ಬೀದರ್ ಜನತೆಗೆ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ
ಬೀದರ್, ಸೆಪ್ಟೆಂಬರ್ 19; ಕೇಂದ್ರ ಸರ್ಕಾರ ಕರ್ನಾಟಕದ ಬೀದರ್ ಜಿಲ್ಲೆಯ ಜನರಿಗೆ ಕೊಡುಗೆಯೊಂದನ್ನು ನೀಡಿದೆ. ಸಂಸದ, ಕೇಂದ್ರ ಸಚಿವ ಭಗವಂತ್ ಖೂಬಾ ಈ ಕುರಿತು ಮಾಹಿತಿ ನೀಡಿದ್ದಾರೆ.
ಬೀದರ್ ಜಿಲ್ಲೆಗೆ ಕೇಂದ್ರ ಸರ್ಕಾರ ದೇಶದ ಪ್ರತಿಷ್ಠಿತ ಶಾಲೆಯಾದ ಸೈನಿಕ ಶಾಲೆ ಮಂಜೂರು ಮಾಡಿದೆ. ದೇಶದ 23 ನಗರದಲ್ಲಿ ಈ ಮಾದರಿಯ ಶಾಲೆಗಳು ಆರಂಭವಾಗಲಿದ್ದು, ಕರ್ನಾಟಕದಲ್ಲಿ ಬೀದರ್ಗೆ ಈ ಶಾಲೆ ಮಂಜೂರು ಮಾಡಿದೆ ಎಂದು ಬೀದರ್ ಸಂಸದ ಭಗವಂತ ಖೂಬಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬೀದರ್ ನಗರದ ಎಚ್. ಕೆ. ಇ. ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ನ್ಯಾಷನಲ್ ಇಂಗ್ಲಿಷ್ ಮೆಡಿಯಮ್ ಪಬ್ಲಿಕ್ ಶಾಲೆ ಆವರಣದಲ್ಲಿ ಈ ಸೈನಿಕ ಶಾಲೆ ಸುಮಾರು 8 ಎಕರೆ ಜಾಗದಲ್ಲಿ ನಿರ್ಮಾಣವಾಗಲಿದೆ.
24 ಎಕರೆಯ ಯೋಜನೆ; ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಭಾರತೀಯ ನೌಕಾ ಅಕಾಡೆಮಿಗೆ ಪ್ರವೇಶಿಸಲು ಸಿದ್ಧಪಡಿಸುವುದು ಶಾಲೆಯ ಮುಖ್ಯ ಉದ್ದೇಶವಾಗಿದೆ.
ಬೀದರ್ ಭಾಗದ ಮಕ್ಕಳು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಭಾರತೀಯ ನೌಕಾ ಅಕಾಡೆಮಿಗೆ ಸೇರಲು ಈ ಶಾಲೆ ಸಹಾಯಕವಾಗಲಿದೆ. ದೇಶದ ರಕ್ಷಣಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ಜಿಲ್ಲೆ ನೀಡಲಿದೆ ಎಂದು ಸಂಸದರು ಹೇಳಿದ್ದಾರೆ.
ಈ ಶಾಲೆ ಸುಮಾರು 8 ಎಕರೆ ಜಾಗದಲ್ಲಿ ನಿರ್ಮಾಣವಾಗಲಿದೆ. ಹಾಸ್ಟೆಲ್ ಮತ್ತು ಇತರ ಸೌಲಭ್ಯಗಳು ಸೇರಿ ಸುಮಾರು 24 ಎಕರೆ ಜಾಗ ಬೇಕು ಎಂದು ಅಂದಾಜಿಸಲಾಗಿದೆ. ರಾಜ್ಯ ಸರ್ಕಾರ ಅನುದಾನ ನೀಡಿದ ಕೂಡಲೇ ಕಾಮಗಾರಿ ಆರಂಭವಾಗಲಿದೆ. ಆದರೆ ಈ ವರ್ಷದಿಂದ ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಶೈಕ್ಷಣಿಕ ತರಗತಿಗಳನ್ನು ಆರಂಭಿಸಲಾಗುತ್ತದೆ.
