ವರಸೆ ಬದಲಿಸಿದ ಮಾಯಾವತಿ... ಇದು ರಾಜಕೀಯ 'ಮಾಯಾ'ಜಾಲ!
ಭೋಪಾಲ್, ಡಿಸೆಂಬರ್ 12: ಎರಡು ತಿಂಗಳ ಹಿಂದೆ 'ಕಾಂಗ್ರೆಸ್' ಎಂದರೆ ಸಾಕು, ಮುಖ ತಿರುಗಿಸಿಕೊಳ್ಳುತ್ತಿದ್ದ ಮಾಯಾವತಿ ಮಾತು ಬದಲಿಸಿದ್ದಾರೆ. ಮತ್ತದೇ 'ಕೈ' ಗೆ 'ಆನೆ' ಬಲ ನೀಡಲು ಮುಂದಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಬೆಂಬಲ, ರಾಜಸ್ಥಾನದಲ್ಲೂ ಅಗತ್ಯ ಬಿದ್ದರೆ ನಾವಿದ್ದೇ ಇದ್ದೇವಲ್ಲ... ಎಂದು ಕಾಂಗ್ರೆಸ್ಸಿಗೆ ಅಭಯ ನೀಡುವ ಮೂಲಕ ಮತ್ತೆ ಕಾಂಗ್ರೆಸ್ ಜೊತೆ ದೋಸ್ತಿ ಆರಂಭಿಸಿದ್ದಾರೆ.
ಮಾಯವಾಗಿದ್ದ ಮಾಯಾ ಎಂಪಿಯಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸ್ತಾರಂತೆ
ರಾಜಕೀಯದಲ್ಲಿ ಮಾತು ಕೊಡುವುದು ಎಷ್ಟು ಸಲೀಸೋ, ಮುರಿಯೋದೂ ಅಷ್ಟೇ ಸಲೀಸು ಎಂಬ ಮಾತು ಸುಳ್ಳಲ್ಲ. ಬಿಎಸ್ಪಿ(ಬಹುಜನ ಸಮಾಜವಾದಿ ಪಕ್ಷ) ಅಧಿನಾಯಕಿ ಮಾಯಾವತಿ ಕಾಂಗ್ರೆಸ್ ಜೊತೆ ಮುನಿಸಿಕೊಂಡಿದ್ದಕ್ಕೆ ಕಾರಣ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕಿಂತ ಹೆಚ್ಚಾಗಿ ಅವಕಾಶವಾದಿ ಮನೋಭಾವ. ಟಿಕೆಟ್ ಹಂಚಿಕೆಯ ಸಮಯದಲ್ಲಿ ಭಿನ್ನಾಭಿಪ್ರಾಯ ಉಂಟಾದರೂ ಮುಂಬರುವ ಲೋಕಸಭಾ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡೇ ಮಾಯಾವತಿ ಅಂದು ಅಂಥದೊಂದು ಜಾಣನಡೆ(?!) ಇಟ್ಟಿದ್ದರು. ಆದರೆ ಅದು ಉಲ್ಟಾ ಹೊಡೆದು, ಇದೀಗ ಅವರೇ ಕಾಂಗ್ರೆಸ್ ಮುಂದೆ ಹೋಗಿ ನಿಂತಿದ್ದಾರೆ!
ನಮ್ಮ ಧ್ಯೇಯ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು!
"ನಮಗೆ ಕಾಂಗ್ರೆಸ್ಸಿನ ಕೆಲವು ಸಿದ್ಧಾಂತಗಳಲ್ಲಿ ನಂಬಿಕೆ ಇಲ್ಲದಿರಬಹುದು. ನಾವು ಅದನ್ನು ಒಪ್ಪದೆ ಇರಬಹುದು. ಆದರೆ ನಮಗೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ಮುಖ್ಯ. ಅದಕ್ಕಾಗಿ ನಾವು ಕಾಂಗ್ರೆಸ್ ಅನ್ನು ಬೆಂಬಲಿಸುತ್ತೇವೆ. ಮಧ್ಯಪ್ರದೇಶದಲ್ಲಿ ಬೆಂಬಲ ನೀಡುತ್ತೇವೆ, ಅಗತ್ಯವಿದ್ದರೆ ರಾಜಸ್ಥಾನದಲ್ಲೂ ನಮ್ಮ ಬೆಂಬಲವಿದೆ" ಎಂದು ಮಾಯಾವತಿ ವರಸೆ ಬದಲಿಸಿದ್ದಾರೆ.
