ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆಯ ಮುಂಗಡ ಕಂತು ಹಂಚಿಕೆ
ನವದೆಹಲಿ, ಜನವರಿ 21: ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ, 17 ರಾಜ್ಯಗಳಿಗೆ 9,781 ಕೋಟಿ ರೂ. ತಿಂಗಳ ಬದಲಾವಣೆ ನಂತರದ ಆದಾಯ ಕೊರತೆ (ಪಿಡಿಆರ್ ಆಡಿ) ಅನುದಾನವನ್ನು ಬಿಡುಗಡೆ ಮಾಡಿದೆ. ಇದು ರಾಜ್ಯಗಳಿಗೆ ಬಿಡುಗಡೆ ಮಾಡಿದ 10ನೇ ಕಂತಿನ ಪಿಡಿಆರ್ಡಿ ಅನುದಾನವಾಗಿದೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆಯ ಮುಂಗಡ ಕಂತು 47,541 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದ್ದಾರೆ. ಇದು 2022ರ ಜನವರಿ ತಿಂಗಳಿಗೆ ಮಾಮೂಲಿಯಂತೆ ಹಂಚಿಕೆಯಾಗುವ ತೆರಿಗೆಯ ಜತೆಗೆ ಹೆಚ್ಚುವರಿಯಾಗಿದ್ದು, ಅದನ್ನು ಇಂದು ಬಿಡುಗಡೆ ಮಾಡಲಾಗಿದೆ.
ಇದರಿಂದಾಗಿ ರಾಜ್ಯಗಳು 2022ರ ಜನವರಿ ತಿಂಗಳಲ್ಲಿ ಒಟ್ಟು 95,082 ಕೋಟಿ ಅಥವಾ ತಮಗೆ ಹಂಚಿಕೆಯಾಗಿರುವುದಕ್ಕಿಂತ ದುಪ್ಪಟ್ಟು ಹಣವನ್ನು ಸ್ವೀಕರಿಸಲಿವೆ. ಬಿಡುಗಡೆಯಾಗಲಿರುವ ರಾಜ್ಯವಾರು ಮೊತ್ತ ಹಾಗೂ ವಿವರಗಳನ್ನು ಕೆಳಗೆ ಲಗತ್ತಿಸಲಾಗಿದೆ.
ಭಾರತ ಸರ್ಕಾರ ರಾಜ್ಯಗಳ ತೆರಿಗೆ ಹಂಚಿಕೆಯ ಮೊದಲ ಮುಂಗಡ ಕಂತು 47,541 ಕೋಟಿ ರೂ.ಗಳನ್ನು 2021ರ ನವೆಂಬರ್ 22ರಂದೇ ಬಿಡುಗಡೆ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಇಂದು ಎರಡನೇ ಮುಂಗಡ ಕಂತು ಬಿಡುಗಡೆಯಾಗುವುದರೊಂದಿಗೆ ರಾಜ್ಯಗಳು ಒಟ್ಟು ತೆರಿಗೆ ಹಂಚಿಕೆಯಲ್ಲಿ ಹೆಚ್ಚುವರಿಯಾಗಿ 90,082 ಕೋಟಿ ರೂ.ಗಳನ್ನು ಸ್ವೀಕರಿಸಲಿವೆ ಮತ್ತು ಇದು ಜನವರಿ 2022ರ ವರೆಗೆ ಅಂದಾಜಿಸಿದ್ದಕ್ಕಿಂತ ಅಧಿಕ ಮೊತ್ತವಾಗಿದೆ.
ಅಲ್ಲದೆ ಭಾರತ ಸರ್ಕಾರ 2021-22ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಉಂಟಾಗುವ ಜಿಎಸ್ ಟಿ ಪರಿಹಾರದ ಕೊರತೆಯನ್ನು ನೀಗಿಸಲು 1.59 ಲಕ್ಷ ಕೋಟಿ ರೂ. ಮೊತ್ತದ ಸಾಲವನ್ನು ಆಗಾಗ್ಗೆ ನೀಡುತ್ತಿದ್ದು, ಅದು 2021ರ ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಂಡಿದೆ.
