ಕೇಂದ್ರ ಬಜೆಟ್ ನ 7 ಇಂಟರೆಸ್ಟಿಂಗ್ ಸಂಗತಿಗಳು
ಕೇಂದ್ರ ಬಜೆಟ್ ನಲ್ಲಿ ಈ ಬಾರಿ ಮಹತ್ತರ ಬದಲಾವಣೆಗಳಾಗಿವೆ. ಅವುಗಳ ಪೈಕಿ ಪ್ರಮುಖವಾದ, ಆಸಕ್ತಿಕರವಾದ ಏಳು ಸಂಗತಿಗಳು ಇಲ್ಲಿವೆ. ದಿನಾಂಕ ಬದಲಾವಣೆ, ಪ್ರತ್ಯೇಕ ರೈಲ್ವೆ ಬಜೆಟ್ ಇಲ್ಲದಿರುವುದು, ಅಪನಗದೀಕರಣ ನಂತರದ ಬಜೆಟ್ ಎಂಬ ನಿರೀಕ್ಷೆಗಳಿವೆ
ನವದೆಹಲಿ, ಜನವರಿ 25: ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಬಾರಿ ಮಂಡಿಸಲಿರುವ ಕೇಂದ್ರ ಬಜೆಟ್ ಗೆ ಬಹಳ ಮಹತ್ವ ಇದೆ. ಅಪನಗದೀಕರಣದ ಘೋಷಣೆ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ಮಂಡನೆ ಆಗುತ್ತಿರುವ ಮೊದಲ ಬಜೆಟ್ ಇದು. ಆರ್ಥಿಕತೆಗೆ ದೊಡ್ಡ ಹೊಡೆತವಾಗಿದ್ದ ನಕಲಿ ನೋಟು ಹಾಗೂ ಕಪ್ಪು ಹಣದ ಭೂತ ಬಿಡಿಸಿದ ತೃಪ್ತಿಯಲ್ಲಿ ಸರಕಾರವಿದೆ.
ಈ ಬಾರಿಯ ಬಜೆಟ್ ಇನ್ನೂ ಕೆಲವು ಕಾರಣದಿಂದ ಕುತೂಹಲ ಹಾಗೂ ನಿರೀಕ್ಷೆಗೆ ಕಾರಣವಾಗಿದೆ. ಈ ಹಿಂದೆ ಬಜೆಟ್ ಮಂಡನೆಯಾಗುತ್ತಿದ್ದದ್ದು ಫೆಬ್ರವರಿ 28ರಂದು. ಈ ಬಾರಿ ಫೆಬ್ರವರಿ 1ರಂದೇ ಮಂಡನೆಯಾಗುತ್ತದೆ. ರೈಲ್ವೆ ಬಜೆಟ್ ಅನ್ನು ಕೇಂದ್ರ ಬಜೆಟ್ ಜೊತೆ ಸೇರಿಸಿದ್ದು, ರೈಲ್ವೆಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಎಂದು ಇರುವುದಿಲ್ಲ.[ಬಜೆಟ್ ದಾಖಲೆ ತಯಾರಿಗೆ ಮುನ್ನ ಹಲ್ವಾ ಸವಿದ ಜೇಟ್ಲಿ]
ಇನ್ನು ಯೋಜನಾ ವೆಚ್ಚ ಹಾಗೂ ಯೋಜನೇತರ ವೆಚ್ಚ ಎಂಬ ವರ್ಗೀಕರಣ ಇರುವುದಿಲ್ಲ. ಅದರ ಬದಲಾಗಿ ಬಂಡವಾಳ ವೆಚ್ಚ ಹಾಗೂ ಆದಾಯ ವೆಚ್ಚ ಎಂದು ವರ್ಗೀಕರಿಸಲಾಗುತ್ತದೆ. ಬಜೆಟ್ ತಯಾರಿ ಹಿಂದಿನ ಕೆಲಸ-ಕಾರ್ಯಗಳು ಹಾಗೂ ಆಸಕ್ತಿಕರ ಸಂಗತಿಗಳನ್ನು ಇಲ್ಲಿ ತಿಳಿಸಲಾಗಿದೆ. 'ಮಿಂಟ್'ನಲ್ಲಿ ಬಂದ ಬಜೆಟ್ ಬಗೆಗಿನ ವರದಿಯಿದು.

