LPG ಮಾರಾಟದಿಂದ ನಷ್ಟ; ತೈಲ ಕಂಪನಿಗಳಿಗೆ 22,000 ಕೋಟಿ ರೂ. ಅನುದಾನ
ನವದೆಹಲಿ, ಅ.12: ಕಳೆದ ಎರಡು ವರ್ಷಗಳಲ್ಲಿ ಗೃಹಬಳಕೆಯ ಅಡುಗೆ ಅನಿಲ ಎಲ್ಪಿಜಿ ಮಾರಾಟದಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಸರ್ಕಾರವು ಮೂರು ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳಿಗೆ 22,000 ಕೋಟಿ ರೂಪಾಯಿಯ ಒಂದು ಬಾರಿ ಅನುದಾನವನ್ನು ನೀಡಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ಹೇಳಿದರು.
ಬುಧವಾರ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಮೂರು ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಗೆ ಒಂದು ಬಾರಿ ಅನುದಾನವನ್ನು ಅನುಮೋದಿಸಿದೆ ಎಂದು ಠಾಕೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Cap on LPG Cylinders : ಭಾರತದಲ್ಲಿ ವರ್ಷಕ್ಕೆ 12ಕ್ಕಿಂತ ಹೆಚ್ಚು ಸಿಲಿಂಡರ್ ಸಿಗುವುದಿಲ್ಲ!
ಜೂನ್ 2020 ರಿಂದ ಜೂನ್ 2022 ರವರೆಗೆ ಗ್ರಾಹಕರಿಗೆ ಕಡಿಮೆ ವೆಚ್ಚದ ಎಲ್ಪಿಜಿ ಮಾರಾಟದಲ್ಲಿ ತೈಲ ಮಾರಾಟ ಕಂಪನಿಗಳಿಗೆ ಉಂಟಾದ ನಷ್ಟವನ್ನು ಸರಿದೂಗಿಸಲು ಈ ಅನುದಾನವನ್ನು ನೀಡಲಾಗುತ್ತಿದೆ ಎಂದರು.
ಏಕಕಾಲಕ್ಕೆ 22,000 ಕೋಟಿ ರೂ ಅನುದಾನ
"ಪ್ರಪಂಚದಾದ್ಯಂತ LPG ಬೆಲೆಗಳು ಹೆಚ್ಚಾಗುತ್ತಿವೆ. ಬೆಲೆ ಏರಿಕೆಯ ಹೊರೆ ಸಾಮಾನ್ಯ ಜನರ ಮೇಲೆ ಬೀಳದಂತೆ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಏಕಕಾಲಕ್ಕೆ 22,000 ಕೋಟಿ ರೂ ಅನುದಾನ ನೀಡಲಾಗಿದೆ" ಎಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದರು.
ಸರ್ಕಾರ-ನಿಯಂತ್ರಿತ ಬೆಲೆಯಲ್ಲಿ LPG ಮಾರಾಟ
ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಈ ಮೂರು ಸಂಸ್ಥೆಗಳು ಗ್ರಾಹಕರಿಗೆ ಸರ್ಕಾರ-ನಿಯಂತ್ರಿತ ಬೆಲೆಯಲ್ಲಿ ದೇಶೀಯ LPG ಅನ್ನು ಮಾರಾಟ ಮಾಡುತ್ತವೆ.
