ಕುಸಿದ ಗ್ರಾಹಕರ ವಿಶ್ವಾಸ, ಆರ್ಥಿಕತೆ ಬಗ್ಗೆ ಏನೆಂದುಕೊಳ್ತಾರೆ ಗೊತ್ತಾ?
ಗ್ರಾಹಕರಿಗೆ ದೇಶದ ಆರ್ಥಿಕತೆ ಬಗ್ಗೆ ಅಂಥ ಒಳ್ಳೆ ಅಭಿಪ್ರಾಯ ಇಲ್ಲ ಅಥವಾ ಅಗತ್ಯ ಇರುವಷ್ಟು ಉದ್ಯೋಗ ಸೃಷ್ಟಿಯೂ ಆಗುತ್ತಿಲ್ಲ. ಆದರೆ ವರ್ಷದಿಂದ ವರ್ಷಕ್ಕೆ ಪರಿಸ್ಥಿತಿ ಮಾತ್ರ ಸುಧಾರಿಸಿದೆ ಎಂಬ ನಂಬಿಕೆ ಅವರದು. ಸೆಪ್ಟೆಂಬರ್ ಕೊನೆಗೆ ಗ್ರಾಹಕರ ವಿಶ್ವಾಸದ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಮೀಕ್ಷೆ ಬಯಲು ಮಾಡಿದೆ.
ಅದರಲ್ಲಿ ಸಾಮಾನ್ಯ ಆರ್ಥಿಕ ಸನ್ನಿವೇಶದಲ್ಲಿ ಗ್ರಾಹಕರ ಗ್ರಹಿಕೆ ಹಾಗೂ ನಿರೀಕ್ಷೆಗಳೇನು, ಉದ್ಯೋಗದ ಪರಿಸ್ಥಿತಿ, ಒಟ್ಟಾರೆ ಹಣಕಾಸು ಸ್ಥಿತಿ ಹಾಗೂ ಅವರ ಆದಾಯ ಮತ್ತು ವೆಚ್ಚದ ಸನ್ನಿವೇಶ ಏನು ಎಂಬ ಬಗ್ಗೆ ತಿಳಿದುಬಂದಿದೆ. ಗ್ರಾಹಕರ ವಿಶ್ವಾಸದ ಸೂಚ್ಯಂಕವು ಹಿಂದಿನ ಜೂನ್ ನಲ್ಲಿ 98.3ರಷ್ಟು ಇದ್ದದ್ದು 94.8ಕ್ಕೆ ಕುಸಿದಿದೆ.
ಇನ್ನು ಮುಂದಿನ ಒಂದು ವರ್ಷಕ್ಕೆ ಎಷ್ಟಕ್ಕೆ ಏರಿಕೆ ಆಗಬಹುದು ಎಂಬ ನಿರೀಕ್ಷೆಯು ಕಳೆದ ಜೂನ್ ನಲ್ಲಿ 119.8 ಅಂಶಗಳಿದ್ದರೆ, ಈ ಸೆಪ್ಟೆಂಬರ್ ಗೆ ಅದು 121.1ಕ್ಕೆ ಏರಿಕೆ ಆಗಿದೆ. ಗ್ರಾಹಕರ ಗ್ರಹಿಕೆ ಪ್ರಕಾರ, ಸದ್ಯದ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಉದ್ಯೋಗದ ಸನ್ನಿವೇಶ ಚೆನ್ನಾಗಿಲ್ಲ.