ಈ ಬಾರಿ ಫೆಬ್ರವರಿ 1ರಂದೇ ಕೇಂದ್ರ ಬಜೆಟ್
2017-18ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ 1ರಂದೇ ಮಂಡಿಸಲಾಗುತ್ತದೆ. ಈ ವರೆಗೆ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 28ರಂದು ಮಂಡಿಸುವ ಪರಿಪಾಠವಿತ್ತು. ಈ ಹಿಂದೆ ರೈಲ್ವೆ ಬಜೆಟ್ ಪ್ರತ್ಯೇಕವಾಗಿತ್ತು. ಆದರೆ ಈ ಬಾರಿ ಕೇಂದ್ರ ಹಾಗೂ ರೈಲ್ವೆ ಬಜೆಟ್ ಎರಡನ್ನು ಸೇರಿಸಲಾಗಿದೆ.

ಸೆಪ್ಟೆಂಬರ್ ನಲ್ಲೇ ಕೇಂದ್ರ ಸಂಪುಟ ಒಪ್ಪಿಗೆ
ರೈಲ್ವೆ ಹಾಗೂ ಕೇಂದ್ರ ಬಜೆಟ್ ಒಟ್ಟಿಗೆ ಮಂಡಿಸುವುದಕ್ಕೆ, ಬಜೆಟ್ ದಿನಾಂಕವನ್ನು ಮುಂಚಿತವಾಗಿ ಹಾಕುವುದಕ್ಕೆ ಸೆಪ್ಟೆಂಬರ್ ನಲ್ಲೇ ಕೇಂದ್ರ ಸಂಪುಟ ಒಪ್ಪಿಗೆ ನೀಡಿತ್ತು. ಅದಕ್ಕಾಗಿನ ತಯಾರಿಯನ್ನು ವಿತ್ತ ಸಚಿವಾಲಯ ತುಂಬ ಹಿಂದೆಯೇ ಆರಂಭಿಸಿತ್ತು.ವಿವಿಧ ಇಲಾಖೆಗಳಿಂದ ಆದಾಯ-ವೆಚ್ಚದ ಮಾಹಿತಿಯನ್ನು ಕಲೆಹಾಕುವ ವಿತ್ತ ಸಚಿವಾಲಯ, ಬಜೆಟ್ ನ ಪರಿಷ್ಕೃತ ಅಂದಾಜನ್ನು ಮಾಡುತ್ತದೆ.

ನವೆಂಬರ್ ನಲ್ಲಿ ನಡೆದ ಬಜೆಟ್ ಪೂರ್ವ ಸಭೆ
ಕೈಗಾರಿಕೋದ್ಯಮಿಗಳು, ಆರ್ಥಿಕ ತಜ್ಞರು, ಕಾರ್ಮಿಕರ ಒಕ್ಕೂಟ, ರೈತರು ಮತ್ತು ಆಯಾ ರಾಜ್ಯಗಳ ಹಣಕಾಸು ಸಚಿವರ ಜತೆಗೆ ಕಳೆದ ನವೆಂಬರ್ ನಲ್ಲೇ ಬಜೆಟ್ ಪೂರ್ವ ಸಭೆಗಳು ನಡೆದಿವೆ. ಸಾಮಾನ್ಯವಾಗಿ ಈ ಸಭೆಗಳು ಡಿಸೆಂಬರ್, ಜನವರಿಯಲ್ಲಿ ನಡೆಯುತ್ತಿದ್ದವು. ಪ್ರಧಾನಿ ಕಾರ್ಯಾಲಯದ ಜತೆಗೆ ಚರ್ಚಿಸಿ ಬಜೆಟ್ ಸಿದ್ಧಪಡಿಸಲಾಗುತ್ತದೆ.

ಆರ್ಥಿಕತೆಗೆ ಚೈತನ್ಯ
ಈ ವರ್ಷ ವಿತ್ತ ಸಚಿವ ಅರುಣ್ ಜೇಟ್ಲಿ ಸಾರ್ವಜನಿಕ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಿಡುವ ನಿರೀಕ್ಷೆಯಿದೆ. ಕೇಂದ್ರ ಸರಕಾರ ಅಪನಗದೀಕರಣ ಘೋಷಣೆ ಮಾಡಿದ ನಂತರ ಆರ್ಥಿಕತೆಗೆ ಚೈತನ್ಯ ತುಂಬಬೇಕು. ಆ ಕಾರಣಕ್ಕೆ ಇಂಥದ್ದೊಂದು ನಿರೀಕ್ಷೆ ಇದೆ.

