ಏಪ್ರಿಲ್ 5ರಿಂದ ರಾಷ್ಟ್ರವ್ಯಾಪಿ ಅನಿರ್ದಿಷ್ಟಾವಧಿ ಲಾರಿ ಮುಷ್ಕರ
ಬೆಂಗಳೂರು ಮಾರ್ಚ್ 4: ''ಗಗನಕ್ಕೇರುತ್ತಿರುವ ಡೀಸೆಲ್ ಬೆಲೆ, 15 ವರ್ಷ ಹಳೆಯ ವಾಹನಗಳಿಗೆ ಗುಜರಿ ನೀತಿ ಅನ್ವಯ, ಮೋಟಾರು ಕಾಯ್ದೆ ಉಲ್ಲಂಘನೆಯ ದಂಡ ಹೆಚ್ಚಳ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಸಾರಿಗೆ ವಿರೋಧಿ ನೀತಿಗಳನ್ನು ಖಂಡಿಸಿ ಏ.5ರಿಂದ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ'' ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಬಿ ಚನ್ನಾರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಲಾಕ್ಡೌನ್ ಹಾಗೂ ಆರ್ಥಿಕ ಹಿಂಜರಿತದಿಂದ ಬೇಡಿಕೆ ಕಳೆದುಕೊಂಡಿರುವ ಸರಕು ಸಾಗಣೆ ವಲಯ, ಇಂಧನದ ಬೆಲೆಯೇರಿಕೆಯಿಂದ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ. ಕಳೆದ 6 ತಿಂಗಳ ಅವಧಿಯಲ್ಲಿ 20.42 ರೂ. ಗಳಿಗೆ ಏರಿಕೆಯಾಗಿದೆ.. ಇಂಧನ ಬೆಲೆಯೇರಿಕೆ ತಡೆಯುವಂತೆ ಹಾಗೂ ಸಾರಿಗೆ ವಿರೋಧಿ ನೀತಿಗಳನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಬರೆದ ಪತ್ರಗಳಿಗೆ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ಇಂದು ಲಾರಿ ಮಾಲೀಕರ ಸಂಘದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ'' ಎಂದರು.
15 ವರ್ಷ ಹಳೆಯದಾದ ವಾಹನಗಳಿಗೆ ಗುಜರಿ ನೀತಿ ಜಾರಿಗೊಳಿಸುವ ಸರ್ಕಾರದ ನಿರ್ಧಾರದಿಂದ ಕೇಂದ್ರ ಸರ್ಕಾರ ವಾಹನ ತಯಾರಿಕ ಕಂಪನಿಗಳ ಲಾಬಿಗೆ ಮಣಿಯುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಹಳೆಯ ವಾಹನಗಳಿಂದ ಪರಿಸರಕ್ಕೆ ಹಾನಿ
ಪಶ್ಚಿಮ ಬಂಗಾಳ ಉಚ್ಛ ನ್ಯಾಯಾಲಯ, ವಾಹನದ ಸ್ಥಿತಿಗತಿ ಅದರ ವಯಸ್ಸನ್ನು ನಿರ್ಧರಿಸುವುದಿಲ್ಲ ಎಂದು ತೀರ್ಪು ನೀಡಿದೆ. ಇದು ಸಮಯೋಚಿತ ತೀರ್ಪು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಾರಿಗೆ ವಾಹನಗಳ ಮೇಲೆ ನಿಗಾ ಇರಿಸಿ, ರಸ್ತೆಯಲ್ಲಿ ಸಂಚರಿಸಲು ಯೋಗ್ಯವಾಗಿದ್ದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಿದಲ್ಲಿ, ಹಳೆಯ ವಾಹನಗಳಿಂದ ಪರಿಸರಕ್ಕೆ ಹಾನಿಯಾಗುವುದಕ್ಕೆ ಸಹಜವಾಗಿಯೇ ಕಡಿವಾಣ ಬೀಳಲಿದೆ. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳದಿದ್ದಲ್ಲಿ, ಅನೇಕ ವಾಹನ ಮಾಲೀಕರಿಗೆ ತೊಂದರೆಯಾಗಲಿದೆ.
ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯ ದಂಡ
ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯ ದಂಡವನ್ನು ಕೇಂದ್ರ ಸರ್ಕಾರ ಮನಸೋಇಚ್ಛೆ ಹೆಚ್ಚಿಸಿದೆ. ಈ ಹಿಂದೆ ಇದ್ದ ನಿಯಮ ಉಲ್ಲಂಘನೆಗಳಿಗೆ 100ರೂ.ಗಳಿಂದ 200 ರೂ.ಗಳವರೆಗೂ ದಂಡ ವಿಧಿಸಲಾಗಿತ್ತು. ಆದರೆ ಈಗ ಇದನ್ನು 500 ರೂ.ಗಳಿಂದ 20,000ರವರೆಗೆ ರಸ್ತೆ ಸುರಕ್ಷತೆ ಹೆಸರಿನಲ್ಲಿ ಏರಿಕೆ ಮಾಡಿದೆ. ಇದನ್ನೇ ನೆಪವಾಗಿಟ್ಟುಕೊಂಡು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಲಾಖಾಧಿಕಾರಿಗಳು ಹೆಚ್ಚಿನ ಲಂಚವನ್ನು ಕೇಳುತ್ತಿದ್ದಾರೆ. ಇದರಿಂದ ನಮ್ಮ ಲಾರಿ ಮಾಲೀಕರಿಗೆ ಬಹಳ ಅನ್ಯಾಯವಾಗುತ್ತಿದೆ.
ವಾಹನಗಳ ಥರ್ಡ್ ಪಾರ್ಟಿ ಇನ್ಶ್ಯೂರೆನ್ಸ್ ಪ್ರೀಮಿಯಂ
ವಾಹನಗಳ ಥರ್ಡ್ ಪಾರ್ಟಿ ಇನ್ಶ್ಯೂರೆನ್ಸ್ ಪ್ರೀಮಿಯಂನ್ನು ಪ್ರತಿವರ್ಷ ಏರಿಕೆ ಮಾಡುತ್ತಿರುವುದರಿಂದ 2001ನೇ ಇಸವಿ ಯಲ್ಲಿ 1,250 ರೂ. ಇದ್ದ ಥರ್ಡ್ ಪಾರ್ಟಿ ಪ್ರೀಮಿಯಂ ಈಗ 2021 ರಲ್ಲಿ ರೂ.45,000 ರೂ. ದಿಂದ 50,000 ರೂ. ವರೆಗೂ ಏರಿಕೆ ಮಾಡಿರುವುದನ್ನು ಲಾರಿ ಮಾಲೀಕರು ತೀವ್ರವಾಗಿ ಖಂಡಿಸುತ್ತಿದ್ದಾರೆ ಎಂದರು.
ಅನಿವಾರ್ಯವಾಗಿ ಮುಷ್ಕರ ಹಮ್ಮಿಕೊಳ್ಳಲಾಗಿದೆ
ಸರ್ಕಾರ ತಮ್ಮ ಯಾವುದೇ ಬೇಡಿಕೆಗಳನ್ನು ಪರಿಗಣಿಸಿದೆ ಇರುವುದರಿಂದ ಅನಿವಾರ್ಯವಾಗಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಡೆಯಲು ಸರ್ಕಾರ ತಕ್ಷಣ ನಮ್ಮ ಬೇಡಿಕೆಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಯು. ಶ್ರೀನಿವಾಸ್, ಎನ್ ಶ್ರೀನಿವಾಸ್ ರಾವ್, ಗಾಯ್ಬುಸಾಬ್ ಹೊನ್ನಳ್, ಪ್ರಧಾನ ಕಾರ್ಯದರ್ಶಿ ಆರ್ ವಿ ಪ್ರಕಾಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.