30 ವರ್ಷದ ಹಿಂದೆ ತೀರಿಹೋದ ನನ್ನ ತಂದೆ ಬಗ್ಗೆ ಏಕೆ ಮಾತನಾಡ್ತೀರಿ: ಮೋದಿ
"ಕಾಂಗ್ರೆಸ್ ಏಕೆ ವೈಯಕ್ತಿಕ ದಾಳಿ ನಡೆಸುತ್ತಿದೆ?" ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ. ಮೋದಿ ತಂದೆಯ ಬಗ್ಗೆ ಕೈ ಪಕ್ಷದ ನಾಯಕ ವಿಲಾಸ್ ಮುಟ್ಟೆಂವರ್ ನೀಡಿದ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಈ ಪ್ರಶ್ನೆ ಕೇಳಿದ್ದಾರೆ. ಇದರಿಂದ ಕಾಂಗ್ರೆಸ್ ವಂಶಪಾರಂಪರ್ಯ ರಾಜಕಾರಣದ ಪದ್ಧತಿ ಬಯಲಾಗುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ನಲ್ಲಿ ಯಾವ ವಂಶಕ್ಕೆ ಸೇರಿದವರು ಎಂಬುದನ್ನು ಪರಿಗಣಿಸಲಾಗುತ್ತದೆಯೇ ವಿನಾ ಸಾಧನೆಯನ್ನಲ್ಲ. ಕಾಂಗ್ರೆಸ್ ಗೆ ಯಾವತ್ತಿಗೂ ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಹೋರಾಡುವ ತಾಕತ್ತೇ ಇಲ್ಲ ಎಂದು ಅವರು ಹೇಳಿದ್ದಾರೆ.
ಕೇಂದ್ರದ ಮಾಜಿ ಸಚಿವ ವಿಲಾಸ್ ಮುಟ್ಟೆಂವರ್ ಕಾಂಗ್ರೆಸ್ ಪಕ್ಷದ ಆಂತರಿಕ ಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವೈಯಕ್ತಿಕ ದಾಳಿಗಳು ನಡೆಸಬೇಡಿ ಎಂದು ಪಕ್ಷದ ನಾಯಕರಿಗೆ ರಾಹುಲ್ ಗಾಂಧಿ ಅವರು ಸೂಚಿಸಿದ ನಂತರವೂ ಈ ರೀತಿಯ ಹೇಳಿಕೆ ಮೂಲಕ ಮುಜುಗರ ಎದುರಿಸುವಂತಾಗಿದೆ.
ನನ್ನನ್ನು ಎದುರಿಸಲಾಗದೆ ತಾಯಿಯ ಹೆಸರನ್ನು ತೆಗೆದುಕೊಂಡಿದೆ ಕಾಂಗ್ರೆಸ್: ಮೋದಿ
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಬಿಜೆಪಿಯವರ 'ಸ್ಲೀಪರ್ ಸೆಲ್'ಗಳೇನಾದರೂ ಕಾಂಗ್ರೆಸ್ ನಲ್ಲಿದ್ದಾರಾ ಎಂಬ ಅಚ್ಚರಿ ಆಗುತ್ತದೆ ಎಂದಿದ್ದಾರೆ.
ಮೋದಿಯ ತಂದೆ ಹೆಸರು ಯಾರಿಗೆ ಗೊತ್ತು?
ಇದೀಗ ವೈರಲ್ ಆಗಿರುವ ಆ ವಿಡಿಯೋದಲ್ಲಿ ಮುಟ್ಟೆಂವರ್, "ಪ್ರಧಾನಿ ಆಗುವ ಮುನ್ನ ನೀವು (ಮೋದಿ) ಯಾರಿಗೆ ಗೊತ್ತು? ಈಗಲೂ ಕೂಡ ನಿಮ್ಮ ತಂದೆಯ ಹೆಸರು ಯಾರಿಗೂ ಗೊತ್ತಿಲ್ಲ. ಆದರೆ ಎಲ್ಲರಿಗೂ ರಾಹುಲ್ ಗಾಂಧಿ (ಕಾಂಗ್ರೆಸ್ ಅಧ್ಯಕ್ಷ) ತಂದೆ ಹೆಸರು ಗೊತ್ತು" ಎಂದಿದ್ದರು. ನಾವು ಯಾರ ಕುಟುಂಬದ ಮೇಲೂ ವೈಯಕ್ತಿಕ ದಾಳಿ ಮಾಡಲ್ಲ. ಆದರೆ ಅವರು ಹೊಂದಿದ ಹುದ್ದೆ ಬಗ್ಗೆ ಟೀಕೆ ಮಾಡ್ತೀವಿ. ಆದರೆ ಕಾಂಗ್ರೆಸ್ ನಾಯಕರು ನನ್ನ ತಾಯಿ-ತಂದೆ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ ಎಂದಿದ್ದಾರೆ ಮೋದಿ.
