ಮಧ್ಯಪ್ರದೇಶದಲ್ಲಿ ಮೊದಲ ಬಾರಿಗೆ ಎಎಪಿಗೆ ಮೇಯರ್ ಪಟ್ಟ
ಭೋಪಾಲ್, ಜುಲೈ 17: ಮೊದಲ ಬಾರಿಗೆ ಮಧ್ಯಪ್ರದೇಶದ ಮುನ್ಸಿಪಲ್ ಚುನಾವಣೆಗೆ ಪ್ರವೇಶಿಸಿದ ಆಮ್ ಆದ್ಮಿ ಪಕ್ಷ (ಎಎಪಿ), ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಸಿಂಗ್ರೌಲಿಯಲ್ಲಿ ಎಎಪಿಯ ರಾಣಿ ಅಗರ್ವಾಲ್ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಪ್ರಕಾಶ್ ವಿಶ್ವಕರ್ಮ ಅವರನ್ನು 9,352 ಮತಗಳಿಂದ ಸೋಲಿಸಿ ಮೇಯರ್ ಹುದ್ದೆಯನ್ನು ಗೆದ್ದಿದ್ದಾರೆ. ಕಾಂಗ್ರೆಸ್ ಪ್ರತಿಸ್ಪರ್ಧಿ ಅರವಿಂದ್ ಸಿಂಗ್ ಚಾಂಡೆಲ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಫಲಿತಾಂಶಗಳ ಪ್ರಕಾರ ಬುರ್ಹಾನ್ಪುರ, ಸತ್ನಾ, ಖಾಂಡ್ವಾ ಮತ್ತು ಸಾಗರ್ನಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಮಾಧುರಿ ಪಟೇಲ್, ಯೋಗೇಶ್ ತಮಾರ್ಕರ್, ಅಮೃತಾ ಯಾದವ್ ಮತ್ತು ಸಂಗೀತಾ ತಿವಾರಿ ಅವರು ಮೇಯರ್ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆಮ್ ಆದ್ಮಿ ಪಕ್ಷ (ಎಎಪಿ) ಸಿಂಗ್ರೌಲಿಯಲ್ಲಿ ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರೆದಿದೆ. ಭೋಪಾಲ್, ಇಂದೋರ್ ಮತ್ತು ಉಜ್ಜಯನಿಗಳಲ್ಲಿ ಕೂಡ ಬಿಜೆಪಿ ಮುನ್ನಡೆ ಸಾಧಿಸಿದೆ.
ರಾಣಿ ಅಗರ್ವಾಲ್ ಬಹಳ ಸಮಯದಿಂದ ಸಮಾಜ ಸೇವೆ ಮತ್ತು ರಾಜಕೀಯದೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು 2014 ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಮೊದಲ ಚುನಾವಣೆಯಲ್ಲಿ ಗೆದ್ದರು. ಅಗರವಾಲ್ ಅವರು ಸಿಂಗ್ರೌಲಿ ಕ್ಷೇತ್ರದಿಂದ 2018 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಆದರೆ ಸೋತಿದ್ದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿ, ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೋಡ್ ಶೋನಲ್ಲಿ ಅವರ ಪರವಾಗಿ ಪ್ರಚಾರ ಮಾಡಿದ್ದರು.