ಜೂನ್ 2020 ರಿಂದ ಜೂನ್ 2022 ರ ನಡುವೆ, ಎಲ್ಪಿಜಿಯ ಅಂತರರಾಷ್ಟ್ರೀಯ ಬೆಲೆಗಳು ಸುಮಾರು 300 ಪ್ರತಿಶತದಷ್ಟು ಏರಿದೆ. ಆದರೂ, ಅಂತರರಾಷ್ಟ್ರೀಯ ಎಲ್ಪಿಜಿ ಬೆಲೆಗಳಲ್ಲಿನ ಏರಿಳಿತಗಳಿಂದ ಗ್ರಾಹಕರನ್ನು ರಕ್ಷಿಸಲು, ವೆಚ್ಚದ ಹೆಚ್ಚಳವನ್ನು ದೇಶೀಯ ಎಲ್ಪಿಜಿಯ ಗ್ರಾಹಕರಿಗೆ ಸಂಪೂರ್ಣವಾಗಿ ವರ್ಗಾಯಿಸಲಾಗಿಲ್ಲ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಬೆಲೆ ಏರಿಕೆಯಿಂದ ಮೂರು ಸಂಸ್ಥೆಗಳಿಗೆ ಭಾರಿ ನಷ್ಟ
ಎಲ್ಪಿಜಿಯ ಅಂತರರಾಷ್ಟ್ರೀಯ ಬೆಲೆಗಳು ಸುಮಾರು 300 ಪ್ರತಿಶತದಷ್ಟು ಏರಿದೆ. ಅದರಂತೆ, ಈ ಅವಧಿಯಲ್ಲಿ ದೇಶೀಯ ಎಲ್ಪಿಜಿ ಬೆಲೆಗಳು 72 ಪ್ರತಿಶತದಷ್ಟು ಏರಿಕೆಯಾಗಿದೆ. ಇದರಿಂದ ಮೂರು ಸಂಸ್ಥೆಗಳ ಗಮನಾರ್ಹ ನಷ್ಟಕ್ಕೆ ಕಾರಣವಾಯಿತು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
"ಈ ನಷ್ಟಗಳ ಹೊರತಾಗಿಯೂ, ಮೂರು PSU OMC ಗಳು ದೇಶದಲ್ಲಿ ಈ ಅಗತ್ಯ ಅಡುಗೆ ಇಂಧನದ ನಿರಂತರ ಪೂರೈಕೆಯನ್ನು ಖಾತ್ರಿಪಡಿಸಿವೆ. ಆದ್ದರಿಂದ ದೇಶೀಯ LPG ಯಲ್ಲಿನ ಈ ನಷ್ಟಗಳಿಗೆ ಮೂರು PSU OMC ಗಳಿಗೆ ಒಂದು ಬಾರಿ ಅನುದಾನವನ್ನು ನೀಡಲು ಸರ್ಕಾರ ನಿರ್ಧರಿಸಿದೆ" ಎಂದು ಕೇಮದ್ರ ಸಚಿವ ತಿಳಿಸಿದರು.
ರೈಲ್ವೆ ಉದ್ಯೋಗಿಗಳಿಗೆ 1,832 ಕೋಟಿ ರೂ. ಬೋನಸ್
ಮೂರು ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿ) 22,000 ಕೋಟಿ ರೂಪಾಯಿ ಮೊತ್ತದ ಒಂದು ಬಾರಿ ಅನುದಾನವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
"ಈ ನಿರ್ಧಾರವು ಕಂಪನಿಗಳು ಆತ್ಮನಿರ್ಭರ್ ಭಾರತ್ ಅಭಿಯಾನ್ಗೆ ತಮ್ಮ ಬದ್ಧತೆಯನ್ನು ಮುಂದುವರಿಸಲು ಸಹಾಯ ಮಾಡುತ್ತದೆ. ಅಡೆತಡೆಯಿಲ್ಲದ ದೇಶೀಯ ಎಲ್ಪಿಜಿ ಪೂರೈಕೆಗಳನ್ನು ಖಾತ್ರಿಪಡಿಸುತ್ತದೆ ಮತ್ತು ಮೇಕ್ ಇನ್ ಇಂಡಿಯಾ ಉತ್ಪನ್ನಗಳ ಸಂಗ್ರಹಣೆಯನ್ನು ಬೆಂಬಲಿಸುತ್ತದೆ" ಎಂದು ಹೇಳಲಾಗಿದೆ.
ಇದರ ಜೊತೆಗೆ 11.27 ಲಕ್ಷ ರೈಲ್ವೆ ಉದ್ಯೋಗಿಗಳಿಗೆ ಉತ್ಪಾದಕತೆ ಸಂಬಂಧಿತ ಬೋನಸ್ ಆಗಿ 1,832 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದು 78 ದಿನಗಳ ಬೋನಸ್ ಆಗಿದ್ದು. ಇದರ ಗರಿಷ್ಠ ಮಿತಿ 17,951 ರೂಪಾಯಿಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದರು.