ರಾಷ್ಟ್ರೀಯ ಶಿಕ್ಷಣ ನೀತಿ ವ್ಯಾಪ್ತಿಗೆ ಕಾನೂನು, ವೈದ್ಯಕೀಯ ಶಿಕ್ಷಣವಿಲ್ಲ
ಶಿವಮೊಗ್ಗ, ಅಕ್ಟೋಬರ್ 11; " ಕಾನೂನು ಶಿಕ್ಷಣ ಹಾಗೂ ವೈದ್ಯಕೀಯ ಶಿಕ್ಷಣ ಹೊರತುಪಡಿಸಿ ರಾಷ್ಟ್ರಿಯ ಶಿಕ್ಷಣ ನೀತಿ 2020 ಜಾರಿಗೊಳಿಸಲಾಗುತ್ತಿದೆ" ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದರು.
ಬೀದರ್ನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, "ಹೊಸ ಶಿಕ್ಷಣ ನೀತಿಯಲ್ಲಿ ಕೆಲವು ಖಾಸಗಿ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಶಿಕ್ಷಣ ಸಂಸ್ಥೆಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಸೌಕರ್ಯಕ್ಕೆ ಅವಕಾಶ ನೀಡಲಾಗುತ್ತಿದೆ" ಎಂದು ತಿಳಿಸಿದರು.
"ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕ, ಹೊಸ ಹೊಸ ಕಾಲೇಜುಗಳ ಸ್ಥಾಪನೆಯಂತಹ ಹಲವಾರು ಪ್ರಕ್ರಿಯೆಗಳ ವೇಗಗೊಳಿಸುವ ಪ್ರಯತ್ನವನ್ನು ಹೊಸ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗುತ್ತಿದೆ" ಎಂದು ಸಚಿವರು ಮಾಹಿತಿ ನೀಡಿದರು.
"ನೇಮಕಾತಿಗೆ, ಮೌಲ್ಯಮಾಪನಕ್ಕೆ, ಉದ್ಯೋಗವಕಾಶಕ್ಕೆ ಸಾಕಷ್ಟು ಅನುಕೂಲತೆ ಕಲ್ಪಿಸಲು ಮತ್ತು ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆಯಂತಹ ಹೊಸ ಹೊಸ ಪ್ರಯೋಗದ ಅವಕಾಶಗಳನ್ನು ಈ ಹೊಸ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗಿದೆ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಈ ಹೊಸ ಶಿಕ್ಷಣ ನೀತಿ ಜಾರಿಗೆ ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಕಲಿಕೆಯಲ್ಲಿ ದೊಡ್ಡಮಟ್ಟದ ಸುಧಾರಣೆ ತರಲಾಗುತ್ತಿದೆ" ಎಂದು ಸಚಿವರು ವಿವರಿಸಿದರು.
ಸಚಿವರು, ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್, ಶಾಸಕರಾದ ರಹೀಂ ಖಾನ್, ಶಾಸಕ ಶರಣು ಸಲಗರ ಮುಂತಾದವರು ಇಂದು ಬೀದರ್ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಹೆಚ್ಚುವರಿ ತರಗತಿ ಕಟ್ಟಡ
ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ತರಗತಿ ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು.
"ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ಉಪನ್ಯಾಸಕರು ಮುತುವರ್ಜಿ ವಹಿಸಬೇಕು. ಹೊಸ ಶಿಕ್ಷಣ ನೀತಿಯಡಿ ಟ್ಯಾಬ್ ಕೊಡುವುದು ಇನ್ನು ಮುಂದೆ ಒಂದು ಪದ್ಧತಿಯಾಗಿ ಉಳಿಯಲಿದೆ" ಎಂದರು.

