ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ ಮುಚ್ಚಲು ಮುಂದಾದ ಕೇಂದ್ರ ಸರ್ಕಾರ
ನವದೆಹಲಿ, ಅಕ್ಟೋಬರ್ 09: "ಟೆಲಿಕಾಂ ಮಾರುಕಟ್ಟೆಯ ದರ ಸಮರದಲ್ಲಿ ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿರುವ ಬಿಎಸ್ಎನ್ಎಲ್ಆದಾಯವಿಲ್ಲದೇ ದಿವಾಳಿತನ ಹಾದಿ ಹಿಡಿದಿದೆ" ಎಂದು ಬಿಎಸ್ಎನ್ಎಲ್ ಉದ್ಯೋಗಿಗಳ ಒಕ್ಕೂಟ ಹೇಳಿದೆ.
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಹಾಗೂ ಮಹಾನಗರ್ ಟೆಲಿಕಾಂ ಲಿಮಿಟೆಡ್ (ಎಂಟಿಎನ್ಎಲ್) ನಷ್ಟದಲ್ಲಿದ್ದು, ಎರಡು ಸಂಸ್ಥೆಗಳನ್ನು ಬಂದ್ ಮಾಡಲು ಸರ್ಕಾರ ಮುಂದಾಗಿರುವ ಸುದ್ದಿ ಬಂದಿದೆ. ಈ ಕುರಿತಂತೆ ಕೇಂದ್ರ ಹಣಕಾಸು ಇಲಾಖೆ ಶಿಫಾರಸ್ಸು ಮಾಡಿದೆ.

ನೌಕರರಿಗೆ ಸಕಾಲಕ್ಕೆ ಸಂಬಳವನ್ನೂ ನೀಡಲಾಗದ ಪರಿಸ್ಥಿತಿಯಲ್ಲಿ ಈ ಸಂಸ್ಥೆಗಳಿದ್ದು, 74 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವು ನೀಡುವಂತೆ ಹಣಕಾಸು ಇಲಾಖೆಯನ್ನು ಕೋರಲಾಗಿತ್ತು. ಆದರೆ ಸಮಗ್ರ ಪರಿಶೀಲನೆ ನಡೆಸಿರುವ ಹಣಕಾಸು ಇಲಾಖೆ ಈ ಎರಡೂ ಸಂಸ್ಥೆಗಳನ್ನು ಮುಚ್ಚುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದೆ. ಭಾರತ್ ಸಂಚಾರ್ ನಿಗಮ ನಿಯಮಿತದಲ್ಲಿ 1.76 ಲಕ್ಷ ಮಂದಿ ನೌಕರರಿದ್ದರೆ, ಮಹಾನಗರ ಟೆಲಿಕಾಂ ಲಿಮಿಟೆಡ್ ನಲ್ಲಿ 22 ಸಾವಿರ ಮಂದಿ ನೌಕರರಿದ್ದಾರೆ. ಇವರುಗಳಿಗೆ ಕಡ್ಡಾಯವಾಗಿ ಸ್ವಯಂ ನಿವೃತ್ತಿ(ವಿಆರ್ ಎಸ್) ಅನ್ವಯಿಸುವುದು ಸೂಕ್ತ ಎಂದು ಹಣಕಾಸು ಇಲಾಖೆ ತನ್ನ ಶಿಫಾರಸ್ಸಿನಲ್ಲಿ ಹೇಳಿದೆ.
ಬಿಎಸ್ಎನ್ಎಲ್ನ ಒಟ್ಟು ಆದಾಯದ ಶೇ 55ರಷ್ಟು ಸಿಬ್ಬಂದಿ ವೇತನ ಪಾವತಿಗೆ ವಿನಿಯೋಗವಾಗುತ್ತಿದೆ. ವಾರ್ಷಿಕವಾಗಿ ಸಂಸ್ಥೆಯ ವೇತನಶುಲ್ಕ ಶೇ 8ರಷ್ಟು ಹೆಚ್ಚಳವಾಗುತ್ತಿದೆ. ಆದರೆ, ಆದಾಯ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ. 2018ರಲ್ಲಿ ಸುಮಾರು 8 ಸಾವಿರ ಕೋಟಿ ರು ನಷ್ಟು ನಷ್ಟ ಎದುರಿಸಿದೆ. 2017ರ ಆರ್ಥಿಕ ವರ್ಷದಲ್ಲಿ 4,786 ಕೋಟಿ ರು, 2019ರಲ್ಲಿ 8 ಸಾವಿರ ಕೋಟಿ ರುಗೂ ಅಧಿಕ ನಷ್ಟ ನಿರೀಕ್ಷಿಸಲಾಗಿದೆ.
ಗ್ರಾಹಕರಿಗೆ ಕಳಪೆ ಸೇವೆ, ತಂತ್ರಜ್ಞಾನ ಮೇಲ್ದರ್ಜೆಗೇರಿಸುವಿಕೆಯಲ್ಲಿ ಮಂದಗತಿ, ಅಶಿಸ್ತಿನ ಆಡಳಿತ, ಅತಿ ವೇತನದಿಂದ ಹೊರೆಯಾಗಿರುವ ಸಿಬ್ಬಂದಿ, ಸರ್ಕಾರದ ಕೆಲವು ದಾರಿ ತಪ್ಪಿಸುವ ಸೂಚನೆ ಮತ್ತು ಅನಗತ್ಯ ಮೂಗು ತೂರಿಸುವಿಕೆಯಿಂದಲೂ ಈ ಸಂಸ್ಥೆಗಳು ಹೈರಾಣಾಗಿವೆ.
'ನಾವೆಲ್ಲರೂ ಕೇಂದ್ರ ಸರ್ಕಾರದ ಉದ್ಯೋಗದ ವ್ಯಾಪ್ತಿಯಲ್ಲಿ ಇರುವವರು. ಯಾವುದೇ ಅಧಿಸೂಚನೆ ಇಲ್ಲದೆ ಏಕಾಏಕಿ ಯಾರಿಗೂ ರಾಜೀನಾಮೆ ನೀಡುವಂತೆ ಅಥವಾ ವಿಆರ್ಎಸ್ ತೆಗೆದುಕೊಳ್ಳುವಂತೆ ಸೂಚನೆ ನೀಡಲು ಸಾಧ್ಯವಿಲ್ಲ' ಎಂದು ಒಕ್ಕೂಟ ಹೇಳಿದೆ.












Click it and Unblock the Notifications