ಬಜೆಟ್ ತಯಾರಿ ಎಂಬ ರಹಸ್ಯ ಕಾರ್ಯಾಚರಣೆ
ಬಜೆಟ್ ತಯಾರಿ ಪ್ರಕ್ರಿಯೆ ತೀರಾ ರಹಸ್ಯವಾಗಿ ನಡೆಯುತ್ತದೆ. ಗುಪ್ತಚರ ಇಲಾಖೆ ಅಧಿಕಾರಿಗಳು ಯಾವುದೇ ಬಜೆಟ್ ಮಾಹಿತಿ ಹೊರಹೋಗದಂತೆ ಎಚ್ಚರ ವಹಿಸುತ್ತಾರೆ. ನವದೆಹಲಿಯ ಸಂಸತ್ ಭವನದ ಬಳಿಯಿರುವ ನಾರ್ಥ್ ಬ್ಲಾಕ್ ಕಟ್ಟಡದಲ್ಲಿ ಕಟ್ಟೆಚ್ಚರ ಇರುತ್ತದೆ. ಏಕೆಂದರೆ ವಿತ್ತ ಸಚಿವಾಲಯ ಇರುವ ಕಟ್ಟಡ ಅದು. ಡಿಸೆಂಬರ್ ನಲ್ಲೇ ಮಾಧ್ಯಮಗಳಿಗೆ ಪ್ರವೇಶ ಇರುವುದಿಲ್ಲ. ನಾರ್ಥ್ ಬ್ಲಾಕ್ ನಲ್ಲಿರುವ ಪ್ರಿಂಟಿಂಗ್ ಪ್ರೆಸ್ ನಲ್ಲಿ ಬಜೆಟ್ ದಾಖಲೆಗಳ ಮುದ್ರಣ ನಡೆಯುತ್ತದೆ.

ಹೊರ ಜಗತ್ತಿನ ಸಂಪರ್ಕ ಕಡಿತ
ಬಜೆಟ್ ಗೆ ಒಂದು ವಾರದ ಮೊದಲೇ ಬಜೆಟ್ ತಯಾರಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಧಿಕಾರಿಗಳು ಹೊರಜಗತ್ತಿನ ಯಾರನ್ನು ಸಂಪರ್ಕಿಸದಂತೆ ಎಚ್ಚರ ವಹಿಸಲಾಗುತ್ತದೆ. ಬಜೆಟ್ ನ ಮಾಹಿತಿ ಹೊರಹೋಗದಿರಲು ಈ ಕ್ರಮ ಕೈಗೊಳ್ಳಲಾಗುತ್ತದೆ.

ಮೂರು ಭಾಷೆಯಲ್ಲಿ ಪತ್ರಿಕಾ ಪ್ರಕಟಣೆ
ಬಜೆಟ್ ಭಾಷಣದ ಎರಡು ದಿನ ಮೊದಲು ಪ್ರೆಸ್ ಇನ್ ಫರ್ಮೇಷನ್ ಬ್ಯುರೋದ ಇಪ್ಪತ್ತು ಅಧಿಕಾರಿಗಳ ತಂಡವು ಪತ್ರಿಕಾ ಪ್ರಕಟಣೆಗಳನ್ನು ಸಿದ್ಧಪಡಿಸುತ್ತಾರೆ. ಅದು ಇಂಗ್ಲಿಷ್, ಹಿಂದಿ ಹಾಗೂ ಉರ್ದು ಭಾಷೆಯಲ್ಲಿರುತ್ತದೆ. ವಿತ್ತ ಸಚಿವರು ಸಂಸತ್ ನಲ್ಲಿ ಬಜೆಟ್ ಭಾಷಣ ಪೂರ್ಣಗೊಳಿಸುವವರೆಗೆ ಆ ಅಧಿಕಾರಿಗಳು ವಿತ್ತ ಸಚಿವಾಲಯದ ಕಟ್ಟಡ ಬಿಟ್ಟು ಹೋಗದಂತೆ ನೋಡಿಕೊಳ್ಳಲಾಗುತ್ತದೆ. ಸಂಸತ್ ನಲ್ಲಿ ಬಜೆಟ್ ದಿನ ಮಂಡನೆಯಾಗುವ ಹತ್ತು ನಿಮಿಷದ ಮೊದಲು, ಬಜೆಟ್ ನ ಹೂರಣದ ಬಗ್ಗೆ ಸಂಪುಟಕ್ಕೆ ಮಾಹಿತಿ ನೀಡಲಾಗುತ್ತದೆ.












Click it and Unblock the Notifications