ಎಟಿಎಂಗಳಲ್ಲಿ ದುಡ್ಡಿಲ್ಲ, 85ರಷ್ಟು ಸಮಸ್ಯೆಯಿಲ್ಲ ಎನ್ನುವ ಸರಕಾರ
ಎಟಿಎಂಗಳು ಮಲಗಿಬಿಟ್ಟಿವೆ. ಹಣ ಇಲ್ಲ ಎಂಬ ಬೋರ್ಡ್ ನೇತು ಹಾಕಿಕೊಂಡಿರುವ ಎಟಿಎಂಗಳೇ ಬೆಂಗಳೂರಿನ ಬಹುತೇಕ ಕಡೆ ಕಾಣುತ್ತಿವೆ. ಅಯ್ಯೋ ಇದೇನು ಹಳೇ ಸುದ್ದಿ ಅಂತ ಕೇಳಬೇಡಿ. ಏಕೆಂದರೆ, ಈ ಸಮಸ್ಯೆ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಮಾತ್ರ ಅಲ್ಲ. ದೇಶದ ನಾನಾ ರಾಜ್ಯಗಳ ಎಟಿಎಂಗಳಲ್ಲಿ ಹಣ ಇಲ್ಲ ಎಂಬ ಬೋರ್ಡ್ ಗಳೇ ಗ್ರಾಹಕರಿಗೆ ಸ್ವಾಗತ ಕೋರುತ್ತಿವೆ.
ಕರ್ನಾಟಕ, ಆಂಧ್ರಪ್ರದೇಶ, ರಾಜಸ್ತಾನ, ಉತ್ತರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಹಾಗೂ ದೆಹಲಿಯಲ್ಲಿ ಎಟಿಎಂಗಳಲ್ಲಿ ಹಣ ಇಲ್ಲದೇ ಖಾಲಿ ಕೈಲಿ ವಾಪಸಾಗುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಸಾಕಷ್ಟು ಹಣ ಚಲಾವಣೆಯಲ್ಲಿದೆ. ಆದರೆ ಎಲ್ಲೋ ಕೆಲ ಪ್ರದೇಶದಲ್ಲಿ ಬೇಡಿಕೆ ಹೆಚ್ಚಾಗಿ ಸಮಸ್ಯೆ ಆಗಿದೆ ಎಂದು ಹೇಳಿದ್ದಾರೆ.
ಇನ್ನು ವಿರೋಧ ಪಕ್ಷಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಇದೇನು ಕೇಂದ್ರ ಸರಕಾರದ ನಿರ್ವಹಣೆಯ ಲೋಪವೋ ಅಥವಾ ಉದ್ದೇಶಪೂರ್ವಕ ನಡೆಯೇ ಎಂದು ಪ್ರಶ್ನಿಸಿವೆ. ಇನ್ನು ಎರಡು-ಮೂರು ದಿನದಲ್ಲಿ ಸಮಸ್ಯೆ ಸರಿಹೋಗುತ್ತದೆ. ಇದು ಕೇವಲ ತಾತ್ಕಾಲಿಕ ಎಂದು ಕೇಂದ್ರ ಸರಕಾರದ ಸ್ಪಷ್ಟೀಕರಣ ನೀಡಿದೆ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಉತ್ತರ ಭಾಗದಲ್ಲಿ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ಶೇ 85ರಷ್ಟು ಎಟಿಎಂಗಳು ಮಾಮೂಲಿನಂತೆ ಕಾರ್ಯ ನಿರ್ವಹಿಸುತ್ತಿವೆ. 500 ರುಪಾಯಿ ನೋಟುಗಳ ಚಲಾವಣೆಯನ್ನು ಇನ್ನು 7ರಿಂದ 10 ದಿನದಲ್ಲಿ ಹೆಚ್ಚಿಸಲಾಗುತ್ತದೆ ಎಂದು ಕೇಂದ್ರ ಹೇಳಿದೆ.
ಎರಡು ಸಾವಿರ ರುಪಾಯಿಯ ನೋಟು ಕಣ್ಮರೆ ಆಗುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.












Click it and Unblock the Notifications