ಮಧ್ಯಪ್ರದೇಶದಲ್ಲಿ ವರ್ಷದ ಮೊದಲ ದಿನ 'ವಂದೇ ಮಾತರಂ' ವಿವಾದ
ಭೋಪಾಲ್, ಜನವರಿ 01: ಮಧ್ಯಪ್ರದೇಶದಲ್ಲಿ ವರ್ಷದ ಮೊದಲ ದಿನವೇ 'ವಂದೇ ಮಾತರಂ' ವಿವಾದ ಆರಂಭವಾಗಿದೆ.
ಇಲ್ಲಿ ಕಳೆದ ಹದಿನೈದು ವರ್ಷಗಳಿಂದ ತಿಂಗಳ ಮೊದಲ ದಿನ ಸೆಕ್ರೇಟರಿಯೇಟ್ ಕಚೇರಿಯಲ್ಲಿ ವಂದೇ ಮಾತರಂ ಹಾಡುವ ಪದ್ಧತಿಯನ್ನು ಶಿವರಾಜ್ ಸಿಂಗ್ ನೇತೃತ್ವದ ಬಿಜೆಪಿ ರೂಢಿಸಿಕೊಂಡು ಬಂದಿತ್ತು.
ಆದರೆ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೀಗ ಅಧಿಕಾರಕ್ಕೆ ಬಂದಿದ್ದು, ತಿಂಗಳ ಮೊದಲ ದಿನ ವಂದೇ ಮಾತರಂ ಗೀತೆಯನ್ನು ಹಾಡಿಲ್ಲ. ಇದರಿಂದ ಮುನಿಸಿಕೊಂಡ ಚೌಹಾಣ್, ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದೇ ಮಾತರಂ ಹಾಡುವುದು ಮಾತ್ರ ದೇಶಭಕ್ತಿಯಲ್ಲ ಎಂದಿರುವ ಕಾಂಗ್ರೆಸ್, ಸೆಕ್ರೇಟರಿಯೇಟ್ ಕಚೇರಿಯಲ್ಲಿ ತಿಂಗಳ ಮೊದಲ ದಿನ 'ವಂದೇ ಮಾತರಂ' ಹಾಡುವುದು ಕಡ್ಡಾಯವಲ್ಲ ಎಂದಿದೆ.

"ಇದು ರಾಷ್ಟ್ರೀಯ ಹಾಡು. ಇದನ್ನು ಹಾಡುವುದರಲ್ಲಿ ತಪ್ಪೇನು? ಈ ಹಾಡು ಹೊಸ ಶಕ್ತಿಯನ್ನು ನೀಡುತ್ತದೆ, ದೇಶಭಕ್ತಿಯನ್ನು ಸ್ಫುರಿಸುತ್ತದೆ. ಆದರೆ ಕಾಂಗ್ರೆಸ್ ಈ ಹಾಡನ್ನು ಹಾಡದೆ ದೇಶಕ್ಕೆ ಅವಮಾನ ಮಾಡುತ್ತಿದೆ" ಎಂದು ಅವರು ದೂರಿದ್ದಾರೆ. ಸಂಪುಟ ಸಭೆಗೂ ಮುನ್ನ ಈ ಗೀತೆಯನ್ನು ಹಾಡಲೇಬೇಕೆಂದು ಅವರು ಕಾಂಗ್ರೆಸ್ಸಿಗೆ ಹೇಳಿದ್ದಾರೆ.
ಅಷ್ಟೇ ಅಲ್ಲ, ಭಾನುವಾರ ನಾನೇ ಈ ಹಾಡನ್ನು ಸೆಕ್ರೇಟರಿಯೇಟ್ ಕಚೇರಿಯಲ್ಲಿ ಹಾಡುತ್ತೇನೆ ಎಂದು ಚೌಹಾಣ್ ಸವಾಲೆಸೆದಿದ್ದಾರೆ.












Click it and Unblock the Notifications