2ಜಿ ಹಗರಣ ತೀರ್ಪು ಪ್ರಕಟ, ಟೆಲಿಕಾಂ ಕಂಪನಿ ಷೇರುಗಳು ಜಿಗಿತ
ಬೆಂಗಳೂರು, ಡಿಸೆಂಬರ್ 21: ಬಹುಕೋಟಿ 2ಜಿ ತರಂಗಗುಚ್ಛ ಹಂಚಿಕೆ ಪ್ರಕರಣದ ತೀರ್ಪು ಗುರುವಾರದಂದು ಪ್ರಕಟಗೊಂಡಿದೆ. ಅಂದಿನ ಟೆಲಿಕಾಂ ಸಚಿವ ಎ.ರಾಜಾ ಸೇರಿದಂತೆ ಎಲ್ಲಾ ಆರೋಪಿಗಳು ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ. ಸುದ್ದಿ ಹಬ್ಬುತ್ತಿದ್ದಂತೆ ಷೇರುಪೇಟೆಯಲ್ಲಿ ಟೆಲಿಕಾಂ ಷೇರುಗಳ ಜಿಗಿತ ಕಂಡು ಬಂದಿದೆ.
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ. ಓ ಪಿ ಸೈನಿ ಅವರು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಗುರುವಾರದಂದು ಆದೇಶ ಹೊರಡಿಸುತ್ತಿದ್ದಂತೆ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ನಾಯಕ ಎ. ರಾಜಾ, ಎಂ ಕರುಣಾನಿಧಿ ಅವರ ಪುತ್ರಿ ಕನ್ನಿಮೋಳಿ ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ.

ಇತ್ತ ಷೇರುಪೇಟೆಯಲ್ಲಿ ಈ ಕಂಪನಿಗಳ ಷೇರುಗಳು ಏರಿಕೆ ಕಂಡವು: ಯುನಿಟೆಕ್ ಲಿಮಿಟೆಡ್ ಶೇ20 ರಷ್ಟು, ಡಿಬಿ ರಿಯಾಲ್ಟಿ ಲಿಮಿಟೆಡ್ ಶೇ 20, ರಿಲಯನ್ಸ್ ಕಮ್ಯೂನಿಕೇಷನ್ ಲಿಮಿಟೆಡ್ ಶೇ 13.37, ಸನ್ ಟಿವಿ ನೆಟ್ವರ್ಕ್ ಲಿಮಿಟೆಡ್ ಶೇ 6, ಐಡಿಯಾ ಸೆಲ್ಯುಲಾರ್ ಲಿಮಿಟೆಡ್ ಶೇ3 ಹಾಗೂ ಭಾರ್ತಿ ಏರ್ ಟೆಲ್ ಲಿಮಿಟೆಡ್ ಶೇ 0.2ರಷ್ಟು ಏರಿಕೆಯಾಗಿದೆ.
2008ರಲ್ಲಿ 122 ಲೈಸನ್ಸ್ ಗಳು ಹಂಚಿಕೆಯಾಗಿದ್ದು, ನಾರ್ವೆಯ ಟೆಲ್ನಾರ್ ಎಎಸ್ಎ, ಯುಎಇಯ ಎಟಿಸಲಾಟ್, ರಷ್ಯಾದ ಎಎಫ್ ಕೆ ಸಿಸ್ಟೆಮಾ ಕೂಡಾ ಫಲಾನುಭವಿಗಳಾಗಿವೆ. ಇದಲ್ಲದೆ ರಾಜಾ ಅವರಿಂದ ಸ್ವಾನ್ ಟೆಲಿಕಾಂ, ವಿಡಿಯೋಕಾನ್, ಎಸ್ ಟೆಲ್ ಹಾಗೂ ಏರ್ ಸೆಲ್ ಕಂಪನಿಗೂ ಲಾಭವಾಗಿದೆ.
ಮಾಜಿ ಮಹಾ ಲೆಕ್ಕ ಪರಿಶೋಧಕ ವಿನೋದ್ ರೈ ಅವರು 2ಜಿ ಹಗರಣದ ಮೊತ್ತ 1.76 ಲಕ್ಷ ಕೋಟಿ ರುಪಾಯಿ - ಎಂದು ವರದಿ ನೀಡಿದ್ದರು. ಆದರೆ, ಈ ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟದ ಮೊತ್ತ 30,000 ಕೋಟಿ ರು ಎಂದು ಸಿಬಿಐ ವರದಿ ನೀಡಿದೆ.












Click it and Unblock the Notifications