ಬ್ಯಾಂಕ್ ಠೇವಣಿಗಿಂತ ಹೆಚ್ಚಿನ ಬಡ್ಡಿದರ ಪಡೆಯಲು ಹೀಗೂ ಒಂದು ದಾರಿ
ನಮ್ಮ ಶ್ರಮದ- ದುಡಿಮೆಯ ಹಣದಲ್ಲಿ ಅಲ್ಪಸ್ವಲ್ಪವಾದರೂ ಉಳಿಸಿ, ಅದನ್ನು ಭವಿಷ್ಯಕ್ಕಾಗಿ ಕೂಡಿಡಬೇಕು ಅನ್ನೋದು ಯಾರಿಗೆ ಇರುವುದಿಲ್ಲ? ಆ ಹಣವೂ ಒಂದಿಷ್ಟು ಹಣ ದುಡಿಯಲಿ ಎಂಬ ಲೆಕ್ಕಾಚಾರ ಯಾರಿಗೆ ಇರಲ್ಲ? ಹಾಗೆ ಆಲೋಚಿಸುವಾಗ ಕಾಣುವ ಮೊದಲ ಮಾರ್ಗ ಷೇರುಪೇಟೆ.
ಆದರೆ, ಇತ್ತೀಚಿನ ದಿನಗಳಲ್ಲಿ ಷೇರುಪೇಟೆಯು ಅಸ್ಥಿರತೆಯಿಂದ ಕೂಡಿದೆ. ಷೇರಿನ ಬೆಲೆಗಳು ವಿನಾಕಾರಣ ಇಳಿಯುತ್ತವೆ. ಅದೇ ರೀತಿ ಏರಿಕೆ ಆಗುತ್ತವೆ. ಇಳಿಕೆ ಕಾಣುವಾಗ ರುಪಾಯಿಯ ಬೆಲೆ ಕುಸಿತ, ಕಚ್ಚಾ ತೈಲ ಬೆಲೆ ಏರಿಕೆ, ಅಂತರ ರಾಷ್ಟ್ರೀಯ ಪೇಟೆಗಳಲ್ಲಾಗುವ ಇಳಿಕೆ ಮುಂತಾದವುಗಳ ಕಾರಣವನ್ನು ನೀಡಲಾಗುವುದು.
ಬ್ಯಾಂಕುಗಳ ವಿಲೀನಕ್ಕೆ ಸಂಪುಟ ಒಪ್ಪಿಗೆ: ಬರಿ ನೆನಪಾಗಿ ಉಳಿಯಲಿದೆ ವಿಜಯಾ ಬ್ಯಾಂಕ್
ಷೇರಿನ ಬೆಲೆಗಳ ಏರಿಳಿತಕ್ಕೆ ಕಂಪನಿಗಳು ಅಂತರ್ಗತವಾಗಿ ಸಾಧಿಸಿದ ಅಂಶಗಳನ್ನು ಪರಿಗಣಿಸದೆ, ಕೇವಲ ಬಾಹ್ಯ ಬೆಳವಣಿಗೆಗಳಿಗೆ, ವಿತ್ತೀಯ ಸಂಸ್ಥೆಗಳು ನೀಡುವ ರೇಟಿಂಗ್ ಗಳನ್ನು ಆಧರಿಸಿ ಅಲಂಕಾರಿಕ ಶೈಲಿಯಲ್ಲಿ ವರ್ಣಿಸಲಾಗುವುದು. ಇಂತಹ ವಾತಾವರಣವು ಪಾರಂಪರಿಕವಾಗಿ ಬೆಳೆದು ಬಂದಿರುವ ದೀರ್ಘಕಾಲೀನ ಹೂಡಿಕೆಗೆ ಅಪವಾದವಾಗಿದೆ.
