ಸ್ಥಳೀಯ ಜನರಿಗೇ ಸರ್ಕಾರಿ ಉದ್ಯೋಗ ಮೀಸಲು: ಮಧ್ಯಪ್ರದೇಶದ ಮಾದರಿ ನಿರ್ಧಾರ
ಭೋಪಾಲ್, ಆಗಸ್ಟ್ 18: ಮಧ್ಯಪ್ರದೇಶದಲ್ಲಿನ ಸರ್ಕಾರಿ ಉದ್ಯೋಗಗಳು ಇನ್ನು ಮುಂದೆ ರಾಜ್ಯದ ಪ್ರಜೆಗಳಿಗೆ ಮಾತ್ರವೇ ಮೀಸಲಾಗಿರಲಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
ಮಧ್ಯಪ್ರದೇಶದ ನಾಗರಿಕರಿಗೆ ಸರ್ಕಾರಿ ಉದ್ಯೋಗಗಳನ್ನು ಮೀಸಲಿಡುವ ಸಂಬಂಧ ಕಾನೂನಾತ್ಮಕ ಬದಲಾವಣೆಗಳನ್ನು ತರುವ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿನ ಎಲ್ಲ ಸರ್ಕಾರಿ ಉದ್ಯೋಗಗಳು ಸ್ಥಳೀಯ ಯುವಕರಿಗೆ ಮೀಸಲಿಡಲು ಆದ್ಯತೆ ನೀಡಲಾಗುವುದು ಎಂದು ಶಿವರಾಜ್ ಸಿಂಗ್ ಹೇಳಿಕೆ ನೀಡಿದ್ದ ಮೂರು ದಿನದ ಬಳಿಕ ಮಧ್ಯಪ್ರದೇಶದ ಎಲ್ಲ ಉದ್ಯೋಗಗಳೂ ರಾಜ್ಯದ ನಾಗರಿಕರಿಗೇ ಮೀಸಲಾಗಿರಲಿದೆ ಎಂದು ಪ್ರಕಟಿಸಲಾಗಿದೆ.

ಭೋಪಾಲ್ನಲ್ಲಿ ರಾಜ್ಯಮಟ್ಟದ ಸ್ವಾತಂತ್ರ್ಯದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ಪ್ರತಿ ನಾಗರಿಕರ ಡೇಟಾಬೇಸ್ ಅನ್ನು ಸರ್ಕಾರ ಸಿದ್ಧಪಡಿಸುತ್ತಿದೆ. ಹೀಗಾಗಿ ರಾಜ್ಯದ ಜನರು ಪ್ರತಿ ಯೋಜನೆಗೂ ಪ್ರತ್ಯೇಕವಾಗಿ ನೋಂದಣಿ ಮಾಡಿಸಿಕೊಳ್ಳುವ ಅಗತ್ಯ ಬೀಳುವುದಿಲ್ಲ ಎಂದು ತಿಳಿಸಿದ್ದಾರೆ.
'ಮಧ್ಯ ಪ್ರದೇಶದ ಯುವಕರಿಗೆ ಸರ್ಕಾರಿ ಕೆಲಸಗಳಲ್ಲಿ ಆದ್ಯತೆ ನೀಡಲಾಗುವುದು. ಪ್ರಸ್ತುತ ಸನ್ನಿವೇಶದಲ್ಲಿ ಉದ್ಯೋಗಾವಕಾಶ ತೀರಾ ಕಷ್ಟಕರವಾಗಿರುವಾಗ ನಮ್ಮ ರಾಜ್ಯದ ಯುವಕರ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯವಾಗಿದೆ' ಎಂದು ಚೌಹಾಣ್ ಹೇಳಿದ್ದಾರೆ.
ಸ್ಥಳೀಯ ಯುವಕರ ಹತ್ತು ಮತ್ತು ಹನ್ನೆರಡನೆಯ ತರಗತಿಗಳ ಅಂಕಪಟ್ಟಿಯ ಆಧಾರದಲ್ಲಿ ಉದ್ಯೋಗ ಖಾತರಿ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ವಿವರಿಸಿದ್ದಾರೆ.












Click it and Unblock the Notifications