ಬೆಂಗಳೂರು-ಚಿಕ್ಕಮಗಳೂರು: ನಕಲಿ ಖಾತೆ, 97 ಕೋಟಿ ವಂಚನೆ, ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಬಂಧನ
ಬೆಂಗಳೂರು, ಅಕ್ಟೋಬರ್ 16: ಷೇರು ವ್ಯವಹಾರದ ಹೆಸರಿನಲ್ಲಿ ಹೇಗೆ ವಂಚನೆ ಮಾಡಲಾಗುತ್ತದೆ? ಎಂಬುದಕ್ಕೆ ಬೆಂಗಳೂರಿನಲ್ಲಿ ಪ್ರಕರಣವೊಂದು ಸಾಕ್ಷಿಯಾಗಿದೆ. 97 ಕೋಟಿ ರೂ. ವಂಚನೆ ಮಾಡಿದ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ಕೇವಲ 6 ಖಾತೆಗಳಿಗೆ ಹೇಗೆ ಹಣ ವರ್ಗಾವಣೆ ಆಗಿತ್ತು ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ 8 ಆರೋಪಿಗಳನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಈ ಸೈಬರ್ ಕ್ರೈಂ ಹಿಂದೆ ಬಿದ್ದ ಪೊಲೀಸರು ನಾಗರಭಾವಿಯಲ್ಲಿರುವ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಕಿಶೋರ್, ಸೇಲ್ಸ್ಮೆನ್ ಮನೋಹರ್, ರಾಕೇಶ್, ಕಾರ್ತಿಕ್, ಅಕೌಂಟ್ ಹೋಲ್ಡರ್ಗಳಾದ ಕೆಂಚೇಗೌಡ, ರಘು, ಲಕ್ಷ್ಮೀಕಾಂತ್, ಮಾಲ ಎಂಬುವವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ವಾಟ್ಸಪ್ ಗ್ರೂಪ್ಗಳ ಮೂಲಕ ಬ್ಯಾಂಕ್ನಲ್ಲಿ ಜನರಿಂದ ವಿಐಪಿ ಷೇರು ಟ್ರೇಡಿಂಗ್ ಹೆಸರಿನಲ್ಲಿ ಹಣವನ್ನು ಹೂಡಿಕೆ ಮಾಡಿಸುವುದು. ಲಾಭವನ್ನು ನೀಡುವಾಗ ಕಮೀಷನ್ ಸೇರಿದಂತೆ ಇತರ ಚಾರ್ಜ್ ಎಂದು ಲಕ್ಷಾಂತರ ರೂಪಾಯಿ ವಂಚಿಸಿವ ವಂಚನೆ ಪ್ರಕರಣವಿದು. ಅಲ್ಲದೇ 97 ಕೋಟಿ ರೂ. ಹಣ ವರ್ಗಾವಣೆಗೊಂಡ ಬ್ಯಾಂಕ್ ಖಾತೆಗಳನ್ನು ತೆರೆಯಲು ಸರಿಯಾದ ವಿಳಾಸವನ್ನು ಸಹ ನೀಡಲಾಗಿಲ್ಲ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ಯಲಹಂಕ-ಚಿಕ್ಕಮಗಳೂರು ತನಕ ಜಾಲ: ಯಲಹಂಕ ಮೂಲದ ವ್ಯಕ್ತಿಯೊಬ್ಬರು ಪೊಲೀಸರಿಗೆ 2024ರ ಮಾರ್ಚ್ನಲ್ಲಿ ದೂರು ನೀಡಿದ್ದರು. ವಾಟ್ಸ್ಪ್ ಗ್ರೂಪ್ ಒಂದಕ್ಕೆ ಅವರನ್ನು ಸೇರಿಸಲಾಗಿತ್ತು. ಸ್ಟಾಕ್ ಟ್ರೇಡಿಂಗ್ನಲ್ಲಿ ಹೂಡಿಕೆ ಮಾಡಿ, 10 ಪಟ್ಟು ಹೆಚ್ಚು ಲಾಭ ಕೊಡುವುದಾಗಿ ಅದರಲ್ಲಿ ಮಾಹಿತಿ ಹಂಚಿಕೊಳ್ಳಲಾಗಿತ್ತು. ಇದನ್ನು ನಂಬಿದ್ದ ಅವರು ಮೊದಲು 50 ಸಾವಿರ ರೂ. ಹೂಡಿಕೆ ಮಾಡಿದ್ದರು. ಅದಕ್ಕೆ ಲಾಭವನ್ನು ಪಡೆದ್ದರು.
ಗ್ರೂಪ್ಗಳಲ್ಲಿ ನಡೆಯುತ್ತಿದ್ದ ಮಾತುಕತೆ ನೋಡಿದ್ದ ಅವರು ಜೂನ್ನಲ್ಲಿ 1.5 ಕೋಟಿ ರೂ. ಹೂಡಿಕೆ ಮಾಡಿದ್ದರು. ಆಗ 28 ಕೋಟಿ ಲಾಭ ಬಂದಿದೆ ಎಂದು ಸ್ಕ್ರೀನ್ಶಾಟ್ ಶೇರ್ ಮಾಡಲಾಗಿತ್ತು. ಲಾಭದ ಪಾಲನ್ನು ವಾಪಸ್ ಕೇಳಲು ಹೋದಾಗ ಸರ್ವರ್ ಮ್ಯಾನೇಜ್ಮೆಂಟ್ಗೆ 75 ಲಕ್ಷ ರೂ. ನೀಡುವಂತೆ ಬೇಡಿಕೆ ಮುಂದಿಡಲಾಗಿತ್ತು. ಆಗ ವಂಚನೆಗೊಂಡಿರುವುದು ತಿಳಿದು ಅವರು ಪೊಲೀಸರಿಗೆ ದೂರು ನೀಡಿದರು.