ಭೂಮಿ ವರ್ಗಾವಣೆಗೆ ಒತ್ತು
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬೀದರನ ಹಳೆಯ ಕಟ್ಟಡವನ್ನು ಭೂಮಿ ಸಮೇತವಾಗಿ ಕಾಲೇಜಿನ ಹೆಸರಿಗೆ ವರ್ಗಾಯಿಸಿಕೊಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಶಾಸಕರಾದ ರಹೀಂ ಖಾನ್ ಮಾತನಾಡಿ, "ಮಹಿಳಾ ಕಾಲೇಜಿನ ಕಟ್ಟಡವು 70 ವರ್ಷದಷ್ಟು ಹಳೆಯದಾಗಿದೆ. ಮಳೆಯಿಂದ ಕಟ್ಟಡಗಳು ಸೋರುತ್ತಿವೆ. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯಿಂದ ಸಹಾಯ ಸಿಗಬೇಕಿದೆ" ಎಂದು ಮನವಿ ಮಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ
"ಶಿಕ್ಷಣವನ್ನು ಉತ್ತಮಗೊಳಿಸುವ, ಸಮಾಜದಲ್ಲಿ ಸುಧಾರಣೆ ತರುವ ಮತ್ತು ಯುವಕರಿಗೆ ಉತ್ತಮ ಭವಿಷ್ಯ ಕೊಡಲು ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿ ಮಾಡಲಾಗುತ್ತಿದೆ" ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದರು.
"34 ವರ್ಷದ ನಂತರ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿ ಈ ಮೂಲಕ ಜಾರಿಯಾಗುತ್ತಿದೆ. ಎಲ್ಲರೊಂದಿಗೆ ಸಮಾಲೋಚಿಸಿ ಜಾರಿ ಮಾಡಿದ ಶಿಕ್ಷಣ ನೀತಿ ಇದಾಗಿದೆ. 15 ವರ್ಷದೊಳಗೆ ಸಾಧಿಸುವ ಗುರಿ ಇದಾಗಿದೆ. ಇದು ಹಂತಹಂತವಾಗಿ ಜಾರಿಯಾಗುವ ಪ್ರಕ್ರಿಯೆಯಾಗಿದೆ" ಎಂದರು.
"ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯು ಎಲ್ಲರೂ ಸೇರಿ, ಇಡೀ ಸಮುದಾಯ ಬಲವಾಗಿ ನಂಬುವಂತಹ ಪ್ರಯತ್ನವಾಗಿದೆ. ಅಡೆತಡೆ ಇಲ್ಲದೇ ಶಿಕ್ಷಣ ಸಂಸ್ಥೆಗಳು ನಡೆದುಕೊಂಡು ಹೋಗಲು ಸಹಕಾರ ಕೊಡುವ ಪ್ರಯತ್ನವಾಗಿದೆ. ಒಬ್ಬ ವಿದ್ಯಾರ್ಥಿಯು ತನ್ನ ಆಸಕ್ತಿ ಮತ್ತು ಸಾಮರ್ಥ್ಯದ ಕ್ಷೇತ್ರದಲ್ಲಿ ಹೇಗೆ ಮುಂದುವರೆಯಬೇಕು ಎಂದು ಸಹಕಾರ ನೀಡುವ ಪ್ರಯತ್ನವಿದು" ಎಂದರು.
Recommended Video

ಅಪಪ್ರಚಾರಕ್ಕೆ ಕಿವಿಗೊಡಬೇಡಿ
"ಹೊಸ ಶಿಕ್ಷಣ ನೀತಿ ಜಾರಿಯು ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಭಾರತೀಯತೆಯನ್ನು ಮುಖ್ಯವಾಗಿಟ್ಟುಕೊಂಡು ಭಾರತವೇ ಜ್ಞಾನದ ಕೇಂದ್ರವನ್ನಾಗಿಸಲು, ಭಾರತ ಇಡೀ ವಿಶ್ವಕ್ಕೆ ಗುರುವಾಗಬೇಕು ಎಂದು ಆಲೋಚಿಸಿ ಮಾಡುತ್ತಿರುವ ಪ್ರಯತ್ನವಾಗಿದೆ. ಹೀಗಾಗಿ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಬರೀ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗಿದೆ, ಅಲ್ಪಸಂಖ್ಯಾತರಿಗೆ ವಿರೋಧವಾಗಿದೆ ಎನ್ನುವ ಅಪಾದನೆಯನ್ನು ಯಾರು ಕೂಡ ನಂಬಬಾರದು" ಎಂದು ಸಚಿವರು ಸ್ಪಷ್ಟಪಡಿಸಿದರು.












Click it and Unblock the Notifications