ಸರ್ಕಾರಿ ಬಸ್ ಟಿಕೆಟ್ನಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನ ಜಾಗೃತಿ
ಬೀದರ್, ಜುಲೈ 05; ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚಾರ ನಡೆಸುವ ಜನರಲ್ಲಿ ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಿದೆ. ಸೋಮವಾರದಿಂದ ಶೇ 100ರಷ್ಟು ಪ್ರಯಾಣಿಕರು ಬಸ್ಗಳಲ್ಲಿ ಸಂಚಾರ ನಡೆಸಲು ಅನುಮತಿ ನೀಡಲಾಗಿದೆ.
ಕರ್ನಾಟಕ ಸರ್ಕಾರದ ಅನ್ಲಾಕ್ ಮಾರ್ಗಸೂಚಿ ಪ್ರಕಾರ ನಮ್ಮ ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಶೇ. 100ರಷ್ಟು ಪ್ರಮಾಣಿಕರು ಸಂಚಾರ ನಡೆಸಲು ಅವಕಾಶವಿದೆ. ಸೋಮವಾರದಿಂದ ಮಾರ್ಗಸೂಚಿ ಜಾರಿಗೆ ಬಂದಿದೆ.
ಬಸ್ ಸಂಚಾರ ಆರಂಭಗೊಂಡ ಹಿನ್ನಲೆಯಲ್ಲಿ ಬೀದರ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೋವಿಡ್ ತಪಾಸಣೆ ನಿಮಿತ್ತ ದೇಹದ ತಾಪಮಾನ ಪರಿಶೀಲಿಸಲಾಯಿತು. ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಲಾಯಿತು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸುವವರಿಗೆ ನೀಡುವ ಟಿಕೆಟ್ ಮೇಲೆ ಕೋವಿಡ್ ನಿಯಂತ್ರಿಸಲು ಲಸಿಕೆ ಹಾಕಿಸಿಕೊಳ್ಳಿರಿ. ಮಾಸ್ಕ್ ಧರಿಸಿ ಪ್ರಯಾಣಿಸಿರಿ ಎಂದು ಮುದ್ರಿಸಿ ಕೋವಿಡ್ ಹರಡುವಿಕೆ ಕುರಿತು ಜಾಗೃತಿ ಮೂಡಿಸುತ್ತಿದೆ.
ಲಸಿಕೆ ಹಾಕುವ ಕಾರ್ಯಕ್ರಮ; ಬೀದರ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ 18 ಮತ್ತು 45 ವರ್ಷ ಮೇಲ್ಪಟ್ಟ ವಯೋಮಾನದವರಿಗೆ, ಹಾಲುಣಿಸುವ ತಾಯಂದಿರರಿಗೆ, ವಿಕಲಚೇತನರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಕಾರ್ಯ ನಡೆಯುತ್ತಿದೆ.
ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಸೂಚನೆಯಂತೆ ಸಹಾಯಕ ಆಯುಕ್ತರು, ತಹಸೀಲ್ದಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಲಸಿಕೆ ಹಾಕುವ ಪ್ರಕ್ರಿಯೆ ಸರಾಗವಾಗಿ ನಡೆಸಲು ಸಹಕಾರ ನೀಡುತ್ತಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಜುಲೈ 1ರ ತನಕ 5,58,881 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. 24,183 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಇದರಲ್ಲಿ 23,757 ಜನರು ಗುಣಮುಖರಾಗಿದ್ದಾರೆ. 393 ಜನರು ಮೃತಪಟ್ಟಿದ್ದಾರೆ. ಜುಲೈ 2ರ ಮಾಹಿತಿಯಂತೆ ಸಕ್ರಿಯ ಪ್ರಕರಣಗಳು 30. ಪಾಸಿಟಿವಿಟಿ ದರ ಶೇ 4.33.












Click it and Unblock the Notifications