ಜಗತ್ತಿನಲ್ಲೇ 3ನೇ ಅತಿದೊಡ್ಡ ಆರ್ಥಿಕತೆ ಆಗಲಿದೆ ಭಾರತ ಎಂದ ಅಮಿತ್ ಶಾ
ನವದೆಹಲಿ, ಸೆಪ್ಟೆಂಬರ್ 13: ಭಾರತವು ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ಸಹಕಾರಿ ಕ್ಷೇತ್ರವು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸೆಪ್ಟೆಂಬರ್ 12-15ರ ಅವಧಿಯಲ್ಲಿ ಇಂಡಿಯಾ ಎಕ್ಸ್ಪೋ ಸೆಂಟರ್ ಮತ್ತು ಮಾರ್ಟ್ನಲ್ಲಿ ಆಯೋಜಿಸಲಾಗಿದ್ದ ಇಂಟರ್ನ್ಯಾಷನಲ್ ಡೈರಿ ಫೆಡರೇಶನ್ ವರ್ಲ್ಡ್ ಡೈರಿ ಶೃಂಗಸಭೆ (ಐಡಿಎಫ್ ಡಬ್ಲ್ಯುಡಿಎಸ್) 2022ರಲ್ಲಿ ಅಮಿತ್ ಶಾ ಮಾತನಾಡಿದರು. 2014ರಲ್ಲಿ ಭಾರತವು ವಿಶ್ವದ 11ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಈಗ ಅದು ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ನಾವು ಮೂರನೇ ಸ್ಥಾನಕ್ಕೆ ತಲುಪುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಸಚಿವರು ಹೇಳಿದರು.
ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ಹಿರಿಯ ನಾಯಕರುಗಳಿಗೆ ಹೊಸ ಜವಾಬ್ದಾರಿ: 2024ರ ಪ್ಲಾನ್
ಭಾರತದಲ್ಲಿ ಹೆಚ್ಚುತ್ತಿರುವ ದೇಶೀಯ ಬೇಡಿಕೆಯನ್ನು ಪೂರೈಸಲು ಮತ್ತು ಬಡ ರಾಷ್ಟ್ರಗಳಿಗೆ ಸರಬರಾಜು ಮಾಡಲು ಹಾಲು ಉತ್ಪಾದನೆಯನ್ನು ಹೆಚ್ಚಿಸುವಂತೆ ಡೈರಿ ಉದ್ಯಮವನ್ನು ಸಚಿವರು ಕೇಳಿದರು. ಹಾಲು ಸಂಸ್ಕರಣೆಗೆ ಬಳಸುವ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಉದ್ಯಮವು ಸ್ವಾವಲಂಬಿಯಾಗುವಂತೆ ಉತ್ತೇಜಿಸಿದರು.
2 ಲಕ್ಷ ಹೊಸ ಡೈರಿ ಸಹಕಾರಿ ಸಂಘ:
ಗೃಹ ಸಚಿವರೂ ಆಗಿರುವ ಅಮಿತ್ ಶಾ, 2024ರ ಸಾರ್ವತ್ರಿಕ ಚುನಾವಣೆಗೆ ಮೊದಲು ಗ್ರಾಮ ಮಟ್ಟದಲ್ಲಿ 2 ಲಕ್ಷ ಹೊಸ ಡೈರಿ ಸಹಕಾರಿ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಸಹಾಯ ಮಾಡುತ್ತದೆ ಎಂದು ಘೋಷಿಸಿದರು. ಹೈನುಗಾರಿಕೆ ಉದ್ಯಮವು ವೃತ್ತಿಪರತೆ, ಇತ್ತೀಚಿನ ತಂತ್ರಜ್ಞಾನ, ಗಣಕೀಕರಣ ಮತ್ತು ಡಿಜಿಟಲ್ ಪಾವತಿಯನ್ನು ದೊಡ್ಡ ರೀತಿಯಲ್ಲಿ ಅಳವಡಿಸಿಕೊಳ್ಳುವಂತೆ ಕೇಳಿಕೊಂಡರು, ಇಲ್ಲದಿದ್ದರೆ ಮುಂದೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮುನ್ನೆಚ್ಚರಿಕೆ ನೀಡಿದರು.
ಸಹಕಾರಿ ಕ್ಷೇತ್ರದ ಕೊಡುಗೆ ಬಗ್ಗೆಯೂ ಚರ್ಚೆ:
ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆಯ ಬಗ್ಗೆಯೂ ಸಹ ಚರ್ಚಿಸಲಾಗುವುದು. 48 ವರ್ಷಗಳ ಅಂತರದ ನಂತರ ಶೃಂಗಸಭೆಯನ್ನು ಆಯೋಜಿಸಲಾಗಿದ್ದು, ದೇಶವು ಈಗ ಹಾಲು ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ ಮತ್ತು ರಫ್ತುದಾರ ಕೂಡ ಆಗಿದೆ ಎಂದರು. ಈ ವಲಯದಲ್ಲಿ ತೊಡಗಿರುವ ಡೈರಿ ಸಹಕಾರಿ ಸಂಸ್ಥೆಗಳು ಮತ್ತು ಕಾರ್ಪೊರೇಟ್ಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಪ್ರಯತ್ನಿಸಿದರು.
