ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ ಕೇಸ್: ಪ್ರಮುಖ ಆರೋಪಿಗೆ ಜಾಮೀನು
ಮುಂಬೈ, ಮಾರ್ಚ್ 26: ಸರಿ ಸುಮಾರು 3,250 ಕೋಟಿ ರು ಮೌಲ್ಯದ ಐಸಿಐಸಿಐ -ವಿಡಿಯೋಕಾನ್ ಸಾಲ ಅವ್ಯವಹಾರ ಪ್ರಕರಣದ ಆರೋಪಿ ದೀಪಕ್ ಕೊಚ್ಚಾರ್ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚಾರ್ ಅವರ ಪತಿ ದೀಪಕ್ ಕೊಚ್ಚಾರ್ ಅವರಿಗೆ 3 ಲಕ್ಷ ರೂಪಾಯಿಯ ವೈಯಕ್ತಿಕ ಬಾಂಡ್ ಮತ್ತು ಭದ್ರತೆ ಒದಗಿಸುವಂತೆ ಸೂಚಿಸಿ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಪಿ ಡಿ ನಾಯಕ್ ಅವರು ಜಾಮೀನಿಗೆ ಸಮ್ಮತಿಸಿದ್ದಾರೆ.
ಪಾಸ್ಪೋರ್ಟ್ ಅನ್ನು ಸಲ್ಲಿಸಬೇಕು ಹಾಗೂ ತನಿಖೆಗೆ ಸಹಕಾರಿಸಬೇಕು ಎಂದು ಸೂಚಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್ಎ) ಅಡಿ ಬರುವ ಪ್ರಕರಣಗಳನ್ನು ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯ ಪ್ರಕರಣದ ಅರ್ಹತೆಯ ಆಧಾರದಲ್ಲಿ ಕಳೆದ ನವೆಂಬರ್ನಲ್ಲಿ ಜಾಮೀನು ನೀಡಲು ನಿರಾಕರಿಸಿತ್ತು. ನಂತರ ದೀಪಕ್ ಕೊಚ್ಚಾರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಪ್ರಕರಣದ ಪ್ರಮುಖ ಆರೋಪಿಗಳಾದ ಚಂದಾ ಕೊಚ್ಚಾರ್, ಅವರ ಪತಿ ದೀಪಕ್ ಕೊಚ್ಚಾರ್ ಹಾಗೂ ವಿಡಿಯೋಕಾನ್ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್ ಅವರ ವಿಚಾರಣೆ ಇನ್ನು ಜಾರಿಯಲ್ಲಿದೆ.
ಬ್ಯಾಂಕ್ ನ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋಕಾನ್ ಗ್ರೂಪ್ ಗೆ ಸುಮಾರು 3,250 ಕೋಟಿರೂ.ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಅವ್ಯವಹಾರದ ಹಗರಣ ಇದಾಗಿದೆ. ಐಸಿಐಸಿಐನ ಮಾಜಿ ಎಂಡಿ ಚಂದಾ ಕೊಚ್ಚಾರ್ ಹಾಗೂ ಕುಟುಂಬಕ್ಕೆ ಕಿಕ್ ಬ್ಯಾಕ್ ರೂಪದಲ್ಲಿ 500 ಕೋಟಿ ರು ಗೂ ಅಧಿಕ ಮೊತ್ತ ಸಿಕ್ಕಿದೆ. ಇದು ಸದ್ಯದ ಲೆಕ್ಕಾಚಾರವಾಗಿದ್ದು, ಕಿಕ್ ಬ್ಯಾಕ್ ಮೊತ್ತ ಇನ್ನು ಅಧಿಕವಾಗಿರುವ ಸಾಧ್ಯತೆಯಿದೆ ಎಂದು ಜಾರಿ ನಿರ್ದೇಶನಾಲಯವು ಹೇಳಿದೆ.
ಧೂತ್ ಹಾಗೂ ಇದೇ ಚಂದಾ ಕೊಚ್ಚರ್ ಪತಿ ದೀಪಕ್ ಕೊಚ್ಚರ್ ಮತ್ತಿಬ್ಬರು ಸಂಬಂಧಿಕರ ಜತೆ ಸೇರಿ 2008ರಲ್ಲಿ ಆರಂಭಿಸಿದ್ದ ಕಂಪೆನಿ. ಆ ನಂತರ ಈ ಕಂಪೆನಿಯ ಮಾಲೀಕತ್ವವನ್ನು ಕೊಚ್ಚರ್ ಗೆ ಸೇರಿದ ಟ್ರಸ್ಟ್ ಗೆ ಹಸ್ತಾಂತರಿಸಲಾಗಿದೆ. ಈ ಪ್ರಕ್ರಿಯೆ ನಡೆಯುವ ಆರು ತಿಂಗಳ ಮುಂಚೆ ಐಸಿಐಸಿಐ ಬ್ಯಾಂಕ್ ನಿಂದ ವಿಡಿಯೋಕಾನ್ ಗ್ರೂಪ್ ಗೆ 3,250 ಕೋಟಿ ರುಪಾಯಿ ಸಾಲ ಮಂಜೂರಾಗಿದ್ದು, 2017ರಲ್ಲಿ ಆ ಸಾಲದ ಪೈಕಿ ಹತ್ತಿರ ಹತ್ತಿರ 2,810 ಕೋಟಿ ರುಪಾಯಿಯನ್ನು ನಾನ್ ಪರ್ಫಾಮಿಂಗ್ ಅಸೆಟ್ (ಎನ್ ಪಿಎ) ಎಂದು ಘೋಷಿಸಿದ್ದು, ಮರು ಪಾವತಿಸಿಲ್ಲ ಎಂದು ಆರೋಪಿಸಲಾಗಿತ್ತು.