ಇನ್ಫಿ ತೊರೆದ ರಂಗನಾಥ್ : ತುಂಬಲಾಗದ ನಷ್ಟ ಎಂದ ಮೂರ್ತಿ
ಬೆಂಗಳೂರು, ಆಗಸ್ಟ್ 18 : ಇನ್ಫೋಸಿಸ್ ಕಂಪನಿಯ ಚೀಫ್ ಫೈನಾನ್ಶಿಯಲ್ ಆಫೀಸರ್ (CFO) ಆಗಿದ್ದ ಎಂ. ಡಿ. ರಂಗನಾಥ್ ಅವರು ತಮ್ಮ ಹುದ್ದೆಗೆ ಶನಿವಾರ ರಾಜೀನಾಮೆ ನೀಡಿದ್ದು, ನಿರ್ದೇಶಕ ಮಂಡಳಿ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ.
"ಮೂರು ವರ್ಷಗಳ ಕಾಲ ಸಿಎಫ್ಓ ಆಗಿದ್ದಲ್ಲದೆ, 18 ವರ್ಷಗಳ ಕಾಲ ಇನ್ಫೋಸಿಸ್ ನಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂಸ್ಥೆಗೆ ನಾನು ತುಂಬಾ ಆಭಾರಿಯಾಗಿದ್ದೇನೆ. ಮುಂದೆ ನಾನು ಇತರ ಕ್ಷೇತ್ರಗಳಲ್ಲಿ ನನ್ನ ವೃತ್ತಿ ಜೀವನವನ್ನು ಮುಂದುವರಿಸಲಿದ್ದೇನೆ" ಎಂದು ರಾಜೀನಾಮೆ ಸಲ್ಲಿಸಿದ ನಂತರ ರಂಗನಾಥ್ ಹೇಳಿದ್ದಾರೆ.
ಬೆಂಗಳೂರಿನ ಇನ್ಫೋಸಿಸ್ಗೆ ಸಿಲ್ವರ್ ವಿನ್ನರ್- ಜಾಗತಿಕ ಪ್ರಶಸ್ತಿ
ಕಳೆದ ಮೂರು ವರ್ಷಗಳಲ್ಲಿ, ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲಿ ನಾವು ಕಂಪನಿಯ ಹಣಕಾಸು ಸ್ಥಿತಿಯನ್ನು ಸುಧಾರಿಸಿದ್ದೇವೆ, ಅತ್ಯುತ್ತಮ ಮಟ್ಟವನ್ನು ಕಾದುಕೊಂಡಿದ್ದೇವೆ ಮತ್ತು ವಿಶ್ವದರ್ಜೆಯ ಹಣಕಾಸು ತಂಡವನ್ನು ಕಟ್ಟಿದ್ದೇವೆ, ಸ್ಪರ್ಧಾತ್ಮಕವಾಗಿ ಬಲಿಷ್ಠರಾಗಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಅವರು ನುಡಿದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮಂಡಳಿಯ ಅಧ್ಯಕ್ಷ ನಂದನ್ ನಿಲೇಕಣಿ ಅವರು, ಇನ್ಫೋಸಿಸ್ ನ ಬೆಳವಣಿಗೆಯಲ್ಲಿ ಮತ್ತು ಯಶಸ್ಸಿನಲ್ಲಿ ಕಳೆದ 18 ವರ್ಷಗಳಲ್ಲಿ ರಂಗ ಅವರು ಪ್ರಧಾನ ಪಾತ್ರ ವಹಿಸಿದ್ದಾರೆ. ತರಹೇವಾರಿ ಜವಾಬ್ದಾರಿಗಳನ್ನು ಅವರು ನಿಭಾಯಿಸಿದರೂ ಎಲ್ಲದರಲ್ಲಿಯೂ ಉತ್ತಮ ಫಲಿತಾಂಶ ತಂದುಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಇನ್ಫಿ Q1 ವರದಿ ಪರಿಣಾಮ, ಷೇರುಗಳು ಶೇ 6ರಷ್ಟು ಏರಿಕೆ
ಕಳೆದ 18 ವರ್ಷಗಳಲ್ಲಿ ರಂಗನಾಥ್ ಅವರು ಇನ್ಫೋಸಿಸ್ ನ ಲೀಡರ್ಶಿಪ್ ತಂಡದಲ್ಲಿ ಪ್ರಧಾನ ಪಾತ್ರ ವಹಿಸಿದ್ದು, ಸಲಹೆ, ಹಣಕಾಸು, ಸ್ಟ್ರಾಟಜಿ, ರಿಸ್ಕ್ ಮ್ಯಾನೇಜ್ಮೆಂಟ್ ವಿಭಾಗಗಳಲ್ಲಿ ನಿರ್ದೇಶಕ ಮಂಡಳಿ ಮತ್ತು ಇತರ ಸಮಿತಿಗಳ ಜೊತೆ ಕೆಲಸ ನಿರ್ವಹಿಸಿದ್ದಾರೆ. ಅವರು ರಾಜೀನಾಮೆ ನೀಡಿದ್ದರು, ಅವರ ಸೇವೆ 2018ರ ನವೆಂಬರ್ 16ರವಗೆ ಲಭ್ಯವಿರಲಿದೆ.
ಕಂಪನಿಗೆ ತುಂಬಲಾಗದ ನಷ್ಟ : ಸಿಎಫ್ಓ ಎಂಡಿ ರಂಗನಾಥ್ ಅವರು ಕಂಪನಿಯನ್ನು ತೊರೆಯುತ್ತಿರುವುದು, ಇಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ, ಇನ್ಫೋಸಿಸ್ ಗೆ ತುಂಬಲಾಗದ ನಷ್ಟ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಇನ್ಫೋಸಿಸ್ Q1 ವರದಿ, ಅಚ್ಚರಿಯ ಬೋನಸ್ ಘೋಷಣೆ ಲಾಭ!
ರಂಗನಾಥ್ ಅವರನ್ನು 'ಭಾರತ ಕಂಡ ಅತ್ಯುತ್ತಮ ಮುಖ್ಯ ಹಣಕಾಸು ಅಧಿಕಾರಿ' ಮತ್ತು 'ವಿಶಿಷ್ಯ ವ್ಯಕ್ತಿ' ಎಂದು ಬಣ್ಣಿಸಿರುವ ನಾರಾಯಣ ಮೂರ್ತಿ ಅವರು, ಕಂಪನಿಯ ಎಲ್ಲ ಪ್ರಮುಖ ಪಾಲುದಾರರು, ಗ್ರಾಹಕರು, ಉದ್ಯೋಗಿಗಳ ಆಶೋತ್ತರಗಳು, ಹಣಕಾಸು, ಹೂಡಿಕೆ, ಆಡಳಿತ ಮತ್ತು ಕಾನೂನಿನ ಬಗ್ಗೆ ಚೆನ್ನಾಗಿ ಅರಿತಿದ್ದರು. ಉತ್ತಮ ಸಮಾಜ ಕಟ್ಟುವಲ್ಲಿ ವ್ಯಾಪಾರಕ್ಕಿರುವ ಪಾತ್ರವನ್ನು ಕೂಡ ಬಲ್ಲವರಾಗಿದ್ದರು ಎಂದಿದ್ದಾರೆ.