ಅರವಿಂದ್ ಕೇಜ್ರಿವಾಲ್ ಅಭಿನಂದನೆ
ಅಗರ್ವಾಲ್ ಅವರ ವಿಜಯದ ನಂತರ, ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ನಲ್ಲಿ ಅವರನ್ನು ಅಭಿನಂದಿಸಿದ್ದಾರೆ, "ಸಿಂಗ್ರೌಲಿ ಮೇಯರ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ರಾಣಿ ಅಗರ್ವಾಲ್, ಇತರ ವಿಜೇತರು ಮತ್ತು ಪಕ್ಷದ ಕಾರ್ಯಕರ್ತರನ್ನು ನಾನು ಅಭಿನಂದಿಸುತ್ತೇನೆ. ನೀವು ಜನರಿಗಾಗಿ ಶ್ರಮಿಸುವುದನ್ನು ಮುಂದುವರಿಸಬೇಕು. ದೇಶಾದ್ಯಂತ ಜನರು ಆಮ್ ಆದ್ಮಿ ಪಕ್ಷದ ಪ್ರಾಮಾಣಿಕ ರಾಜಕಾರಣವನ್ನು ಇಷ್ಟಪಡುತ್ತಿದ್ದಾರೆ." ಎಂದು ಹೇಳಿದ್ದಾರೆ.
ಸಿಂಗ್ರೌಲಿ ಪಾಲಿಕೆಯು ಆದಾಯದ ವಿಚಾರದಲ್ಲಿ ಇಂದೋರ್ ಬಳಿಕ ಮಧ್ಯಪ್ರದೇಶದ ಎರಡನೇ ಶ್ರೀಮಂತ ಪಾಲಿಕೆಯಾಗಿದೆ. ಸಿಂಗ್ರೌಲಿ ಜಿಲ್ಲೆಯನ್ನು ರಾಜ್ಯದ ವಿದ್ಯುತ್ ಉತ್ಪಾದನೆ, ಕಲ್ಲಿದ್ದಲು ಮತ್ತು ಖನಿಜ ಗಣಿ ಲ್ಯಾಬ್ ಎಂದು ಗುರುತಿಸಲಾಗಿದೆ.
ಸೋಲಿನ ವಿಚಾರ ತಿಳಿದು ಕಾಂಗ್ರೆಸ್ ಅಭ್ಯರ್ಥಿ ಸಾವು
ಚುನಾವಣೆಯಲ್ಲಿ ಸೋತ ಸುದ್ದಿ ತಿಳಿಯುತ್ತಿದ್ದಂತೆ ಮುನ್ಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಹರಿನಾರಾಯಣ ಗುಪ್ತಾ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ, ಭಾನುವಾರ ಮಧ್ಯಪ್ರದೇಶದ ರೇವಾ ಪಟ್ಟಣದಲ್ಲಿ ನಡೆದಿದೆ.
ರೇವಾ ಪಟ್ಟಣದ ಹನುಮಾನಾ ಪ್ರದೇಶದ ಪುರಸಭೆಯ ವಾರ್ಡ್ ನಂ.9 ಕ್ಕೆ ಕಾಂಗ್ರೆಸ್ ಪಕ್ಷದಿಂದ ಹರಿನಾರಾಯಣ ಗುಪ್ತಾ ಕಣದಲ್ಲಿದ್ದರು. ಆದರೆ, ಸ್ವತಂತ್ರ ಅಭ್ಯರ್ಥಿ ಅಖಿಲೇಶ್ ಗುಪ್ತಾ ಅವರನ್ನು14 ಮತಗಳಿಂದ ಸೋಲಿಸಿದರು.

ಚುನಾವಣಾ ಸೋಲಿನ ಸುದ್ದಿ ಕೇಳಿ ಹರಿನಾರಾಯಣ್ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಹರಿನಾರಾಯಣ ಗುಪ್ತಾ ಅವರು ಹನುಮಾನಾ ಕಾಂಗ್ರೆಸ್ ಘಟಕದ ಮಂಡಲ ಅಧ್ಯಕ್ಷರೂ ಆಗಿದ್ದರು ಎಂದು ತಿಳಿದುಬಂದಿದೆ.
ಭಾನುವಾರ ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. 16 ನಗರ ಪಾಲಿಕೆ ನಿಗಮ, 99 ನಗರ ಪಾಲಿಕೆ ಮತ್ತು 298 ನಗರ ಪರಿಷತ್ ಸೇರಿದಂತೆ 413 ಪುರಸಭೆಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಜುಲೈ 6 ಮತ್ತು 13 ರಂದು ಎರಡು ಹಂತಗಳಲ್ಲಿ ನಡೆಯಿತು.












Click it and Unblock the Notifications