ಭಾರತ ಸರ್ಕಾರವು ಕರ್ನಾಟಕಕ್ಕೆ ಮುಂಗಡ ತೆರಿಗೆಯೂ ಸೇರಿದಂತೆ ಒಟ್ಟು 3467.62 ಕೋಟಿ ರೂ. ಮಂಜೂರು ಮಾಡಿದೆ. ಇದರಲ್ಲಿ ಜನವರಿ 2022ರ ರಾಜ್ಯದ ತೆರಿಗೆ ಪಾಲು 1733.81 ಕೋಟಿ ರೂ. ಹಾಗೂ 1733.81 ಕೋಟಿ ರೂ. ಮುಂಗಡವೂ ಸೇರಿದೆ. ಪ್ರಧಾನಿ @narendramodi ಹಾಗೂ ವಿತ್ತ ಸಚಿವೆ @nsitharaman ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. (1/2)
— CM of Karnataka (@CMofKarnataka) January 21, 2022
ವಿಶೇಷವಾಗಿ ಕೋವಿಡ್ 19ರ ಮೂರನೇ ಅಲೆಯನ್ನು ಎದುರಿಸುತ್ತಿರುವ ಸಂಕಷ್ಟದ ಸಂದರ್ಭದಲ್ಲಿ ಸಕಾಲದಲ್ಲಿ ರಾಜ್ಯದ ತೆರಿಗೆ ಪಾಲು ಬಿಡುಗಡೆಯಾಗಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ಹಾನಿಕಾರಕ ಪರಿಣಾಮಗಳನ್ನು ನಿವಾರಿಸಲು ಮತ್ತು ಬಂಡವಾಳ ಹಾಗೂ ಅಭಿವೃದ್ಧಿ ವೆಚ್ಚವನ್ನು ವೇಗಗೊಳಿಸಲು ರಾಜ್ಯಗಳ ಶಕ್ತಿವರ್ಧನೆಗೆ ಭಾರತ ಸರ್ಕಾರ ಬದ್ಧವಾಗಿದ್ದು, ಅದಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

15ನೇ ಹಣಕಾಸು ಆಯೋಗ ಆದಾಯ ಕೊರತೆ ಅನುದಾನ ಪಡೆಯಲು ಶಿಫಾರಸು ಮಾಡಿರುವ ರಾಜ್ಯಗಳೆಂದರೆ, ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ್, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳ.
ಹದಿನೈದನೆಯ ಹಣಕಾಸು ಆಯೋಗವು 2021-22ರ ಆರ್ಥಿಕ ವರ್ಷದಲ್ಲಿ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ರೂ. ಪಿಡಿಆರ್ಡಿ ಅನುದಾನವನ್ನು ಶಿಫಾರಸು ಮಾಡಿದೆ. ಈ ಪೈಕಿ 69,097.00 ಕೋಟಿ ರೂ.ಗಳನ್ನು (ಶೇ.58.33) ಇದುವರೆಗೆ ಬಿಡುಗಡೆ ಮಾಡಲಾಗಿದೆ.
ಕೇಂದ್ರ ಮತ್ತು ರಾಜ್ಯಗಳ ನಡುವೆ ಹಾಗೂ ರಾಜ್ಯಗಳೊಳಗಿನ ತೆರಿಗೆ ಹಂಚಿಕೆ, ಸ್ಥಳೀಯ ಸರ್ಕಾರಗಳ ಅನುದಾನ, ವಿಪತ್ತು ನಿರ್ವಹಣಾ ಅನುದಾನದ ಹೊರತಾಗಿ, ವಿದ್ಯುತ್ ವಲಯ, ಡಿಬಿಟಿ ಅಳವಡಿಕೆ, ಘನತ್ಯಾಜ್ಯ ನಿರ್ವಹಣೆ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ರಾಜ್ಯಗಳಿಗೆ ಕಾರ್ಯಕ್ಷಮತೆ ಪ್ರೋತ್ಸಾಹಕ ಪರೀಕ್ಷೆ ಮತ್ತು ಶಿಫಾರಸುಗಳನ್ನು ಆಯೋಗದ ವರದಿ ಹೊಂದಿದೆ.
ಕೇಂದ್ರ ಸರ್ಕಾರವು 2020 ಜನವರಿ 30ರಂದು ಸಂಸತ್ತಿನಲ್ಲಿ ಮಂಡಿಸಿ, ಅಂಗೀಕರಿಸಿದೆ. ಪ್ರತಿ ತಿಂಗಳು ಬಿಡುಗಡೆಯಾದ ಅನುದಾನದ ರಾಜ್ಯವಾರು ವಿವರಗಳು ಮತ್ತು 2021-22 ರಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಒಟ್ಟು ಪಿಡಿಆರ್ಡಿ ಆದಾಯ ಕೊರತೆ ಅನುದಾನದ ಮೊತ್ತವನ್ನು ಹಣಕಾಸು ಆಯೋಗ ಶಿಫಾರಸ್ಸಿನ ನಂತರ ಪ್ರಕಟಿಸಲಾಗಿದೆ. (ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ)












Click it and Unblock the Notifications