ಊರ್ಜಿತ್ ಹೋದ ನಂತರ, ಸುರ್ಜಿತ್ ಭಲ್ಲಾ ಕೂಡ ಹೇಳಿದರು ಟಾಟಾ
ನವದೆಹಲಿ, ಡಿಸೆಂಬರ್ 11 : ಊರ್ಜಿತ್ ಪಟೇಲ್ ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಅರವಿಂದ್ ಸುಬ್ರಮಣಿಯನ್ ಅವರು ಆರ್ಥಿಕ ಸಲಹೆಗಾರ ಹುದ್ದೆಯಿಂದ ಹಿಂದೆ ಸರಿದ ನಂತರ ನರೇಂದ್ರ ಮೋದಿ ಸರಕಾರಕ್ಕೆ ಮತ್ತೊಂದು 'ಆರ್ಥಿಕ' ಹೊಡೆತ ಬಿದ್ದಿದೆ.
ಪ್ರಧಾನಿಯ ಆರ್ಥಿಕ ಸಲಹಾ ಸಮಿತಿಯಲ್ಲಿ ಪಾರ್ಟ್ ಟೈಂ ಸದಸ್ಯರಾಗಿದ್ದ ಖ್ಯಾತ ಅರ್ಥಶಾಸ್ತ್ರಜ್ಞ ಸುರ್ಜಿತ್ ಭಲ್ಲಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ. ತಾವು ಡಿಸೆಂಬರ್ 1ರಂದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾಗಿ ಪ್ರಕಟಿಸಿದ್ದಾರೆ.
ಆರ್ಥಿಕ ಅಥವಾ ಮತ್ತಾವುದೇ ಸಮಸ್ಯೆಯಿರಲಿ, ಪ್ರಧಾನಿ ಕಚೇರಿಯಿಂದ ಕೋರಿಕೆ ಬಂದಾಗ, ಆ ಸಮಸ್ಯೆಯನ್ನು ವಿಶ್ಲೇಷಿಸಿ ಸೂಕ್ತ ಪರಿಹಾರ ಸೂಚಿಸುವುದು ಪ್ರಧಾನಿಯ ಆರ್ಥಿಕ ಸಲಹಾ ಸಮಿತಿಯ ಜವಾಬ್ದಾರಿ. ಈ ಜವಾಬ್ದಾರಿಯನ್ನು ಸುರ್ಜಿತ್ ಭಲ್ಲಾ ಅವರಿಗೆ ವಹಿಸಲಾಗಿತ್ತು.

ಈ ಆರ್ಥಿಕ ಸಲಹಾ ಸಮಿತಿಯ ನೇತೃತ್ವವನ್ನು ನೀತಿ ಆಯೋಗದ ಸದಸ್ಯರಾಗಿರುವ ಡಾ. ಬಿಬೇಕ್ ದೆಬ್ರಾಯ್ ಅವರು ವಹಿಸಿಕೊಂಡಿದ್ದಾರೆ. ಇದೀಗ, ಈ ಸಮಿತಿಯಲ್ಲಿದ್ದ ಅರೆಕಾಲಿಕ ಸದಸ್ಯ ಸುರ್ಜಿತ್ ಭಲ್ಲಾ ಅವರು ಕೂಡ ಹಿಂದೆ ಸರಿದಿರುವುದರಿಂದ ನರೇಂದ್ರ ಮೋದಿ ಸರಕಾರಕ್ಕೆ ಮತ್ತೊಂದು ಹಿನ್ನಡೆಯಾದಂತಾಗಿದೆ.
ಈಗಾಗಲೆ, ರಿಸರ್ವ್ ಬ್ಯಾಂಕ್ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿದ, ಅಲ್ಲಿನ ರಿಸರ್ವ್ ಫಂಡ್ ಮೇಲೆ ಕಣ್ಣು ಹಾಕಿದ, ಆರ್ಬಿಐ ಗವರ್ನರ್ ಗಳಿಗೆ ಸ್ವಾತಂತ್ರ್ಯ ನೀಡದ, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ತನಿಖಾ ಸಂಸ್ಥೆಯನ್ನು ತನ್ನ ಬಿಗಿಮುಷ್ಠಿಯಲ್ಲಿ ಇಟ್ಟುಕೊಂಡ ಆರೋಪವನ್ನು ನರೇಂದ್ರ ಮೋದಿ ಸರಕಾರ ಎದುರಿಸುತ್ತಿದೆ.












Click it and Unblock the Notifications