ಷೇರು ಪೇಟೆಯಲ್ಲಿ ಕೊಚ್ಚಿಹೋಯಿತು ಹೂಡಿಕೆದಾರರ 2.72 ಲಕ್ಷ ಕೋಟಿ ರುಪಾಯಿ
ನವದೆಹಲಿ, ಸೆಪ್ಟೆಂಬರ್ 18: ಸೋಮವಾರ ಹಾಗೂ ಮಂಗಳವಾರ ಎರಡೇ ದಿನದಲ್ಲಿ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು 2.72 ಲಕ್ಷ ಕೋಟಿ ರುಪಾಯಿಯನ್ನು ಕಳೆದುಕೊಂಡಿದ್ದಾರೆ. ಎರಡು ದಿನಗಳಲ್ಲೇ ಸೆನ್ಸೆಕ್ಸ್ ಸೂಚ್ಯಂಕವು 800 ಅಂಶಗಳಷ್ಟು ಕುಸಿತ ಕಂಡಿದೆ. ಮಂಗಳವಾರ ಸೆನ್ಸೆಕ್ಸ್ 295 ಅಂಶಗಳಷ್ಟು ಕುಸಿದು, ದಿನಾಂತ್ಯಕ್ಕೆ 37,290.67 ಅಂಶಕ್ಕೆ ತಲುಪಿತು.
ಜಾಗತಿಕ ಮಟ್ಟದಲ್ಲಿ ನಡೆದಿರುವ (ಅಮೆರಿಕ ಹಾಗೂ ಚೀನಾ ಮಧ್ಯೆ) ವ್ಯಾಪಾರದ ಕದನ, ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆಯಿಂದ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಸೋಮವಾರದಂದು ಸಹ ರುಪಾಯಿ ಮೌಲ್ಯ ಕುಸಿತ ಹಾಗೂ ಇತರ ಅಂಶಗಳ ಪ್ರಭಾವದಿಂದಾಗಿ ಸೆನ್ಸೆಕ್ಸ್ 505 ಅಂಶಗಳಷ್ಟು ಇಳಿಕೆ ಕಂಡಿತ್ತು.
ಬಿಎಸ್ ಇಯಲ್ಲಿನ ಲಿಸ್ಟಡ್ ಕಂಪೆನಿ ಷೇರುಗಳ (ಮಧ್ಯಮ ಗಾತ್ರದ ಬಂಡವಾಳ ಹೊಂದಿರುವ ಕಂಪೆನಿಗಳು) ಬಂಡವಾಳ ಮೌಲ್ಯವು ಶುಕ್ರವಾರದಿಂದ ಈಚೆಗೆ 2,72,549.15 ಕೋಟಿಯಷ್ಟು ಕರಗಿ, 1,53,64,470 ಕೋಟಿ ತಲುಪಿದೆ. "ತೈಲ ಬೆಲೆ ಏರಿಕೆ ಆಗುತ್ತಿರುವುದರಿಂದ ಮಾರಾಟ ಒತ್ತಡ ಹೆಚ್ಚಾಗಿದೆ" ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಡುತ್ತಾರೆ.

140ರಷ್ಟು ಷೇರುಗಳು 52 ವಾರಗಳ ಕನಿಷ್ಠ ಮಟ್ಟಕ್ಕೆ
ನಷ್ಟ ಹೊಂದಿದ ಷೇರುಗಳ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂದಿದೆ. ಆ ನಂತರ ಬಜಾಜ್ ಆಟೋ ಮತ್ತು ಆಕ್ಸಿಸ್ ಬ್ಯಾಂಕ್ ಇತರ ಷೇರುಗಳಿವೆ. ಬಿಎಸ್ ಇಯಲ್ಲಿರುವ 1805 ಕಂಪೆನಿ ಷೇರುಗಳಲ್ಲಿ 881 ಕಂಪೆನಿ ಷೇರುಗಳು ಏರಿಕೆ ಕಂಡಿದ್ದರೆ, 162 ಇಳಿಕೆಯಾಗಿವೆ. ಇನ್ನು 140ರಷ್ಟು ಷೇರುಗಳು 52 ವಾರಗಳ ಕನಿಷ್ಠ ಮಟ್ಟಕ್ಕೆ ತಲುಪಿವೆ.

ಬ್ಯಾಂಕ್ ಗಳ ವಿಲೀನ ಪ್ರಸ್ತಾವದ ಪ್ರಭಾವ
ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್ ವಿಲೀನದ ಪ್ರಸ್ತಾವವನ್ನು ಸೋಮವಾರ ಕೇಂದ್ರ ಸರಕಾರ ಮಾಡಿತ್ತು. ಅದರ ಪರಿಣಾಮ ಆದಂತೆ ಸಾರ್ವಜನಿಕ ಸ್ವಾಮ್ಯದ ಬಹುತೇಕ ಬ್ಯಾಂಕ್ ಗಳು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿವೆ. ಅದರಲ್ಲೂ ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತರ ಷೇರುಗಳು ನಷ್ಟ ಕಂಡಿವೆ.

ರುಪಾಯಿ ಮೌಲ್ಯ ಕುಸಿತ ಸೇರಿದಂತೆ ನಾನಾ ಅಂಶಗಳ ಪ್ರಭಾವ
ಬ್ಯಾಂಕಿಂಗ್ ಷೇರುಗಳು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿರುವುದು ನಿಜ. ಹಾಗಂತ ಈಗಲೇ ಖರೀದಿಗೆ ಮುಗಿಬೀಳುವುದು ಆತುರ ಆಗುತ್ತದೆ. ಸದ್ಯದ ಷೇರು ಮಾರುಕಟ್ಟೆ ಮೇಲೆ ರುಪಾಯಿ ಮೌಲ್ಯ ಕುಸಿತ, ಕಚ್ಚಾ ತೈಲ ಬೆಲೆ ಏರಿಕೆ, ವಿದೇಶಿ ಹೂಡಿಕೆದಾರರು ಬಂಡವಾಳ ಹಿಂತೆಗೆದುಕೊಳ್ಳುತ್ತಿರುವುದು ಸೇರಿದಂತೆ ನಾನಾ ಅಂಶಗಳು ಪ್ರಭಾವ ಬೀರಿವೆ.

ಉತ್ತಮ ಷೇರುಗಳನ್ನು ಸಣ್ಣ ಪ್ರಮಾಣದಲ್ಲಿ ಖರೀದಿಸಬಹುದು
ವಿಜಯಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದಂಥ ಷೇರುಗಳನ್ನು ಸಣ್ಣ ಪ್ರಮಾಣದಲ್ಲಿ ಖರೀದಿ ಆರಂಭಿಸಬಹುದು. ಉದಾಹರಣೆಗೆ ನೂರು ಷೇರು ಖರೀದಿಸುವ ಉದ್ದೇಶ ಇದ್ದರೆ ಹತ್ತು-ಹದಿನೈದರಿಂದ ಆರಂಭಿಸಿದರೆ ಉತ್ತಮ. ಸಣ್ಣ ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ಇರಬೇಕು ಎಂಬ ಮಾತನ್ನು ಒನ್ಇಂಡಿಯಾ ಕನ್ನಡದ ಜತೆಗೆ ಹಂಚಿಕೊಂಡರು ಷೇರು ದಲ್ಲಾಳಿಗಳು ಹಾಗೂ ಅಂಕಣಕಾರರಾದ ಕೆ.ಜಿ.ಕೃಪಾಲ್.












Click it and Unblock the Notifications