಸೆಯನ್ನು ಕೂಡಾ ಭಾರತ ಸರ್ಕಾರದ ಪರ ವಕೀಲರು ಸೂಚಿಸಿದರು.

ವಿಚಾರಣೆ ಮುಂದೂಡಲು ಏನು ಕಾರಣ?
ಮಲ್ಯರನ್ನು ಯುಕೆಯಿಂದ ಗಡಿಪಾರು ಮಾಡಿ, ವಿಚಾರಣೆ ನಡೆಸಲು ಭಾರತಕ್ಕೆ ಹಸ್ತಾಂತರಿಸುವಂತೆ ಕೋರಿರುವ ಅರ್ಜಿಯ ಅಂತಿಮ ವಿಚಾರಣೆ, ವಾದ-ಪ್ರತಿವಾದಗಳು ಜುಲೈ 31ರಂದು ಮುಕ್ತಾಯವಾಗಬೇಕಿತ್ತು. ಆದರೆ, ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಚೀಫ್ ಮ್ಯಾಜಿಸ್ಟ್ರೇಟ್ ಎಮ್ಮಾ ಆ್ಯರ್ಬತ್ನಾಟ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಕೆಲ ಕಾಲ ಮಾತ್ರ ಕೋರ್ಟ್ ಕಲಾಪ ನಡೆಸಲಾಯಿತು. ಮಲ್ಯನ ಜಾಮೀನು ಅವಧಿ ವಿಸ್ತರಣೆಯಾಗಿದ್ದು, ಸೆಪ್ಟಂಬರ್ 12ರ ತನಕ ವಿಚಾರಣೆ ಮುಂದೂಡಲಾಯಿತು.

ಜೈಲುಗಳ ಪರಿಸ್ಥಿತಿಗಳ ಬಗ್ಗೆ ಮಲ್ಯ ಕಳವಳ
ಮುಂಬೈನ ಜೈಲಿನಲ್ಲಿ ನೈಸರ್ಗಿಕ ಬೆಳಕು ಅಥವಾ ತಾಜಾ ಗಾಳಿ ಇರುವುದಿಲ್ಲ ಎಂದು ವಿಜಯ ಮಲ್ಯ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.
ಈ ಕುರಿತಂತೆ ಭಾರತ ಪರ ವಕೀಲರು, ಸಲ್ಲಿಸಿರುವ ಫೋಟೊಗಳನ್ನು ಪರಿಶೀಲಿಸಿದ ನ್ಯಾಯಾಧೀಶೆ, ಫೋಟೋ ಮೂಲಕ ಸ್ಪಷ್ಟವಾದ ಚಿತ್ರಣ ಸಿಗುತ್ತಿಲ್ಲ. ಒಬ್ಬ ವ್ಯಕ್ತಿ ಓಡಾಡುವ ದೃಶ್ಯ ಇರುವ ವಿಡಿಯೋವನ್ನು ಸೆಪ್ಟೆಂಬರ್ 12ರೊಳಗೆ ಕೋರ್ಟಿಗೆ ಸಲ್ಲಿಸುವಂತೆ ಭಾರತದ ಅಧಿಕಾರಿಗಳಿಗೆ ಸೂಚಿಸಿದರು.

ಸಾಲ ಮರು ಪಾವತಿ ಬಗ್ಗೆ ಮೋದಿಗೆ ಪತ್ರ
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ರುಗಳಿಗೂ ಅಧಿಕ ಸಾಲ ಮಾಡಿಕೊಂಡು 2016ರ ಮಾರ್ಚ್ ತಿಂಗಳಿನಲ್ಲಿ ಯುಕೆಗೆ ಹಾರಿದ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಜಾರಿ ನಿರ್ದೇಶನಾಲಯ ಸತತ ಪ್ರಯತ್ನ ನಡೆಸಿದೆ.
ಮನಿಲಾಂಡ್ರಿಂಗ್ ಪ್ರಕರಣದಲ್ಲಿ ರೆಡ್ ಕಾರ್ನರ್, ಜಾಮೀನು ರಹಿತ ವಾರೆಂಟ್ ಪಡೆದಿರುವ ಮಲ್ಯ ಅವರು ತಾವು ಮೋದಿ ಅವರಿಗೆ ಏಪ್ರಿಲ್ 2016ರಲ್ಲಿ ಬರೆದಿದ್ದ ಪತ್ರದ ಬಗ್ಗೆ ಮತ್ತೊಮ್ಮೆ ಮಲ್ಯ ಪ್ರಸ್ತಾಪಿಸಿದ್ದಾರೆ.

ಸೆಟ್ಲ್ ಮೆಂಟ್ ಗೆ ಎಸ್ ಬಿಐ ಒಪ್ಪಲಿಲ್ಲ
ನಾನು ಹಲವು ಬಾರಿ ಮನವಿ ಮಾಡಿದರೂ ಸರ್ಕಾರಿ ಸ್ವಾಮ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಲಿಲ್ಲ. 4400 ಕೋಟಿ ರು ನೀಡಿ ಒಂದೇ ಸಲಕ್ಕೆ ಸೆಟ್ಲ್ ಮೆಂಟ್ ಮಾಡಿಕೊಳ್ಳುವ ಇರಾದೆ ಇತ್ತು. ಆದರೆ, ನಮ್ಮ ಆಫರ್ ಗೆ ಬೆಲೆ ನೀಡಬೇಕಿತ್ತು. ಈ ಸೆಟ್ಲ್ ಮೆಂಟ್ ಮಾಡಿಕೊಂಡಿದ್ದರೆ ನಮಗೆ 8400 ಕೋಟಿ ರು ನಷ್ಟವಾಗುತ್ತಿತ್ತು. ಆದರೆ, ಸಾಲ ತೀರುತ್ತಿತ್ತು. ಆಗ ಇದ್ದ ಯುಪಿಎ ಸರ್ಕಾರ ಇದಕ್ಕೆ ಆಸ್ಪದ ನೀಡಲಿಲ್ಲ. ಈಗ ನಿಮ್ಮ ಸರ್ಕಾರದಿಂದ ನನಗೆ ಅವಕಾಶ ನೀಡಿದರೆ, ನಾನು ಸೆಟ್ಲ್ ಮೆಂಟ್ ಗೆ ಸಿದ್ಧ ಎಂದು 9 ಸಾವಿರ ಕೋಟಿ ಸಾಲ ಹೊತ್ತುಕೊಂಡಿರುವ ಮಾರ್ಚ್ 2016ರಿಂದ ಭಾರತದಿಂದ ಪರಾರಿಯಾಗಿರುವ ಮಲ್ಯ ಅವರು ಮಾಧ್ಯಮಗಳ ಮುಂದೆ ಹೇಳಿದರು.












Click it and Unblock the Notifications