ಅಪೌಷ್ಟಿಕತೆ ವಿರುದ್ಧ ಹೋರಾಡುವಲ್ಲಿ ಡೈರಿ ಸಹಕಾರ ಸಂಘದ ಪಾತ್ರ:
ಮಹಿಳಾ ಸಬಲೀಕರಣದಲ್ಲಿ ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡುವಲ್ಲಿ ಡೈರಿ ಸಹಕಾರ ಸಂಘಗಳು ಮಹತ್ವದ ಪಾತ್ರವನ್ನು ವಹಿಸಿವೆ. ಸಹಕಾರ ಕ್ಷೇತ್ರ ಮತ್ತು ಡೈರಿ ಸಹಕಾರಿ ಸಂಘಗಳು ಗ್ರಾಮೀಣಾಭಿವೃದ್ಧಿಯಲ್ಲಿ ಸಾಕಷ್ಟು ಕೆಲಸ ಮಾಡಿವೆ. ನೈಸರ್ಗಿಕ ಕೃಷಿಯನ್ನು ಜೀವನಾಡಿಯಾಗಿ ಮಾಡಿಕೊಳ್ಳುವ ಅಗತ್ಯವಿದೆ. ಇದು ಜನರ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಅಮಿತ್ ಶಾ ಸಲಹೆ ನೀಡಿದರು.
ಸಾವಯವ ಕೃಷಿ ಮತ್ತು ರಫ್ತು ಉತ್ತೇಜನ:
ಭಾರತದಲ್ಲಿ ಸಾವಯವ ಕೃಷಿ ಮತ್ತು ರಫ್ತು ಉತ್ತೇಜನಕ್ಕಾಗಿ ಮೂರು ಬಹು ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಸಚಿವ ಅಮಿತ್ ಶಾ ಘೋಷಿಸಿದರು. ಈ ತಿಂಗಳ ಅಂತ್ಯದ ವೇಳೆಗೆ ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ಅಮುಲ್ ರಫ್ತು ಕೇಂದ್ರವನ್ನು ಸ್ಥಾಪಿಸಲಿದೆ ಎಂದು ಅಮಿತ್ ಶಾ ಹೇಳಿದರು. ವಾರ್ಷಿಕ ವಹಿವಾಟು 60,000 ಕೋಟಿ ತಲುಪಿರುವ ಅಮುಲ್ನ ಯಶೋಗಾಥೆಯನ್ನು ಸಚಿವರು ಹಂಚಿಕೊಂಡರು. ಹಾಲಿನ ಚಿಲ್ಲರೆ ಬೆಲೆಯಲ್ಲಿ ಪ್ರಪಂಚದಲ್ಲಿ ಶೇ.40-45 ಪ್ರತಿಶತದಷ್ಟು ರೈತರಿಗೆ ಹೋದರೆ, ಭಾರತದಲ್ಲಿ ಮಾತ್ರ ಶೇ.77 ಪ್ರತಿಶತದಷ್ಟು ರೈತರಿಗೆ ರವಾನೆಯಾಗುತ್ತದೆ ಎಂದು ಅಮಿತ್ ಶಾ ಉಲ್ಲೇಖಿಸಿದರು.
ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಅವಕಾಶ:
ಉತ್ತರ ಪ್ರದೇಶದಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಬಹುದೊಡ್ಡ ಅವಕಾಶವಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಏಳಿಗೆಗಾಗಿ ಸಹಕಾರಿ ಮತ್ತು ಹೈನುಗಾರಿಕೆ ಕ್ಷೇತ್ರಗಳನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಹೈನುಗಾರಿಕೆ ಕ್ಷೇತ್ರವು ರೈತರಿಗೆ ಜೀವನೋಪಾಯದ ಜೊತೆಗೆ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಒಕ್ಕೂಟದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಪರಶೋತ್ತಮ್ ರೂಪಾಲಾ ಅವರು ಸಹಕಾರಿ ಸಂಘಗಳು ಪವಿತ್ರವಾದ ಗೋವಿನ ಸಗಣಿ ಮತ್ತು ಗೋಮೂತ್ರದ ಬಳಕೆಯನ್ನು ಉತ್ತೇಜಿಸಬೇಕು ಎಂದು ಸಿಎಂ ಯೋಗಿ ಒತ್ತಾಯಿಸಿದರು.
ರಾಷ್ಟ್ರೀಯ ಡೈರಿ ಡೆವಲಪ್ಮೆಂಟ್ ಬೋರ್ಡ್ (ಎನ್ಡಿಡಿಬಿ) ಈಗಾಗಲೇ ಹಸುವಿನ ಸಗಣಿ ಮತ್ತು ಮೂತ್ರದ ಬಗ್ಗೆ ಸಂಶೋಧನೆ ಮಾಡಲು ಕಂಪನಿಯನ್ನು ರಚಿಸಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.