ಫೆ.25ರಿಂದ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಭೀತಿ
ನವದೆಹಲಿ, ಫೆ.16: ಬ್ಯಾಂಕ್ ನೌಕರರು ವೇತನ ಪರಿಷ್ಕರಣೆಗೆ ಒತ್ತಾಯಿಸಿ ಮತ್ತೊಮ್ಮೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇಲ್ಲಿ ತನಕ ಯಾವುದೇ ಬೇಡಿಕೆಗಳು ಈಡೇರದಿರುವ ಹಿನ್ನೆಲೆಯಲ್ಲಿ ಫೆ. 25ರಿಂದ ನಾಲ್ಕು ದಿನ ಮುಷ್ಕರ ಹೂಡುವ ಸಾಧ್ಯತೆಯಿದೆ.
ಚೆನ್ನೈಯಲ್ಲಿ ನಡೆದ ಯೂನಿಯನ್ಗಳ ಸಭೆಯಲ್ಲಿ ಫೆ. 25ರಿಂದ ನಾಲ್ಕು ದಿನ ಸತತ ಮುಷ್ಕರ ಹೂಡುವ ಬಗ್ಗೆ ನಿರ್ಧರಿಸಲಾಗಿದೆ. ಶೇ. 13 ವೇತನ ಏರಿಕೆ ಪ್ರಸ್ತಾವನೆಯನ್ನು ನೌಕರರ ಯೂನಿಯನ್ ತಳ್ಳಿ ಹಾಕಿದೆ. ಶೇ 25ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ಬ್ಯಾಂಕ್ ನೌಕರರು ಒತ್ತಾಯಿಸುತ್ತಿದ್ದಾರೆ.

ನೌಕರರ ಶ್ರಮದಿಂದ ರಾಷ್ಟ್ರೀಕೃತ ಬ್ಯಾಂಕ್ಗಳು ಕಳೆದ 5 ವರ್ಷದಲ್ಲಿ 1.30 ಲಕ್ಷ ಕೋಟಿ ರೂ. ಲಾಭ ಗಳಿಸಿವೆ. ಅಲ್ಲದೆ, ಕಳೆದ ತ್ರೈಮಾಸಿಕವೂ ಉತ್ತಮವಾಗಿದೆ. ಆದ್ದರಿಂದ ವೇತನ ಹೆಚ್ಚಿಸಬೇಕು ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಅಧ್ಯಕ್ಷ ವೈ.ಸುದರ್ಶನ್ ಹೇಳಿದ್ದಾರೆ.
ಫೆ. 25ರ ಅನಂತರವೂ ಅನಂತರವೂ ವೇತನ ಏರಿಸುವ ಬೇಡಿಕೆ ಈಡೇರದಿದ್ದರೆ ಮಾ. 16ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡುವ ಸಾಧ್ಯತೆಯಿದೆ ಎಂದು ನೌಕರರ ಸಂಘ ಹೇಳಿದೆ.[ಬ್ಯಾಂಕ್ ನೌಕರರ ಮುಷ್ಕರ ಮುಂದೂಡಿಕೆ]
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕೂಡಲೇ ಮಧ್ಯ ಪ್ರವೇಶಿಸಿ ಬ್ಯಾಂಕ್ ನೌಕರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂದು ನೌಕರರು ಒತ್ತಾಯಿಸಿದ್ದಾರೆ. ಫೆ. 20ರಂದು ದೆಹಲಿಯಲ್ಲಿ ಮುಖ್ಯ ಕಾರ್ಮಿಕ ಆಯುಕ್ತರು ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ವಿವಾದ ಬಗೆ ಹರಿಯದಿದ್ದರೆ, ಬ್ಯಾಂಕ್ ಮುಷ್ಕರ ಎದುರಿಸಬೇಕಾಗುತ್ತದೆ.












Click it and Unblock the Notifications