ಆಧಾರ್ ಆಧಾರಿತ ನೇರ ವರ್ಗಾವಣೆ ಬಳಸಲು ಸಚಿವಾಲಯಗಳಿಗೆ ಕೇಂದ್ರದ ಸೂಚನೆ
ನವದೆಹಲಿ, ಜುಲೈ 15; ಸಚಿವಾಲಯ ಮತ್ತು ಇಲಾಖೆಗಳು ಜಾರಿಗೊಳಿಸಿರುವ ಎಲ್ಲಾ ಕಲ್ಯಾಣ ಯೋಜನೆಗಳ ಸಮಗ್ರ ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಎಲ್ಲಾ ಯೋಜನೆಗಳಲ್ಲಿ ಆಧಾರ್ ಆಧಾರಿತ ನೇರ ಲಾಭ ವರ್ಗಾವಣೆ (ಡಿಬಿಟಿ) ಬಳಸುವಂತೆ ಸೂಚನೆ ನೀಡಿದೆ.
ನಕಲಿ ದಾಖಲೆಗಳನ್ನು ಸಲ್ಲಿಸಿ, ಸರ್ಕಾರದ ಸೌಲಭ್ಯ ಪಡೆಯುವ ನಕಲಿ ಫಲಾನುಭವಿಗಳನ್ನು ಗುರುತಿಸಿ ಅವರನ್ನು ತೆಗೆದುಹಾಕಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ವಿವಿಧ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಪ್ರಯೋಜನಗಳನ್ನು ಸುಗಮವಾಗಿ ವಿತರಣೆ ಮಾಡುವ ದೃಷ್ಟಿಯಿಂದ ಕೂಡ ಈ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ರಾಯಚೂರು; ಆಧಾರ್ ತಿದ್ದುಪಡಿಗಾಗಿ ಜನರ ಅಲೆದಾಟ
ಜೂನ್ 28 ರಂದು ಕ್ಯಾಬಿನೆಟ್ ಸೆಕ್ರೆಟರಿಯೇಟ್ ಹೊರಡಿಸಿದ ಕಚೇರಿ ಜ್ಞಾಪಕ ಪತ್ರದ ಪ್ರಕಾರ, ಈ ಯೋಜನೆಗಳನ್ನು ಯುಐಡಿಎಐ (UIDAI) ನೊಂದಿಗೆ ಸಮಾಲೋಚಿಸಿ ಆಧಾರ್ (ಹಣಕಾಸು ಮತ್ತು ಇತರ ಸಬ್ಸಿಡಿಗಳ ಉದ್ದೇಶಿತ ವಿತರಣೆ, ಪ್ರಯೋಜನಗಳು ಮತ್ತು ಸೇವೆಗಳು) ಕಾಯಿದೆ, 2016 ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಸೂಚಿಸಬೇಕಾಗುತ್ತದೆ.
ಸಬ್ಸಿಡಿಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಮೂಲಕ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿಯನ್ನು ಡಿಬಿಟಿ ಹೊಂದಿದೆ.
ಡಿಜಿಟಲ್ ಪಾವತಿ ಮೂಲಕ 23 ಲಕ್ಷ ಕೋಟಿ ರು. ವರ್ಗಾವಣೆ; ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, 53 ಸಚಿವಾಲಯಗಳು ಒಟ್ಟು 313 ಕೇಂದ್ರ ವಲಯದ ಯೋಜನೆಗಳು ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಡಿಬಿಟಿ ಭಾರತ್ ಪೋರ್ಟಲ್ನಲ್ಲಿ ಇರಿಸಿವೆ. 2019-20 ರಲ್ಲಿ, ನಗದು ಫಲಾನುಭವಿಗಳ ಸಂಖ್ಯೆ 70.6 ಕೋಟಿಯಷ್ಟಿದ್ದರೆ, 2020-21ರಲ್ಲಿ ಈ ಸಂಖ್ಯೆ 81.9 ಕೋಟಿಗೆ ಏರಿದೆ.
ಈ ತಿಂಗಳ ಆರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ 2014 ರಿಂದ ಡಿಬಿಟಿ ಕಾರ್ಯವಿಧಾನದ ಅಡಿಯಲ್ಲಿ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ 23 ಲಕ್ಷ ಕೋಟಿ ರುಪಾಯಿಗಳನ್ನು ವರ್ಗಾಯಿಸಲಾಗಿದೆ ಎಂದು ಹೇಳಿದ್ದರು.
ಆಧಾರ್ ಫಲಾನುಭವಿಗಳ ವೆಚ್ಚ-ಪರಿಣಾಮಕಾರಿ ದೃಢೀಕರಣವನ್ನು ನೈಜ-ಸಮಯದ ಆಧಾರದ ಮೇಲೆ ಖಚಿತಪಡಿಸುತ್ತದೆ ಮತ್ತು ನಕಲಿ ದಾಖಲೆಗಳನ್ನು ಸಲ್ಲಿಸಿ ಪ್ರಯೋಜನ ಪಡೆಯುತ್ತಿರುವ ನಕಲಿ ಫಲಾನುಭವಿಗಳನ್ನು ಯೋಜನೆಯಿಂದ ತೆಗೆದುಹಾಕಲು ಸಹಾಯಕವಾಗುತ್ತದೆ ಎಂದು ಕ್ಯಾಬಿನೆಟ್ ಸೆಕ್ರೆಟರಿಯಟ್ ಆದೇಶ ಹೇಳಿದೆ. 77 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳು ಆಧಾರ್ನೊಂದಿಗೆ ಲಿಂಕ್ ಆಗಿರುವುದರಿಂದ ಅದನ್ನು ಹಣಕಾಸಿನ ವ್ಯವಹಾರಕ್ಕೆ ವಿಳಾಸವಾಗಿಯೂ ಬಳಸಬಹುದು ಎಂದು ಅದು ಹೇಳಿದೆ.