ವಿಶ್ವದ ಏಳನೇ ಸ್ಥಾನದಲ್ಲಿ ಭಾರತದ ಷೇರು ಮಾರುಕಟ್ಟೆ
ದೇಶವು ಪ್ರಗತಿಪಥದಲ್ಲಿದೆ, ರಾಜ್ಯಗಳು ಅಭಿವೃದ್ಧಿಯತ್ತ ಸಾಗುತ್ತಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಪ್ರತಿಷ್ಠೆ ಹೆಚ್ಚುತ್ತಿದೆ. ಭಾರತದ ಷೇರುಪೇಟೆಯು ವಿಶ್ವದ ಏಳನೇ ಸ್ಥಾನದಲ್ಲಿದೆ. ವಿಶ್ವದ ಆರನೇ ಸಿರಿವಂತ ದೇಶ ಎಂಬ ಸಕಾರಾತ್ಮಕ ಭಾವನೆಗಳನ್ನು ಜನಮನದಲ್ಲಿ ಪ್ರತಿಷ್ಠಾಪಿಸುತ್ತಿರುವುದು ಒಂದು ಕಡೆಯಾದರೆ, ಆಂತರಿಕವಾಗಿ ನಡೆಯುತ್ತಿರುವ ಹಗರಣಗಳು, ಆರ್ಥಿಕ ಶೋಷಣೆಗಳು, ತಳಮಟ್ಟದ, ಮಧ್ಯಮ ವರ್ಗದವರ ನಿತ್ಯದ ಬವಣೆಗಳು ಹೆಚ್ಚಾಗಿ ಅಸಮಾಧಾನವು ತುಂಬಿ ತುಳುಕಾಡುತ್ತಿದೆ. ಈಗಿನ ವ್ಯವಹಾರಗಳು ಜನಸಾಮಾನ್ಯರಲ್ಲಿ ಸಿನಿಮೀಯ ಶೈಲಿಯಲ್ಲಿ ಎಲ್ಲವನ್ನೂ ತ್ವರಿತವಾಗಿ ಪಡೆಯಬಹುದು ಎಂಬ ಭಾವನೆ ಬಿತ್ತಿ, ಅವರಲ್ಲಿ ಸಹನೆ, ತಾಳ್ಮೆ ಗಳು ಮಾಯವಾಗುವಂತೆ ಮಾಡಿ, ಈ ಆಸೆಯ ಕಾರಣ ದಾರಿ ತಪ್ಪಿಸಲಾಗುತ್ತಿದೆ. ಜನಸಾಮಾನ್ಯರ ಖರೀದಿಸುವ ಸಾಮರ್ಥ್ಯವು ಕ್ಷೀಣಿಸುತ್ತಿದೆ. ನಮ್ಮ ದೇಶದ ಆರ್ಥಿಕ ಬೆನ್ನೆಲುಬಾಗಿರುವ ಗ್ರಾಹಕ ವೃಂದದ ಖರೀದಿ ಸಾಮರ್ಥ್ಯವು ಹೆಚ್ಚುವವರೆಗೂ ಯಾವ ಯೋಜನೆಯು ಯಶಸ್ಸು ಕಾಣಲಾಗದು.
ಬ್ಯಾಂಕ್ ಗಳೂ ಸಂಪನ್ಮೂಲ ಕೊರತೆಯಿಂದ ಬಳಲುತ್ತಿವೆ
ಈ ದಿಶೆಯಲ್ಲಿ ಭಾವನೆಗಳನ್ನು ಮತ್ತು ವಾಸ್ತವವನ್ನು ಬೇರ್ಪಡಿಸಿ, ಪರಿಶೀಲಿಸಿ, ನಿರ್ಧರಿಸುವ ಚಿಂತನೆಯನ್ನು ಅಳವಡಿಸಿಕೊಂಡು ಆರ್ಥಿಕ ಸಾಕ್ಷರತೆಯನ್ನು ಬೆಳೆಸಿಕೊಳ್ಳಬಹುದಾಗಿದೆ. ಕೇವಲ ಸಾಕ್ಷರತೆಯೊಂದೇ ಸಾಲದು, ಜೊತೆಗೆ ಆರ್ಥಿಕ ಸಾಕ್ಷರತೆ ಬೆಳೆಸಿಕೊಂಡಲ್ಲಿ ಜೀವನವು ಸುಖಕರವಾಗಿಸಲು ಸಾಧ್ಯ. ಷೇರುಪೇಟೆಯ ಈ ರೀತಿಯ ಅಸಹಜ ನಡೆ ಬಹಳಷ್ಟು ಹೂಡಿಕೆದಾರರನ್ನು ದೂರ ತಳ್ಳಿರಬಹುದು. ಹೆಚ್ಚಿನವರು ಸುರಕ್ಷತಾ ಕಾರಣಕ್ಕಾಗಿ ಬ್ಯಾಂಕ್ ಡಿಪಾಸಿಟ್ ಗಳನ್ನು ಆಶ್ರಯಿಸಿರಬಹುದು. ಬ್ಯಾಂಕ್ ಗಳು ಸಹ ಸಂಪನ್ಮೂಲ ಕೊರತೆಯಿಂದ ಬಳಲುತ್ತಿವೆ. ಕಾರ್ಪೊರೇಟ್ ವಲಯವು ಸಹ ಸಂಪನ್ಮೂಲ ಕೊರತೆಯಿಂದ ಹೆಚ್ಚಿನ ಕಂಪನಿಗಳು ವಿವಿಧ ರೀತಿಯ ಯೋಜನೆಗಳಿಂದ, ವಿವಿಧ ಮೂಲಗಳಿಂದ ಹಣ ಸಂಗ್ರಹಣಾ ಕಾರ್ಯವನ್ನು ಚುರುಕುಗೊಳಿಸಿವೆ.
