ಬ್ರಿಮ್ಸ್ ಕಾಲೇಜು ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಸಚಿವ ಕೆ.ಸುಧಾಕರ್ ಆಕ್ರೋಶ
ಬೀದರ್, ಏಪ್ರಿಲ್ 30: ಬೀದರ್ನಲ್ಲಿನ ಬ್ರಿಮ್ಸ್ ಕಾಲೇಜು ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೆಂಡಾಮಂಡಲರಾಗಿದ್ದಾರೆ.
ವೈದ್ಯರು ಮತ್ತು ಸಿಬ್ಬಂದಿಯ ಸಮರ್ಪಕ ಬಳಕೆ ಮಾಡದ ಬ್ರಿಮ್ಸ್ ನಿರ್ದೇಶಕರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡ ಸಚಿವರು, ಏಳು ನೂರಕ್ಕೂ ಹೆಚ್ಚು ಸಿಬ್ಬಂದಿ ಇದ್ದರೂ, ಕೋವಿಡ್ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲು ನಿಯೋಜಿಸಿರುವ ಸಿಬ್ಬಂದಿ ಸರಿಯಾಗಿ ಮಾಹಿತಿ ನೀಡಲು ವಿಫಲವಾಗಿದ್ದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸೋಂಕಿತರಿಗೆ ಔಷಧಗಳ ಕಿಟ್ ನೀಡಿಲ್ಲ
ರಾತ್ರಿ ಪಾಳಿಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇರುವುದಿಲ್ಲ. ರೋಗಿ ಸಂಬಂಧಿಗಳನ್ನು ವಾರ್ಡ್ಗೆ ಬಿಡುತ್ತಿರುವುದರ ಬಗ್ಗೆ ಸಿಇಒ ಅವರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಸಚಿವರು, ರೋಗದ ಹರಡುವಿಕೆ ತಡೆಯಲು ಮಾರ್ಗಸೂಚಿ ಅನ್ವಯ ಕರ್ತವ್ಯ ನಿರ್ವಹಿಸಬೇಕು. ಹೋಮ್ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ಔಷಧಗಳ ಕಿಟ್ ನೀಡದಿರುವ ಮತ್ತು ನಿಗಾ ವ್ಯವಸ್ಥೆ ರೂಪಿಸದಿರುವ ಬಗ್ಗೆಯೂ ಅಧಿಕಾರಿಗಳ ವಿರುದ್ಧ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಬೇಕು
ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು, ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಈ ಕೆಲಸಕ್ಕೆ ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ತೆಲಂಗಾಣ ಮತ್ತು ಆಂಧ್ರಪ್ರದೇಶದ ಸೋಂಕಿತರು ಬಂದರೂ ಚಿಕಿತ್ಸೆ ನೀಡಲು ಅಗತ್ಯ ಸಿಬ್ಬಂದಿ ಇದೆ. ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಇದು ಯುದ್ಧದ ಸಮಯ
ಯಾವುದೇ ಕಾರ್ಪೋರೇಟ್ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ವೈದ್ಯರು ಮತ್ತು ಸಿಬ್ಬಂದಿ ಇದ್ದರೂ ಕರ್ತವ್ಯಕ್ಕೆ ಹಾಜರಾಗದಿದ್ದರೆ ಹೇಗೆ? ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿಯೋಜನೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಇದು ಯುದ್ಧದ ಸಮಯ, ಇಂತಹ ಸಂದರ್ಭದಲ್ಲಿ ಹೌಸ್ ಸರ್ಜನ್ಸ್, ರೆಸಿಡೆಂಟ್ ಡಾಕ್ಟರ್ಸ್, ಪಿಜಿ ಸ್ಟೂಡೆಂಟ್ಸ್ ಗಳು ಕಡ್ಡಾಯವಾಗಿ ಕೋವಿಡ್ ಕರ್ತವ್ಯದಲ್ಲಿ ಪಾಲ್ಗೊಳ್ಳಬೇಕು. ಟೆಲಿಕಾಲ್, ಕೌನ್ಸೆಲಿಂಗ್ ನಂತಹ ಕರ್ತವ್ಯದಲ್ಲಿ ನಿಯೋಜನೆ ಮಾಡಬೇಕು ಎಂದು ತಾಕೀತು ಮಾಡಿದರು.

ಪಿಪಿಇ ನೀಡದಕ್ಕೆ ತರಾಟೆ
ವಾರ್ಡ್ ಮತ್ತು ಐಸಿಯುಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗೆ ಸರಿಯಾದ ರೀತಿಯಲ್ಲಿ ಪಿಪಿಇ ಕಿಟ್ ನೀಡದಿರುವುದನ್ನು ಕಂಡು ಆರೋಗ್ಯ ಸಚಿವರು ಕೆಂಡಾಮಂಡಲರಾದರು. ಉತ್ತಮ ಗುಣಮಟ್ಟದ ವಸ್ತುಗಳನ್ನು ಕಳುಹಿಸಿದ್ದರೂ ನೀಡದ್ದಕ್ಕೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಲ್ಲದೆ, ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಜಿಲ್ಲಾ ಪಂಚಾಯತ್ ಸಿಇಒ ಜಹೀರಾ ನಸೀಂ ಅವರಿಗೆ ಸೂಚನೆ ನೀಡಿದರು.
ಸಿಟಿ ಸ್ಕ್ಯಾನರ್ ಕೆಲಸ ಮಾಡದ್ದನ್ನೂ ತಿಳಿದ ಸಚಿವರು ಸಂಜೆ ವೇಳೆಗೆ ಅದನ್ನು ಸುಸ್ಥಿತಿಗೆ ತರಬೇಕು. ಹೆಚ್ಚುವರಿಯಾಗಿ ಮತ್ತೊಂದು ಸಿಟಿ ಸ್ಕ್ಯಾನರ್ ಖರೀದಿಸಲು ಸ್ಥಳದಲ್ಲೇ ಆದೇಶ ನೀಡಿದರು. ಈ ವೇಳೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಚವ್ಹಾಣ್, ಸಂಸದರಾದ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಕಾಶೆಂಪೂರ್, ನಹೀಂಖಾನ್ ಮತ್ತಿತರಿದ್ದರು.












Click it and Unblock the Notifications