ಸಂಸದರು ಬೀದರ್ನಲ್ಲಿ ಸೈನಿಕ ಶಾಲೆಗಾಗಿ ಎಚ್. ಕೆ. ಇ. ಸೊಸೈಟಿಯವರು ಅಗತ್ಯ ಸಹಕಾರ ನೀಡಿದ್ದಾರೆ. ಕಳೆದ ವರ್ಷ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿ ಶಾಲೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಸಂಸತ್ ಉಭಯ ಸದನಗಳ ವಿಶೇಷ ಅಧಿವೇಶನ ನಡೆಯುತ್ತಿದ್ದು, ಸಚಿವ ಭಗವಂತ್ ಖೂಬಾ ನವದೆಹಲಿಯಲ್ಲಿದ್ದಾರೆ. ಅವರು ಸಂಸತ್ ಭವನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾದರು. 'ಕಲ್ಯಾಣ ಕರ್ನಾಟಕ ಉತ್ಸವದಂದು, ನಮ್ಮ ಬೀದರ್ ಜಿಲ್ಲೆಗೆ ನನ್ನ ಬೇಡಿಕೆಯಂತೆ ಸೈನಿಕ ಶಾಲೆಯನ್ನು ಮಂಜೂರು ಮಾಡಿದ ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರನ್ನು ದೆಹಲಿಯ ಸಂಸತ್ ಭವನದಲ್ಲಿ ಭೇಟಿ ಮಾಡಿ, ನನ್ನ ಹಾಗೂ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು' ಎಂದು ಪೋಸ್ಟ್ ಹಾಕಿದ್ದಾರೆ.
ಬೀದರ್ನಲ್ಲಿ ಸೈನಿಕ ಶಾಲೆಗಾಗಿ ಅಗತ್ಯ ಇರುವ ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಶೀಘ್ರವೇ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಸಂಸದರು ಭರವಸೆ ನೀಡಿದ್ದಾರೆ. ಸೈನಿಕ ಶಾಲೆ ಮಂಜೂರು ಮಾಡಿದ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಗೆ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
2022ರಲ್ಲಿ 33 ಸೈನಿಕ ಶಾಲೆಗಳು ದೇಶದಲ್ಲಿ ಇದ್ದವು. ಕೇಂದ್ರ ಸರ್ಕಾರ ಇದೇ ಮಾದರಿಯ 100 ಶಾಲೆಗಳನ್ನು ರಾಜ್ಯ/ ಕೇಂದ್ರಾಡಳಿತ ಪ್ರದೇಶದಲ್ಲಿ ತೆರೆಯಲಾಗುತ್ತದೆ ಎಂದು ಹೇಳಿತ್ತು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪ್ರವೇಶಕ್ಕಾಗಿ ಕೆಡೆಟ್ಗಳನ್ನು ಶೈಕ್ಷಣಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧಪಡಿಸುವುದು. ರಕ್ಷಣಾ ಸೇವೆಗಳ ಅಧಿಕಾರಿ ವರ್ಗದಲ್ಲಿನ ಪ್ರಾದೇಶಿಕ ಅಸಮತೋಲನವನ್ನು ತೆಗೆದುಹಾಕುವುದು, ಇಂದಿನ ಯುವ ಕೆಡೆಟ್ಗಳು ನಾಳಿನ ಉತ್ತಮ ಮತ್ತು ಉಪಯುಕ್ತ ನಾಗರಿಕರಾಗಲು ಅನುವು ಮಾಡಿಕೊಡುವ ದೇಹ, ಮನಸ್ಸು ಮತ್ತು ಚಾರಿತ್ರ್ಯದ ಗುಣಗಳನ್ನು ಅಭಿವೃದ್ಧಿಪಡಿಸುವುದು. ಸಾರ್ವಜನಿಕ ಶಾಲಾ ಶಿಕ್ಷಣವನ್ನು ಸಾಮಾನ್ಯ ಜನರ ವ್ಯಾಪ್ತಿಯೊಳಗೆ ತರುವುದು ಈ ಶಾಲೆಗಳ ಉದ್ದೇಶವಾಗಿದೆ.












Click it and Unblock the Notifications