ಮೋದಿ ಆಪ್ತ ಅದಾನಿ ಮೇಲೆ 'ಐಟಿ' ಬ್ರಹ್ಮಾಸ್ತ್ರ
ಅಹಮದಾಬಾದ್, ಮೇ.19: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಆಪ್ತ ವರ್ಗಕ್ಕೆ ಸೇರಿದ ಅದಾನಿ ಗ್ರೂಪ್ ಮೇಲೆ ಯುಪಿಎ ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಅಷ್ಟರಲ್ಲಿ ಆದಷ್ಟು ಪೆಟ್ಟು ಕೊಡುವ ಹುನ್ನಾರ ನಡೆದಿದೆ ಎಂಬ ಸುದ್ದಿ ಬಂದಿದೆ.
ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಒಂದು ದಿನ ಮೊದಲು ಅದಾನಿ ಸಮೂಹ ಸಂಸ್ಥೆ ವಿರುದ್ಧ 5,500 ಕೋಟಿ ರು ಶೋಕಾಸ್ ನೋಟಿಸ್ ಜಾರಿಗೊಳಿಸುವ ಆದೇಶಕ್ಕೆ ವಿತ್ತ ಸಚಿವ ಪಿ. ಚಿದಂಬರಂ ಸಹಿ ಹಾಕಿದ್ದರು. ಈಗ ಬಂಡವಾಳ ಸಾಧನಗಳ ಆಮದಿಗೆ ಸಂಬಂಧಿಸಿದಂತೆ ಅಧಿಕ ವೌಲ್ಯ ನಿಗದಿಗೊಳಿಸುವಿಕೆಯ ಆರೋಪದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ)ವು ನೀಡಿದ ನೋಟಿಸ್ ಆಧಾರವಾಗಿಟ್ಟುಕೊಂಡು ಮಾರುಕಟ್ಟೆ ನಿಯಂತ್ರಕ ಸೆಬಿ, ಜಾರಿ ನಿರ್ದೇಶನಾಲಯ(ED) ಹಾಗೂ ಆದಾಯ ತೆರಿಗೆ ಇಲಾಖೆ ಒಟ್ಟೊಟ್ಟಿಗೆ ಅದಾನಿ ಸಂಸ್ಥೆ ಮೇಲೆ ದಾಳಿಗೆ ಮುಂದಾಗಿವೆ.
ಆದಾನಿ ಗ್ರೂಪ್ 10,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಮೂಲಕ ದೇಶದ ಅತಿದೊಡ್ಡ ಖಾಸಗಿ ವಿದ್ಯುತ್ ಉತ್ಪಾದಕ ಕಂಪೆನಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಆದರೆ, ಬಂಡವಾಳ ಸಾಧನಗಳ ಆಮದಿಗೆ ಸಂಬಂಧಿಸಿದಂತೆ ಅಧಿಕ ವೌಲ್ಯ ನಿಗದಿಗೊಳಿಸುವಿಕೆಯಲ್ಲಿ ಅವ್ಯವಹಾರ ನಡೆದಿದೆ, ಕಸ್ಟಮ್ಸ್ ನಿಯಮ ಮೀರಿ ಯಂತ್ರಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ ಈ ಬಗ್ಗೆ ಉತ್ತರ ನೀಡಿ ಎಂದು ಗೌತಮ್ ಅದಾನಿ ಅವರಿಗೆ ನೋಟಿಸ್ ನಲ್ಲಿ ಪ್ರಶ್ನಿಸಲಾಗಿದೆ.

ಗೌತಮ್ ಆದಾನಿ ನೇತೃತ್ವದ ಮೂರು ಕಂಪೆನಿಗಳಾದ ಆದಾನಿ ಪವರ್ ಮಹಾರಾಷ್ಟ್ರ, ಆದಾನಿ ಪವರ್ ರಾಜಸ್ಥಾನ್ ಹಾಗೂ ಮಹಾರಾಷ್ಟ್ರ ಈಸ್ಟರ್ನ್ ಗ್ರಿಡ್ ಪವರ್ ಟ್ರಾನ್ಸ್ಮಿಶ್ಯನ್ ಕಂಪೆನಿಯ ವಿರುದ್ಧ ನೋಟಿಸ್ ಜಾರಿಗೊಳಿಸಲಾಗಿದೆ.
ಷೇರುಪೇಟೆಯಲಿ ಲಿಸ್ಟ್ ಆಗಿರುವ ಕಂಪನಿಗಳ ಅವ್ಯವಹಾರ ತನಿಖೆ ಮಾಡುವ ಅಧಿಕಾರವನ್ನು ಸೆಬಿ ಹೊಂದಿದೆ. ಮನಿ ಲಾಂಡ್ರಿಂಗ್, ವಿದೇಶಿ ಹಣಕಾಸು ವಿನಿಮಯ ಅವ್ಯವಹಾರ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಿದ್ಧವಾಗಿದೆ. ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿರುವ ಅದಾನಿ ಸಂಸ್ಥೆ, ಮೋದಿ ಅವರಿಗೆ ಆಪ್ತರಾಗಿರುವ ಕಾರಣ ಈ ನೋಟಿಸ್ ಜಾರಿಯಾಗಿದೆ ಎಂದಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ಮೋದಿ ಅವರನ್ನು ಟೀಕಿಸುತ್ತಾ, ರೈತರ ಜಮೀನನ್ನು ಕಡಿಮೆ ದರಕ್ಕೆ ಅದಾನಿ ಸಂಸ್ಥೆಗೆ ಮೋದಿ ಮಾರಿದ್ದಾರೆ ಎಂದು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಯಂತ್ರಗಳ ಖರೀದಿಗೆ ತೆರಿಗೆ ಕಟ್ಟಲಾಗಿದೆ. ಉತ್ಪಾದಕರು ರಫ್ತು ಮಾಡಿದ ಯಂತ್ರಗಳು ನೇರವಾಗಿ ಭಾರತ ತಲುಪುತ್ತದೆ. ಆದರೆ, ಇದಕ್ಕೆ ಸಂಬಂಧಿಸಿದ ಕಡತಗಳು ದುಬೈ, ಯುಎಇಯ ಇತರೆಗಳಲ್ಲಿ ಏಜೆನ್ಸಿ ಮೂಲಕ ಚೆಕ್ ಆಗಿ ಎರಡು ಇನ್ ವಾಯ್ಸ್ ಮೂಲಕ ತಲುಪುತ್ತದೆ. ಹೀಗಾಗಿ ಮೌಲ್ಯದಲ್ಲಿ ಹೆಚ್ಚು ಕಡಿಮೆಯಾಗಿರಲು ಸಾಧ್ಯ ಎಂದು ಗೌತಮ್ ಅದಾನಿ ವಿವರಿಸಿದ್ದಾರೆ.












Click it and Unblock the Notifications