ಬೆಂಗಳೂರಿನಲ್ಲಿ ಬ್ಯಾಂಕಿನಿಂದ ಗ್ರಾಹಕರ ಮನೆಗೆ ನಗದು ವಿತರಣೆ!
ಬೆಂಗಳೂರು ಏಪ್ರಿಲ್ 13: ಕೊರೋನಾ ಸೋಂಕಿನ ಕಾರಣದಿಂದಾಗಿ ಮನೆಯಿಂದ ಹೊರ ಬರಲು ಸಾಧ್ಯವಾಗದೆ ಇರುವ ಗ್ರಾಹಕರಿಗೆ 25 ಸಾವಿರ ದಷ್ಟು ನಗದನ್ನು ಮನೆಗೆ ತಂದು ಕೊಡುವ ಸೌಲಭ್ಯವನ್ನು ನಗರದ ಸ್ವರ್ಣಭಾರತಿ ಬ್ಯಾಂಕ್ ಪ್ರಾರಂಭಿಸಿದೆ. ಇದಲ್ಲದೆ ಕಳೆದ ಆರ್ಥಿಕ ವರ್ಷದಲ್ಲಿ 2.64 ಕೋಟಿಗಳಷ್ಟು ಲಾಭವನ್ನು ಗಳಿಸಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 4 ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿದ್ದೇವೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಪಿ ಎಲ್ ವೆಂಕಟರಾಮ ರೆಡ್ಡಿಯವರು ತಿಳಿಸಿದ್ದಾರೆ.
ಇಂದು ಸಹಕಾರ ಇಲಾಖೆ ಸಚಿವರಾದ ಎಸ್ ಟಿ ಸೋಮಶೇಖರ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೋಡಲಾದ ನಾಲ್ಕು ಲಕ್ಷ ರೂಪಾಯಿಗಳ ಡಿಡಿಎನ್ನು ನೀಡಿ ಮಾತನಾಡಿದರು. ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಟಿ.ಎನ್ ಚೌಡಪ್ಪನವರ ಮಾರ್ಗದರ್ಶನದಲ್ಲಿ ಈ ಬ್ಯಾಂಕ್ ಪ್ರತಿವರ್ಷ ಪ್ರಗತಿಯನ್ನು ಕಾಣುತ್ತಿದೆ. ಪ್ರಸ್ತುತ 10 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಗ್ರಾಹಕ ಸ್ನೇಹೀ ಸಹಕಾರ ಬ್ಯಾಂಕ್ಗಳಲಿ ಒಂದು ಎಂಬ ಹೆಗ್ಗಳಿಕೆ ಪಾತ್ರವಾಗಿದೆ. 6.33 ಕೋಟಿಗೂ ಮೀರಿ ಷೇರು ಬಂಡವಾಳ ಸಂಗ್ರಹಿಸಿದ್ದು, ರೂ 140 ಕೋಟಿಗೂ ಅಧಿಕ ಠೇವಣಿಗಳನ್ನು ಹೊಂದಿದೆ. ಅಲ್ಲದೆ, ರೂ 104 ಕೋಟಿಗಳಿಗೂ ಮೀರಿದ ಸಾಲವನ್ನು ವಿತರಿಸಲಾಗಿದ್ದು, ದುಡಿಯುವ ಬಂಡವಾಳ ರೂ 159 ಕೋಟಿಗೂ ಮೀರಿದ್ದು ಬ್ಯಾಂಕು ಸಾರ್ವಜನಿಕರ ವಿಶ್ವಾಸವನ್ನು ಗಳಿಸಿದೆ ಎಂದು ಹೇಳಿದರು.
ಕರೋನ ಮಹಾಮಾರಿಯಿಂದಾಗಿ ಜನ ಸಾಮಾನ್ಯರು ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಮ್ಮ ಬ್ಯಾಂಕಿನ ಗ್ರಾಹಕರುಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅವರ ಖಾತೆಯಲ್ಲಿರುವ ಹಣದಲ್ಲಿ ರೂ. 25 ಸಾವಿರದವರೆಗಿನ ನಗದನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನ ಮಾಡಿದ್ದೇವೆ. ಅಲ್ಲದೆ, ಒಂದು ವೇಳೆ ಗ್ರಾಹಕರು ಬ್ಯಾಂಕಿಗೆ ನಗದು ಜಮೆ ಮಾಡಬೇಕಾದರೆ, ಬ್ಯಾಂಕಿನ ಸಿಬ್ಬಂದಿಗಳೇ ಗ್ರಾಹಕರ ಮನೆಗೆ ತೆರಳಿ ನಗದು ಸ್ವೀಕರಿಸುವ ಸೌಲಭ್ಯವನ್ನೂ ಉಚಿತವಾಗಿ ಕಲ್ಪಿಸಿದ್ದೇವೆ ಎಂದು ತಿಳಿಸಿದರು.

ಬ್ಯಾಂಕಿನ ಉಪಾಧ್ಯಕ್ಷರಾದ ಎಂ ತಿಬ್ಬೇಗೌಡರು ಮಾತನಾಡಿ, ಬ್ಯಾಂಕು ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದೆ. ಇದಕ್ಕೆ ಬ್ಯಾಂಕಿನ ಆಡಳಿತ ಮಂಡಳಿ, ಸದಸ್ಯರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದ ಸೇವೆಯೇ ಕಾರಣ. ಮುಂಬರುವ ದಿನಗಳಲ್ಲಿ ಬ್ಯಾಂಕು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ನಾವುಗಳೆಲ್ಲರೂ ಶ್ರಮಿಸುತ್ತೇವೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಕೃಷ್ಣಮೂರ್ತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೊ: 96069 33921












Click it and Unblock the Notifications