ಫೋನಿ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆ
ಭುವನೇಶ್ವರ್ (ಒಡಿಶಾ), ಮೇ 5: ಫೋನಿ ಚಂಡಮಾರುತದಿಂದ ಮೃತ ಪಟ್ಟವರ ಸಂಖ್ಯೆ ಮೇ 5ನೇ ತಾರೀಕಿಗೆ 29ಕ್ಕೆ ಏರಿಕೆ ಆಗಿದೆ. ಒಡಿಶಾ ಕರಾವಳಿಗೆ ಅಪ್ಪಳಿಸಿದ ಎರಡು ದಿನದಲ್ಲಿ ಕುಡಿಯುವ ನೀರಿಗೆ ಸಮಸ್ಯೆ, ವಿದ್ಯುತ್ ಕಡಿತ ಹೀಗೆ ನಾನಾ ಸಮಸ್ಯೆಗಳನ್ನು ಜನರು ಅನುಭವಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾ ಸರಕಾರದ ಮುಖ್ಯ ಕಾರ್ಯದರ್ಶಿ ಎ.ಪಿ.ಪಧಿ ಮಾತನಾಡಿ, ಇಪ್ಪತ್ತೊಂಬತ್ತು ಮಂದಿ ಮೃತಪಟ್ಟವರಲ್ಲಿ ಇಪ್ಪತ್ತೊಂದು ಮಂದಿ ಪುರಿಯವರೇ. ಅಲ್ಲಿ ಮೇ ಮೂರನೇ ತಾರೀಕು ಚಂಡಮಾರುತ ಅಪ್ಪಳಿಸಿತ್ತು. ಮರಗಳು, ವಿದ್ಯುತ್ ಕಂಬಗಳು ಹಾಗೂ ಮೊಬೈಲ್ ಟವರ್ ಗಳು ನೆಲಕ್ಕೆ ಉರುಳಿದ್ದವು. ಮನೆಗಳು ಕುಸಿದಿದ್ದವು.
ಹತ್ತು ಸಾವಿರ ಹಳ್ಳಿಗಳು, ಐವತ್ತೆರಡು ನಗರ ಪ್ರದೇಶಗಳಲ್ಲಿ ಸರಕಾರದಿಂದ ಪರಿಹಾರ ಕಾರ್ಯಾಚರಣೆ ನಡೆದಿದೆ. ಒಟ್ಟಾರೆ ಒಂದು ಕೋಟಿ ಮಂದಿಗೆ ಚಂಡಮಾರುತದಿಂದ ಹಾನಿಯಾಗಿದೆ. ತೀರಾ ಗಂಭೀರ ಸ್ವರೂಪದ ಈ ಚಂಡಮಾರುತ ವಿರಳಾತಿ ವಿರಳ ಎನ್ನಲಾಗಿದ್ದು, ಪಶ್ಚಿಮ ಬಂಗಾಲದ ಕಡೆಗೆ ಸಾಗಿ, ದುರ್ಬಲ ಆಗುವ ಮುನ್ನ ಭೀಕರ ಅನಾಹುತವನ್ನು ಒಡಿಶಾದಲ್ಲಿ ಮಾಡಿದೆ.

ಪುರಿ, ಖುರ್ದಾ, ಗಂಜಾಂ, ಜಗತ್ ಸಿಂಗ್ ಪುರ್, ಕೇಂದ್ರಪರ ಹಾಗೂ ಬಾಲಸೋರ್ ನಲ್ಲಿ ವಿದ್ಯುತ್ ಮೂಲಸೌಕರ್ಯಕ್ಕೆ ಭಾರೀ ಹಾನಿಯಾಗಿದೆ ಎಂದು ಒಡಿಶಾ ರಾಜ್ಯ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿ ವೀಕ್ಷಣೆಗೆ ಪ್ರಧಾನಿ ಮೋದಿ ಭೇಟಿ ನೀಡುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಜತೆ ಅವರು ಮಾತನಾಡಿದ್ದು, ಪರಿಹಾರ ಕಾರ್ಯಗಳಿಗೆ ನಿರಂತರ ಬೆಂಬಲ ನೀಡುವ ಭರವಸೆ ಕೊಟ್ಟಿದ್ದಾರೆ.
ಪೂರ್ವ ಕರಾವಳಿ ರೈಲ್ವೆಯ ಎಲ್ಲ ಸೇವೆಯನ್ನು ಭಾನುವಾರದಿಂದ ಪುನರಾರಂಭಿಸಲಾಗಿದೆ.












Click it and Unblock the Notifications