ಮುಂದಿನ ವರ್ಷ ಆದಾಯ ಹೆಚ್ಚಾಗುವ ನಿರೀಕ್ಷೆ
ಆದರೆ, ಭವಿಷ್ಯದ ಆದಾಯ ಹಾಗೂ ದರ ಸ್ಥಿತಿಯ ಬಗ್ಗೆ ಆಶಾವಾದ ಇರಿಸಿಕೊಂಡಿದ್ದಾರೆ. ಸದ್ಯದ ಆರ್ಥಿಕ ಸ್ಥಿತಿಯು ಬಹು ಪಾಲು ಉದ್ಯೋಗದ ಸನ್ನಿವೇಶ ಹಾಗೂ ಮುಂಬರುವ ವರ್ಷಗಳಲ್ಲಿ ಹೇಗಿರುತ್ತದೆ ಎಂಬುದರ ಮೇಲೆ ನಿರ್ಧಾರ ಆಗಿರುತ್ತದೆ. ಹಿಂದಿನ ವರ್ಷಗಳಲ್ಲಿ ನಿರೀಕ್ಷೆ ಮಾಡಿದ ಮಟ್ಟಕ್ಕೆ ಮುಟ್ಟಲು ಸಾಧ್ಯವಾಗಿಲ್ಲ.

ಆದಾಯದಲ್ಲಿ ಹೆಚ್ಚಳ ಆಗಬಹುದು ಎಂಬ ಲೆಕ್ಕಾಚಾರ
ಸಮೀಕ್ಷೆಯಲ್ಲಿ ಪಾಲ್ಗೊಂಡ ಹಲವರು ದರಗಳ ಸನ್ನಿವೇಶದ ಬಗ್ಗೆ ಆಶಾವಾದಿಗಳಾಗಿಲ್ಲ. ಮುಂದಿನ ಒಂದು ವರ್ಷದಲ್ಲಿ ಸಣ್ಣ ಮಟ್ಟದ ಬದಲಾವಣೆ ಆಗಬಹುದು ಎಂಬ ಬಗ್ಗೆ ಮಾತ್ರ ತೆಳುವಾದ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಬಹುಪಾಲು ಮಂದಿಗೆ ಮುಂದಿನ ವರ್ಷ ತಮ್ಮ ಆದಾಯದಲ್ಲಿ ಹೆಚ್ಚಳ ಆಗುವ ಭರವಸೆ ಇದೆ.

ಮುಂಚಿನ ರೀತಿ ಖರ್ಚು ಮಾಡಲು ಹಿಂಜರಿಯುತ್ತಾರೆ
ಈ ಸಮೀಕ್ಷೆ ಪ್ರಕಾರವಾಗಿ ಗ್ರಾಹಕರಿಗೆ ಖರ್ಚು ಮಾಡುವ ವಿಚಾರದಲ್ಲಿ ಆಶಾವಾದ ಇಳಿದುಹೋಗಿದೆ. ಮುಂಚಿನಂತೆ ಬೇಕೋ-ಬೇಡವೋ ಹೇಗೆಂದರೆ ಹಾಗೆ ಖರ್ಚು ಮಾಡುವ ಮನಸ್ಥಿತಿಯಲ್ಲಿ ಇಲ್ಲ. ಅದರಲ್ಲೂ ಅಗತ್ಯ ಇಲ್ಲದ ವಸ್ತುಗಳ ಖರೀದಿ ಬೇಡವೇ ಬೇಡ ಎಂದುಕೊಳ್ಳುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

5,364 ಪ್ರತಿಕ್ರಿಯೆ ಪಡೆಯಲಾಗಿತ್ತು
ಅಂದಹಾಗೆ ಈ ಸಮೀಕ್ಷೆಯಲ್ಲಿ ಅಹಮದಾಬಾದ್, ಬೆಂಗಳೂರು, ಭೋಪಾಲ್, ಚೆನ್ನೈ, ದೆಹಲಿ, ಗುವಾಹತಿ, ಹೈದರಾಬಾದ್, ಜೈಪುರ್, ಕೋಲ್ಕತ್ತಾ, ಲಖನೌ, ಮುಂಬೈ, ಪಾಟ್ನಾ ಹಾಗೂ ತಿರುವನಂತಪುರಂನಲ್ಲಿ ಇರುವವರ ವಿವಿಧ ವಿಚಾರಗಳಿಗೆ ಸಂಬಂಧಿಸಿದ 5,364 ಪ್ರತಿಕ್ರಿಯೆ ಪಡೆಯಲಾಗಿತ್ತು.












Click it and Unblock the Notifications