ಈ ದೂರಿನ ಬೆನ್ನತ್ತಿದದ ಬೆಂಗಳೂರಿನ ಸಿಸಿಬಿ ಪೊಲೀಸರು ತನಿಖೆ ನಡೆಸಿ ದೊಡ್ಡ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ. ದೇಶಾದ್ಯಂತ ಇದೇ ಮಾದರಿಯ 250ಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಈ ವಂಚನೆ ಪ್ರಕರಣದ ಹಿಂದೆ ಬೇರೆ ರಾಜ್ಯದಲ್ಲಿರುವ 9 ವ್ಯಕ್ತಿಗಳ ಕೈವಾಡ ಇರುವ ಕುರಿತು ಶಂಕೆ ಇದೆ, ಪೊಲೀಸರಿಂದ ತನಿಖೆ ಮುಂದುವರೆದಿದೆ.
ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಮತ್ತು ಮೂವರು ಸೇಲ್ಸ್ ಎಕ್ಸಿಕ್ಯುಟಿವ್ ಬಂಧನದ ಕುರಿತು ಬ್ಯಾಂಕ್ ಖಚಿತಪಡಿಸಿದೆ. ಬ್ಯಾಂಕ್ ಸಿಬ್ಬಂದಿಗಳ ಕೈವಾಡದ ಕುರಿತು ಆಂತರಿಕ ತನಿಖೆ ನಡೆಯುತ್ತಿದೆ. ಪೊಲೀಸರು ನಡೆಸುತ್ತಿರುವ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ಬ್ಯಾಂಕ್ ಹೇಳಿದೆ.
ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಿಐಪಿ ಷೇರು ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಕುರಿತು ಹಲವು ದೂರುಗಳು ಸಲ್ಲಿಕೆಯಾಗಿವೆ. ಆದರೆ ಇಂತಹ ವಂಚನೆ ಪ್ರಕರಣದಲ್ಲಿ ಬ್ಯಾಂಕ್ ಮ್ಯಾನೇಜರ್, ಸೇಲ್ಸ್ ಎಕ್ಸಿಕ್ಯುಟಿವ್ ಬಂಧನಕ್ಕೊಳಗಾಗಿರುವುದು ಮಾತ್ರ ಮೊದಲ ಬಾರಿಗೆ. ಯಲಹಂಕದ ವ್ಯಕ್ತಿ ನೀಡಿದ್ದ ದೂರಿನ ತನಿಖೆ ಕೈಗೊಂಡಿದ್ದ ಪೊಲೀಸರು ಎರಡು ಬ್ಯಾಂಕ್ ಖಾತೆಗಳು ನಾಗರಭಾವಿಯ ಆಕ್ಸಿಸ್ ಬ್ಯಾಂಕ್ನಲ್ಲಿ ಇರುವ ಕುರಿತು ಮಾಹಿತಿ ಪಡೆದರು. ಆಗ ನೋಡಿದರೆ ಚಿಕ್ಕಮಗಳೂರಿನ ಇಬ್ಬರ ಹೆಸರಿನಲ್ಲಿ ಖಾತೆ ತೆರೆಯಲಾಗಿತ್ತು, ಯಾವುದೇ ಸರಿಯಾದ ವಿಳಾಸದ ದೃಢೀಕರಣದ ದಾಖಲೆಗಳು ಇರಲಿಲ್ಲ.
ಆಗ ತನಿಖೆ ಮುಂದುವರೆಸಿದ ಪೊಲೀಸರಿಗೆ ಇದೇ ಮಾದರಿಯಲ್ಲಿ ಇನ್ನೂ 4 ಖಾತೆ ಇರುವುದು ತಿಳಿಯಿತು ಅಲ್ಲದೇ 6 ಖಾತೆಗಳಿಗೆ 97 ಕೋಟಿ ರೂ. ವರ್ಗಾವಣೆಯಾಗಿತ್ತು. ಬ್ಯಾಂಕ್ ಮ್ಯಾನೇಜರ್ ಮತ್ತು ಸೇಲ್ಸ್ ಎಕ್ಸಿಕ್ಯುಟಿವ್ ಬಂಧಿಸಿ ವಿಚಾರಣೆ ನಡೆಸಿದಾಗ ವಂಚನೆ ಪ್ರಕರಣ ಬಯಲಾಗಿದೆ ಮತ್ತು ಅದು ಚಿಕ್ಕಮಗಳೂರು ತನಕ ಹೋಗಿದೆ.
ಚಿಕ್ಕಮಗಳೂರಿನ ಓರ್ವ ಮಹಿಳೆ ಸೇರಿ ನಾಲ್ವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ವಂಚಿಸಲಾಗಿದೆ. ಗ್ರಾಹಕರಿಗೆ ವಂಚನೆ ಮಾಡಿದ ಹಣವನ್ನು ಈ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಒಟ್ಟು 8 ಜನರನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ಮುಂದುವರೆಸಿದ್ದಾರೆ.












Click it and Unblock the Notifications