ದೇಗುಲಕ್ಕೆ ಭೂಮಿ ನೀಡದ ವ್ಯಕ್ತಿಗೆ ಬಹಿಷ್ಕಾರ: ಮೂತ್ರ ಕುಡಿಯಲು ಒತ್ತಾಯ
ಭೋಪಾಲ್, ನವೆಂಬರ್ 17: ಮಧ್ಯಪ್ರದೇಶದ ಗುನಾ ಜಿಲ್ಲೆಯ ಸ್ಥಳೀಯ ಪಂಚಾಯತ್ಗೆ ದೇಗುಲ ನಿರ್ಮಾಣಕ್ಕೆ ಜಮೀನು ನೀಡದ ಕಾರಣಕ್ಕೆ ವ್ಯಕ್ತಿಯೋರ್ವನ ಕುಟುಂಬವನ್ನು ಬಹಿಷ್ಕರಿಸಿದ ಅಮಾನವೀಯ ಘಟನೆ ನಡೆದಿದೆ. ಮಾತ್ರವಲ್ಲದೇ ವ್ಯಕ್ತಿಗೆ ಗಡ್ಡವನ್ನು ಬೋಳಿಸಿಕೊಂಡು ತಲೆಯ ಮೇಲೆ ಚಪ್ಪಲಿ ಹೊತ್ತುಕೊಳ್ಳುವಂತೆ ಆದೇಶಿಸಿ ದುರ್ವರ್ತನೆ ತೋರಿದೆ.
ಗುನಾದಲ್ಲಿರುವ ಶಿವಾಜಿ ನಗರ ಪ್ರದೇಶದ ನಿವಾಸಿ ಹೀರಾ ಲಾಲ್ ಘೋಸಿ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ. ಇವರು ಮಂಗಳವಾರ ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಶಿವಾಜಿ ನಗರ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸ್ಥಳೀಯ ಪಂಚಾಯತ್ ನಿರ್ಧರಿಸಿತ್ತು. ಇದಕ್ಕಾಗಿ ಸ್ಥಳದ ಅವಶ್ಯಕತೆ ಇದ್ದರಿಂದ ಅದೇ ಪ್ರದೇಶದ ಹೀರಾ ಲಾಲ್ ಘೋಸಿ ಅವರನ್ನು ಭೂಮಿ ನೀಡಲು ಕೇಳಿತ್ತು. ಪಂಚಾಯತ್ ಕೋರಿಕೆಯಂತೆ ಲಾಲ್ ಘೋಸಿ ಕೊಂಚ ಭೂಮಿಯನ್ನೂ ನೀಡಿದ್ದರು. ಆದರೂ ತೃಪ್ತಿಯಾಗದ ಸ್ಥಳೀಯ ಪಂಚಾಯತಿ ತಮಗೆ ಹಾಗೂ ಕುಟುಂಬಸ್ಥರಿಗೆ ಬಹಿಷ್ಕರಿಸಿದೆ ಎಂದು ಆರೋಪಿಸಲಾಗಿದೆ.
ತನ್ನ ಸಂಪೂರ್ಣ ಭೂಮಿಯನ್ನು ದೇವಾಲಯದ ನಿರ್ಮಾಣಕ್ಕೆ ದಾನ ಮಾಡದಿದ್ದಕ್ಕಾಗಿ ನನ್ನ ಹಾಗೂ ನನ್ನ ಕುಟುಂಬವನ್ನು ಸ್ಥಳೀಯ ಪಂಚಾಯತಿ ಬಹಿಷ್ಕರಿಸಿದೆ ಎಂದು ಘೋಸಿ ಆರೋಪಿಸಿದ್ದಾರೆ. ಗುನಾದಲ್ಲಿರುವ ಶಿವಾಜಿ ನಗರ ಪ್ರದೇಶದ ನಿವಾಸಿ ಹೀರಾ ಲಾಲ್ ಘೋಸಿ ಅವರು ಮಂಗಳವಾರ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ತಮ್ಮ ಮೇಲಾದ ದೌರ್ಜನ್ಯ ವಿವರಿಸಿದ್ದಾರೆ. ಪಂಚಾಯತಿಯು ತನ್ನ ತಲೆಯ ಮೇಲೆ ಬೂಟುಗಳನ್ನು ಹೊತ್ತುಕೊಳ್ಳಿ, ಗಡ್ಡವನ್ನು ಬೋಳಿಸಿಕೊಳ್ಳಿ ಮತ್ತು ಕುಟುಂಬ ಸದಸ್ಯರಿಗೆ ಗೋಮೂತ್ರವನ್ನು ನೀಡಲು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ. ದೇವಸ್ಥಾನ ನಿರ್ಮಾಣಕ್ಕೆ ಕುಟುಂಬದ ಒಡೆತನದ ಜಮೀನು ದಾನಕ್ಕೆ ಆರಂಭದಲ್ಲಿ ವಿವಾದ ಆರಂಭವಾಗಿದೆ ಎಂದು ಘೋಸಿ ಜಿಲ್ಲಾಧಿಕಾರಿಗೆ ತಿಳಿಸಿದರು.
"ನಮ್ಮ ಕುಟುಂಬವು ದೇವಾಲಯದ ನಿರ್ಮಾಣಕ್ಕಾಗಿ ಹೇಳಿದ ಭೂಮಿಯ ಭಾಗವನ್ನು ದಾನ ಮಾಡಿದೆ. ಆದರೂ ಪಂಚಾಯಿತಿಗೆ ತೃಪ್ತಿಯಾಗಿಲ್ಲ. ಪಂಚಾಯತ್ ಸದಸ್ಯರಿಗೆ ಸಂಪೂರ್ಣ ಭೂಮಿ ಬೇಕು. ಅದನ್ನು ಅವರು ನನ್ನಿಂದ ನಿರೀಕ್ಷಿಸುತ್ತಿದ್ದಾರೆ. ಅದಕ್ಕೆ ನಾವು ನಿರಾಕರಿಸಿದಾಗ ನಮ್ಮ ಕುಟುಂಬವನ್ನು ಸಮುದಾಯದಿಂದ ಬಹಿಷ್ಕರಿಸಲಾಗಿದೆ. ನಮ್ಮ ಮನೆಗೆ ಯಾರೂ ಬರುವಂತಿಲ್ಲ. ಸಮುದಾಯದಲ್ಲಿ ಯಾರನ್ನೂ ತಮ್ಮ ಕುಟುಂಬದವರನ್ನು ಮದುವೆಯಾಗುವಂತಿಲ್ಲ. ಹೇಣ್ಣು ಕೊಡುವಂತಿಲ್ಲ, ಗಂಡು ಮದುವೆಯಾಗುವಂತಿಲ್ಲ. ಯಾವುದಕ್ಕೂ ಅನುಮತಿಸುತ್ತಿಲ್ಲ,'' ಎಂದು ಘೋಸಿ ಜಿಲ್ಲಾಧಿಕಾರಿಗೆ ತಿಳಿಸಿದರು.
ಪಂಚಾಯತ್ ಆದೇಶವನ್ನು ಘೋಷಿಸಿದಾಗ ಘೋಸಿ ತನ್ನ ಫೋನ್ನಲ್ಲಿ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ. ಇದು ಪಂಚಾಯತ್ ಸದಸ್ಯರನ್ನು ಮತ್ತಷ್ಟು ಕೆರಳಿಸಿದೆ. ಇದರಿಂದ ನಾನಾ ರೀತಿಯಲ್ಲಿ ತಮಗೆ ಹಿಂಸೆ ನೀಡಲಾಗುತ್ತಿದೆ ಎಂದು ಘೋಸಿ ಆರೋಪಿಸಿದ್ದಾರೆ.
ಇದರ ನಂತರ ಕುಟುಂಬಕ್ಕೆ ಮತ್ತಷ್ಟು ಷರತ್ತು ವಿಧಿಸಿ ದರ್ಪ ತೋರಿದೆ. ಇಡೀ ಭೂಮಿಯನ್ನು ದಾನ ಮಾಡುವುದಲ್ಲದೆ ಅವರ ಕುಟುಂಬವನ್ನು ಶುದ್ಧೀಕರಣಕ್ಕಾಗಿ ಗೋಮೂತ್ರವನ್ನು ಸೇವಿಸುವಂತೆ ಮತ್ತು ತಮ್ಮ ಪಾದರಕ್ಷೆಗಳನ್ನು ತಲೆಯ ಮೇಲೆ ಹೊತ್ತುಕೊಳ್ಳುವಂತೆ ಹೇಳಲಾಗಿದೆ ಎಂದು ಘೋಸಿ ದೂರಿದ್ದಾರೆ. ಮಾತ್ರವಲ್ಲದೇ ತಮ್ಮ ಕುಟುಂಬದ ಮುಖ್ಯಸ್ಥರಿಗೆ ಗಡ್ಡವನ್ನು ಬೋಳಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಘೋಸಿ ಹೇಳಿದರು.
"ಇಡೀ ವಿವಾದವು ನನ್ನ ಮಾಲೀಕತ್ವದ ಭೂಮಿಗೆ ಸಂಬಂಧಿಸಿದೆ. ನಾನು ಈಗಾಗಲೇ ದೇವಸ್ಥಾನದ ನಿರ್ಮಾಣಕ್ಕಾಗಿ ನನ್ನ ಜಮೀನಿನ ಭಾಗವನ್ನು ದಾನ ಮಾಡಿದ್ದೇನೆ. ಆದರೆ ಅವರಿಗೆ ಸಂಪೂರ್ಣ ಭೂಮಿ ಬೇಕು. ಆದರೆ ಅದು ಸಾಧ್ಯವಿಲ್ಲ. ನಾವು ನಮ್ಮ ಸಂಪೂರ್ಣ ಭೂಮಿಯನ್ನು ನೀಡಿದರೆ ನಾವು ಭೂರಹಿರಾಗುತ್ತೇವೆ" ಎಂದು ಘೋಸಿ ಹೇಳಿದರು.
ಘಟನೆಯನ್ನು ಸಂಪೂರ್ಣವಾಗಿ ಆಲಿಸಿದ ಜಿಲ್ಲಾಧಿಕಾರಿ ಫ್ರಾಂಕ್ ನೊಬೆಲ್ ಅವರು, ಘೋಸಿ ಅವರು ತಮ್ಮ ದೂರಿನನ್ವಯ ಅವರನ್ನು ಸಂಪರ್ಕಿಸಿದ ನಂತರ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು. ದೂರು ನಿಜವೆಂದು ಕಂಡುಬಂದಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.