ನನ್ನ ತಾಯಿಗೆ ರಾಜಕಾರಣದ ಬಗ್ಗೆ ಏನೂ ಗೊತ್ತಿಲ್ಲ
ಮಧ್ಯಪ್ರದೇಶದ ವಿದಿಶಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಎರಡು ದಿನದ ಹಿಂದೆ ಕಾಂಗ್ರೆಸ್ ನಾಯಕರೊಬ್ಬರು ನನ್ನ ತಾಯಿ ಹೆಸರನ್ನು ಎಳೆದು ತಂದರು. ಅವರು ಮಧ್ಯಪ್ರದೇಶವನ್ನು ನೋಡಿಯೂ ಕೂಡ ಇಲ್ಲ. ಅವರಿಗೆ ರಾಜನೀತಿಯಲ್ಲಿ 'ಆರ್' ಎಂಬ ಪದವೂ ಗೊತ್ತಿಲ್ಲ. ಈ ವರೆಗೂ ನಿಂತಿಲ್ಲ. ಅವರಿಗೂ ನನ್ನ ತಂದೆಯನ್ನೂ ಎಳೆದಿದ್ದಾರೆ- ಅವರು ತೀರಿಕೊಂಡೇ ಮೂವತ್ತು ವರ್ಷಗಳಾಗಿವೆ. ಅವರು ಏಕಾಗಿ ಹೀಗೆ ಮಾಡ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
|
ಸೋನಿಯಾ ಗಾಂಧಿ ಪೋಷಕರ ಬಗ್ಗೆ ನೀವೇ ಮಾತನಾಡಿದ್ದಿರಿ
ಸೋನಿಯಾ ಗಾಂಧಿ ಬಗ್ಗೆ ಮಾತನಾಡುತ್ತಾ ಅವರ ತಂದೆ-ತಾಯಿ ವಿಚಾರವನ್ನು ಪ್ರಸ್ತಾವ ಮಾಡಿದ್ದನ್ನು ಗೌರವಾನ್ವಿತ ಪ್ರಧಾನಮಂತ್ರಿಗಳಿಗೆ ನೆನಪಿಸುತ್ತೀನಿ. ಹಾಗಂತ ಇನ್ನೊಂದು ಕಡೆಯಲ್ಲಿರುವ ಮೂರ್ಖರ ಕೆಲಸವನ್ನು ಪ್ರೋತ್ಸಾಹಿಸುವುದಕ್ಕೆ ಆಗಲ್ಲ. ಆದರೆ ಪ್ರಧಾನಿಗಳು ಇಲ್ಲಿ ಸಂತ್ರಸ್ತರಂತೂ ಅಲ್ಲ ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
ರಮ್ಯಾ ವಿರುದ್ಧ ಸಿಟ್ಟುಗೊಂಡಿದ್ದರಂತೆ ರಾಹುಲ್
ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪ್ರಧಾನಿ ಮೋದಿ ಗೇಲಿ ಮಾಡುವಂಥ ವಿಚಾರಗಳನ್ನು ಹಾಕಿದ್ದಕ್ಕೆ, ಅವರ ಶೈಕ್ಷಣಿಕ ಅರ್ಹತೆ ವಿಚಾರವಾಗಿ ಜನರನ್ನು ತಪ್ಪು ದಾರಿಗೆ ಎಳೆವ ವಿಡಿಯೋ ಪೋಸ್ಟ್ ಮಾಡಿದ್ದಕ್ಕೆ ದಿವ್ಯಸ್ಪಂದನಾ ಅಲಿಯಾಸ್ ರಮ್ಯಾ ವಿಚಾರವಾಗಿಯೂ ರಾಹುಲ್ ಗಾಂಧಿ ಅಸಮಾಧಾನಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.