ಪಂಚರಾಜ್ಯ ಫಲಿತಾಂಶ: ಬಿಜೆಪಿಗಷ್ಟೇ ಅಲ್ಲ, ಮಾಯಾವತಿಗೂ ಮುಖಭಂಗ!
ಕಾಂಗ್ರೆಸ್ ಆಯ್ಕೆ ಏಕೆ ಗೊತ್ತಾ?
"ಛತ್ತಿಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಜನರು ಬಿಜೆಪಿಯ ಆಡಳಿತದಿಂದ ಬೇಸತ್ತಿದ್ದಾರೆ, ಆಡಳಿತ ವಿರೋಧಿ ಅಲೆ ಇದ್ದಿದ್ದು ದೃಢವಾಗಿದೆ. ಅಲ್ಲದೆ ಜನರು ಕಾಂಗ್ರೆಸ್ ಅನ್ನು ಆರಿಸಿದ್ದಕ್ಕೆ ಕಾರಣ ಅವರಿಗೆ ಬೇರೆ ಆಯ್ಕೆ ಇರಲಿಲ್ಲ" ಎಂದು ಸಹ ಮಾಯಾವತಿ ಕುಟುಕಿದ್ದಾರೆ!
ಮಧ್ಯ ಪ್ರದೇಶ ಅತಂತ್ರ? ಯಾರ ಕೈಗೂ ಸಿಗದ ಪ್ರಳಯಾಂತಕಿ ಮಾಯಾವತಿ
ಕಾಂಗ್ರೆಸ್ ಜೊತೆ ಮುನಿಸಿಕೊಂಡಿದ್ದ ಮಾಯಾ
ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ಸಿಗೆ ಈ ಮೂರು ರಾಜ್ಯಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲುವ ಆತ್ಮವಿಶ್ವಾಸವಿರಲಿಲ್ಲ. ಅದಕ್ಕೆಂದೇ ಅದು ಬಿಎಸ್ಪಿ ಮತ್ತು ಎಸ್ಪಿ ಜೊತೆ ಮೈತ್ರಿಗೆ ಮುಂದಾಗಿತ್ತು. ಮುಳುಗುತ್ತಿರುವವರಿಗೆ 'ಹುಲ್ಲುಕಡ್ಡಿ'ಯ ಆಸರೆಯಾಗಿ ಕಂಡಿದ್ದ ಬಿಎಸ್ಪಿ ಟಿಕೆಟ್ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯದ ನೆಪವೊಡ್ಡಿ ಮೈತ್ರಿಯಿಂದ ಹಿಂದೆ ಸರಿಯಿತು. ಅಷ್ಟಕ್ಕೇ ಸುಮ್ಮನಾಗದ ಮಾಯಾವತಿ, ಕರ್ನಾಟಕದ ಜೆಡಿಎಸ್ -ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆವ ಸೂಚನೆಯಾಗಿ ಬಿಎಸ್ಪಿಯ ಏಕೈಕ ಸಚಿವ ಎನ್ ಮಹೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದರು. ಇಷ್ಟೆಲ್ಲ ಆದ ಮೇಲೆ ಫಲಿತಾಂಶ ಹೊರಬರುತ್ತಿದ್ದಂತೆಯೇ ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿದರು!
ಲೋಕಸಭಾ ಚುನಾವಣೆಯಲ್ಲೂ ಇದೇ ಹಾಡಾದರೆ?
ಲೋಕಸಭಾ ಚುನಾವಣೆಯ ಹೊತ್ತಲ್ಲಿ ಸೃಷ್ಟಿಯಾಗಬಹುದಾದ ಮಹಾಘಟಬಂಧನದಲ್ಲಿಕಾಂಗ್ರೆಸ್ಪಕ್ಷವೂ ಭಾಗವಾಗುತ್ತದಾದರೆ ನಾನು ಬೆಂಬಲ ನೀಡೋಲ್ಲ ಎಂದಿದ್ದ ಮಾಯಾವತಿ ಈಗ ಮಾತು ಬದಲಿಸಬಹುದು. ಆದರೆ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮಾಯಾವತಿ, ಮಹಾಘಟಬಂಧನದ ಬಿರುಕಿಗೂ ಕಾರಣವಾಗಬಹುದು. ಮಾಯಾವತಿಯವರ ಬೆಂಬಲ ಸಿಕ್ಕರೂ ಕಾಂಗ್ರೆಸ್ಸಿಗೆ ಸಮಸ್ಯೆಯೇ!