ಶೇ 7ರಿಂದ ಶೇ 8ರ ವರೆಗೂ ವಾರ್ಷಿಕ ಬಡ್ಡಿ ನೀಡುವ ಬ್ಯಾಂಕ್ ಗಳು
ಸಾಮಾನ್ಯವಾಗಿ ಸುರಕ್ಷಿತ ಹೂಡಿಕೆ ಎಂದರೆ ಬ್ಯಾಂಕ್ ಡಿಪಾಸಿಟ್ ಗಳು ಎಂಬ ಕಲ್ಪನೆ ಎಲ್ಲರಲ್ಲೂ ಬೇರೂರಿದೆ. ಆದರೆ ಬ್ಯಾಂಕ್ ಗಳಲ್ಲಿ ಕೇವಲ ಒಂದು ಲಕ್ಷದವರೆಗೂ ಮಾತ್ರ ವಿಮೆಯ ಸುರಕ್ಷತೆ ಇರುತ್ತದೆ. ಹೆಚ್ಚಿನದಕ್ಕೆ ಯಾವುದೇ ರೀತಿಯ ಗ್ಯಾರಂಟಿ ಇರುವುದಿಲ್ಲ. ಆದರೂ ನಾವು ಸರತಿಯಲ್ಲಿ ಬ್ಯಾಂಕ್ ಗಳಲ್ಲಿ ಠೇವಣಿ ಇಡುತ್ತೇವೆ. ಇದಕ್ಕೆ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿರುವ ನಂಬಿಕೆ ಕಾರಣವಾಗಿದೆ. ಹೀಗಿರುವಾಗ ಬ್ಯಾಂಕ್ ಗಳು ತಮ್ಮ ಠೇವಣಿದಾರರಿಗೆ ಶೇ 7ರಿಂದ ಶೇ 8ರ ವರೆಗೂ ವಾರ್ಷಿಕ ಬಡ್ಡಿ ನೀಡುತ್ತವೆ. ಇದೇ ಬ್ಯಾಂಕ್ ಗಳಲ್ಲಿ ಹಲವಾರು ಬ್ಯಾಂಕ್ ಗಳು ತಮ್ಮ ಬೆಸಲ್ 3 ರ ನಿಯಮಾನುಸಾರ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಬಡ್ಡಿ ನೀಡುವ ಸಾಲಪತ್ರಗಳನ್ನು ವಿತರಿಸಿವೆ, ವಿತರಿಸುತ್ತಿವೆ.
ಸಾಲಪತ್ರಗಳ ಹೂಡಿಕೆಯಿಂದ ಹೆಚ್ಚಿನ ಲಾಭ
ಇತ್ತೀಚೆಗೆ ಕರ್ಣಾಟಕ ಬ್ಯಾಂಕ್ ಶೇ 12ರಂತೆ ಬಡ್ಡಿ ನೀಡುವ ಎನ್ ಸಿಡಿಗಳನ್ನು, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಶೇ 11.7 ಬಡ್ಡಿ ನೀಡುವ ಟೈರ್ 2 ಬಾಂಡ್ ಗಳನ್ನು ವಿತರಿಸಿವೆ. ಈ ರೀತಿಯ ಬ್ಯಾಂಕ್ ಬಾಂಡ್ ಗಳು ಪೇಟೆಯಲ್ಲಿ ಸ್ವಲ್ಪ ಪ್ರೀಮಿಯಂನಲ್ಲಿ ಲಭ್ಯವಿರುತ್ತವೆ. ಆದಾಯ ತೆರಿಗೆಯನ್ನು ಪಾವತಿಸುವವರು ಹೆಚ್ಚಿನ ಸ್ಲಾಬ್ ನಲ್ಲಿದ್ದರೆ ಅವರು ತೆರಿಗೆ ಮುಕ್ತ ಬಡ್ಡಿ ಪಡೆಯುವ ಉತ್ತಮ ಕಂಪನಿಗಳ ಬಾಂಡ್ ಗಳನ್ನೂ ಖರೀದಿಸಲು ಪೇಟೆ ಅವಕಾಶ ಮಾಡಿಕೊಟ್ಟಿದೆ. ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟು ಕಡಿಮೆ ಬಡ್ಡಿ ಪಡೆಯುವುದಕ್ಕಿಂತ ಅದೇ ಬ್ಯಾಂಕ್ ಗಳು ವಿತರಿಸಿರುವ ಸಾಲಪತ್ರಗಳಲ್ಲಿ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಬಡ್ಡಿ ಪಡೆಯಬಹುದು. ತುಲಾನಾತ್ಮಕವಾಗಿ ಅಡಕವಾಗಿರುವ ವಿವಿಧ ಅಂಶಗಳನ್ನು ಪರಿಗಣಿಸಿ, ನಿರ್ಧರಿಸುವ ಆರ್ಥಿಕ ಸಾಕ್ಷರತಾ ಮಟ್ಟ ಬೆಳೆಸಿಕೊಳ್ಳುವುದು ಇಂದಿನ ಅವಶ್ಯವಾಗಿದೆ.