2019ರೊಳಗೆ 15 ಲಕ್ಷ ಉದ್ಯೋಗ ಸೃಷ್ಟಿ: ದೇಶಪಾಂಡೆ
ಬೆಂಗಳೂರು, ನವೆಂಬರ್ 23: ದೇಶದಲ್ಲಿ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹಲವು ಪ್ರಥಮಗಳ ನಾಡು ಎನಿಸಿಕೊಂಡಿದೆ. ರಾಜ್ಯದಲ್ಲಿ 2019 ರ ಮಾರ್ಚ್ ಒಳಗೆ 15 ಲಕ್ಷ ಉದ್ಯೋಗವನ್ನು ಸೃಷ್ಟಿಸಲಾಗುವುದು ಎಂದು ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಅವರು ಗುರುವಾರದಂದು ಘೋಷಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ - 2017 ಎರಡು ದಿನಗಳ ಕಾರ್ಯಕ್ರಮವನ್ನು ಉದ್ಫಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹಲವು ಪ್ರಥಮಗಳ ನಾಡು ಆಗಿದ್ದು 1952 ರ ಮೇಕ್ ಇನ್ ಕರ್ನಾಟಕ ಯೋಜನೆಯನ್ನು ಜಾರಿಗೆ ತರಲಾಗಿತ್ತು ಹಾಗೂ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಹಲವು ಪ್ರಥಮ ನೀತಿ ನಿರೂಪಣೆಗಳನ್ನು ಜಾರಿಗೆ ತಂದ ಹೆಗ್ಗಳಿಗೆ ನಮ್ಮ ರಾಜ್ಯದ್ದಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆ ಅವರು ಹೇಳಿದರು.

ಕೈಗಾರಿಕೋದ್ಯಮಿಗಳ ಸ್ನೇಹಮಯಿ ರಾಜ್ಯ
ಕರ್ನಾಟಕ ಕೈಗಾರಿಕೋದ್ಯಮಿಗಳ ಸ್ನೇಹಮಯಿ ರಾಜ್ಯ. ದೇಶದಲ್ಲಿಯೇ ಅತ್ಯಂತ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಹಲವು ಕೈಗಾರಿಕೆಗಳನ್ನು ಹೊಂದಿರುವ ಏಕೈಕ ರಾಜ್ಯ ನಮ್ಮದು. ಕರ್ನಾಟಕದಲ್ಲಿ ಆವಿಷ್ಕರಿಸಿ, ಬಂಡವಾಳ ಹೂಡಿ ಅತಿ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಸಲು ಸರ್ಕಾರ ಕೈಗಾರಿಕೋದ್ಯಮಿಗಳಿಗೆ ಬೇಕಾದ ಅನುಕೂಲತೆಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ. ಬಲಿಷ್ಠ ಭವಿಷ್ಯದ ಭಾರತಕ್ಕೆ ಕರ್ನಾಟಕ ಬೆನ್ನೆಲುಬು ಆಗಲಿದೆ ಎಂದರು

15 ಲಕ್ಷ ಉದ್ಯೋಗವನ್ನು ಸೃಷ್ಟಿಸಲಾಗುವುದು
ರಾಜ್ಯದಲ್ಲಿ 2019 ರ ಮಾರ್ಚ್ ಒಳಗೆ 15 ಲಕ್ಷ ಉದ್ಯೋಗವನ್ನು ಸೃಷ್ಟಿಸಲಾಗುವುದು, ಯುವಕರಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ವೃದ್ಧಿಸುವುದಕ್ಕಾಗಿ ಕೌಶಲ್ಯ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗಿದ್ದು, 5 ಲಕ್ಷ ಯುವಕರಿಗೆ ತರಬೇತಿ ನೀಡಲಾಗುವುದು. ಯುವಕರು ಕೇವಲ ಉದ್ಯೋಗಿಗಳಾಗದೇ ಉದ್ಯೋಗಗಳನ್ನು ನೀಡುವ ಕೈಗಾರಿಕೋದ್ಯಮಿಗಳಾಗಬೇಕು ಎಂದು ಯುವಕರಿಗೆ ಕರೆ ನೀಡಿದರು.

ಕರ್ನಾಟಕ ಸರ್ಕಾರ ನೀತಿ
ಪ್ರತಿ ಕೈಗಾರಿಕೆಗೆ ಹಾಗೂ ಕೈಗಾರಿಕೆಗಳ ಪ್ರತಿ ಹಂತಕ್ಕೂ ಕರ್ನಾಟಕ ಸರ್ಕಾರ ನೀತಿಗಳನ್ನು ನಿರೂಪಿಸಿದ್ದು ದೇಶದಲ್ಲಿ ನಮ್ಮ ರಾಜ್ಯ ಹೊಂದಿರುವಷ್ಟು ಕೈಗಾರಿಕಾ ನೀತಿಗಳನ್ನು ಯಾವ ರಾಜ್ಯವು ಸಹ ಹೊಂದಿಲ್ಲ. ಮೈಸೂರು ಮಹಾರಾಜರ ಕಾಲದಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿ ಇಂದು ದೇಶದಲ್ಲಿಯೇ ರಾಜ್ಯವನ್ನು ಪ್ರಥಮಸ್ಥಾನದಲ್ಲಿ ತಂದು ನಿಲ್ಲಿಸಿದೆ.
ನವಕರ್ನಾಟಕ ನಿರ್ಮಾಣಕ್ಕೆ ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಹಲವು ಕೈಗಾರಿಕೆಗಳನ್ನು ಪ್ರಾರಂಭಿಸುವುದರ ಮುಖಾಂತರ ರಾಜ್ಯದ ಹಾಗೂ ದೇಶದ ಆರ್ಥಿಕ ವ್ಯವಸ್ಥೆಗೆ ತಮ್ಮದೇ ಆದಂತ ಕೊಡುಗೆಯನ್ನು ನೀಡಲು ಕೈಗಾರಿಕೋದ್ಯಮಿಗಳಿಗೆ ಸಚಿವರು ಕರೆ ನೀಡಿದರು.

ಜವಳಿ ಸಚಿವ ರುದ್ರಪ್ಪ ಲಮಾಣಿ
ಜವಳಿ ಸಚಿವ ರುದ್ರಪ್ಪ ಲಮಾಣಿ ಅವರು ಮಾತನಾಡಿ ರಾಜ್ಯ ಸರ್ಕಾರ 2017-18 ರ ಸಾಲಿನಲ್ಲಿ ಜಾರಿಗೆ ತಂದ ಜವಳಿ ನೀತಿ ಉದ್ದಿಮೆದಾರರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ. ಸ್ಥಳೀಯ ಸಂಪನ್ಮೂಲಗಳಿಗೆ ಅನುಗುಣವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದಲ್ಲಿ ರಾಜ್ಯಕ್ಕೂ, ಕೈಗಾರಿಕೆಗಳಿಗೂ ಹಾಗೂ ರಾಜ್ಯದ ಜನರಿಗೂ ಸಹಾಯಕವಾಗಲಿದೆ ಎಂದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಿ.ವಿ. ಪ್ರಸಾಧ್ ಸೇರಿದಂತೆ ರಾಜ್ಯ, ದೇಶ, ವಿದೇಶಗಳಿಂದ ಆಗಮಿಸಿದ್ದ ಹಲವು ಕೈಗಾರಿಕೋದ್ಯಮಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications