ಇನ್ಫಿ ತೊರೆದ ಪ್ರಮುಖ ಅಧಿಕಾರಿ ಮುರಳಿ ಕೃಷ್ಣ
ಬೆಂಗಳೂರು, ಜೂ.29: ವಿಶಾಲ್ ಸಿಕ್ಕ ಅವರು ಇನ್ಫೋಸಿಸ್ ನ ಸಿಇಒ ಆಗಿ ನೇಮಕಗೊಂಡ ಮೇಲೆ ಉನ್ನತ ಶ್ರೇಣಿಯ ಅಧಿಕಾರಿಯೊಬ್ಬರು ಸಂಸ್ಥೆ ತೊರೆದಿರುವ ಸುದ್ದಿ ಬಂದಿದೆ. ಇನ್ಫೋಸಿಸ್ ನ ಉಪಾಧ್ಯಕ್ಷ, ಕಂಪ್ಯೂಟರ್ ಹಾಗೂ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥ ಕೆ ಮುರಳಿಕೃಷ್ಣ ಅವರು ಸಂಸ್ಥೆಯಿಂದ ಹೊರನಡೆದಿದ್ದಾರೆ.
ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ನಲ್ಲಿ ಎನ್ ಆರ್ ನಾರಾಯಣಮೂರ್ತಿ ಪುನರಾಗಮನ ನಂತರ ಇದು 13ನೇ ಹಿರಿಯ ಅಧಿಕಾರರೊಬ್ಬರ ನಿರ್ಗಮನವಾಗಿದೆ. ನಾರಾಯಣ ಮೂರ್ತಿ ಅವರು ತಮ್ಮ ಅವಧಿಯಲ್ಲಿ ಇನ್ಫೋಸಿಸ್ ಸಂಸ್ಥೆಯನ್ನು ಮತ್ತೆ ಅಭಿವೃದ್ಧಿ ಪಥಕ್ಕೆ ತಂದು ಟಿಸಿಎಸ್ ಹಾಗೂ ಎಚ್ ಸಿಎಲ್ ಪ್ರತಿಸ್ಪರ್ಧೆಗೆ ತಕ್ಕ ಉತ್ತರ ನೀಡಿದ್ದರು. ಜೂ.14 ರಂದು ನಾರಾಯಣ ಮೂರ್ತಿ ಅವರು ತಮ್ಮ ಹುದ್ದೆಯನ್ನು ತೊರೆದರು.

1984ರಲ್ಲಿ ಇನ್ಫೋಸಿಸ್ ಸೇರಿದ ಮುರಳಿ ಕೃಷ್ಣ ಅವರು ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಯುಎಸ್, ಮಧ್ಯಪ್ರಾಚ್ಯ ದೇಶಗಳಲ್ಲಿ ಸಂಸ್ಥೆಯ ಔನ್ನತ್ಯಕ್ಕೆ ಕಾರಣರಾಗಿದ್ದರು. 2007ರಲ್ಲಿ ಕಂಪ್ಯೂಟರ್ ಹಾಗೂ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥರಾಗುವುದಕ್ಕೂ ಮುನ್ನ ತಂತ್ರಜ್ಞಾನ ಸೌಲಭ್ಯ ಒದಗಿಸುವ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ಇತ್ತೀಚೆಗೆ ಜಾಗತಿಕ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಪ್ರಸಾದ್ ತ್ರಿಕೂಟಂ ಅವರು ಸಂಸ್ಥೆ ತೊರೆದಿದ್ದರು. ನಂತರ ವಿಶಾಲ್ ಸಿಕ್ಕ ಅವರು ಹೊಸ ಸಿಇಒ ಆಗಿ ನೇಮಕಗೊಂಡಿದ್ದರು. (ಪಿಟಿಐ)












Click it and Unblock the Notifications