ಪ್ರಶಸ್ತಿ ಪಡೆದವರೆಲ್ಲ ದೇಶಭಕ್ತರಲ್ಲ: ಸಚಿವರ ವಿಚಿತ್ರ ಹೇಳಿಕೆ
ಭೋಪಾಲ್, ಡಿಸೆಂಬರ್ 7: 'ಭಾರತ ಮಾತೆಯನ್ನು ನಿಂದಿಸುವವರು ಮತ್ತು ದೇಶವನ್ನು ವಿಭಜಿಸುವವರಿಗೆ ರಾಷ್ಟ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ' ಎಂದು ಮಧ್ಯಪ್ರದೇಶದ ಬಿಜೆಪಿ ಮುಖಂಡ ಮತ್ತು ಕೃಷಿ ಸಚಿವ ಕಮಲ್ ಪಟೇಲ್ ವಿಚಿತ್ರ ಹೇಳಿಕೆ ನೀಡಿದ್ದಾರೆ.
ದೇಶದ ಅನೇಕ ಭಾಗಗಳಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಅನೇಕರು ತಮ್ಮ ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಟೀಕಿಸಲು ಈ ಹೇಳಿಕೆ ನೀಡಿದ್ದಾರೆ. 'ಪ್ರಶಸ್ತಿ ವಿಜೇತರು ಮತ್ತು ಬುದ್ಧಿಜೀವಿಗಳೆಂದು ಹೇಳಿಕೊಳ್ಳುವವರು ದೇಶಭಕ್ತರಲ್ಲ' ಎಂದು ಕಮಲ್ ಪಟೇಲ್ ವಾಗ್ದಾಳಿ ನಡೆಸಿದ್ದಾರೆ.
'ಪ್ರಶಸ್ತಿಗಳನ್ನು ಈ ಹಿಂದೆಯೂ ಮರಳಿಸಲಾಗಿತ್ತು. ಈ ಎಲ್ಲ ಪ್ರಶಸ್ತಿ ಪುರಸ್ಕೃತರೂ ಹೇಗೆ ತಮ್ಮ ಪ್ರಶಸ್ತಿಗಳನ್ನು ಪಡೆದಿದ್ದರು? ಭಾರತ ಮಾತೆಯ ಬಗ್ಗೆ ಕೆಟ್ಟ ಮಾತುಗಳನ್ನಾಡಿದವರು ಮತ್ತು ದೇಶವನ್ನು ವಿಭಜಿಸಿದವರು ಈ ಪ್ರಶಸ್ತಿಗಳನ್ನು ಪಡೆದಿದ್ದಾರೆ' ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ಇದೇ ವೇಳೆ ಪಟೇಲ್ ಅವರು ಕೃಷಿ ಕಾಯ್ದೆಗಳ ಕುರಿತು ಬೃಹತ್ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಬಳಿ ಬಂದು ಪ್ರಶ್ನೆ ಹಾಕುವಂತೆ ಸವಾಲು ಹಾಕಿದ್ದಾರೆ.
#WATCH Awards were returned earlier also. How have they got the awards? 'Bharat mata ko gali do','desh ke tukde karo' get the awards. These so-called awardees and intellectuals are not patriots: Madhya Pradesh Agriculture Minister & BJP leader Kamal Patel pic.twitter.com/7FhJWBH4LV
— ANI (@ANI) December 7, 2020
'ಎಲ್ಲ ರೈತ ಸಂಘಟನೆಗಳೂ ನನ್ನ ಬಳಿ ಬಂದು ಪ್ರಶ್ನಿಸಲಿ ಎಂದು ಸವಾಲು ಹಾಕುತ್ತೇನೆ. ಅವರಿಗೆ ನಾನು ಎಲ್ಲ ಉತ್ತರಗಳನ್ನೂ ನೀಡುತ್ತೇನೆ. ಅವರು ಮಸೂದೆಗಳನ್ನು ರದ್ದುಗೊಳಿಸಬೇಕು ಎಂದಷ್ಟೇ ಬಯಸುತ್ತಿದ್ದಾರೆ. ಅದು ಹೇಗೆ ಸಾಧ್ಯ? ಈ ಪ್ರಜಾಪ್ರಭುತ್ವದಲ್ಲಿ ಭಾರತದ ಜನರು ಅತಿದೊಡ್ಡ ಶಕ್ತಿ ಮತ್ತು ಈ ಮಸೂದೆಗಳು ಜನರಿಂದ ಆಯ್ಕೆಯಾದ ಸಂಸದರಿಂದ ಅಂಗೀಕಾರಗೊಂಡಿವೆ' ಎಂದು ಹೇಳಿದ್ದಾರೆ.
ರೈತರ ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಿ ಪಂಜಾಬ್ನ ಅನೇಕ ಕ್ರೀಡಾಪಟುಗಳು, ಸಾಹಿತಿಗಳು, ಕಲಾವಿದರು ಮತ್ತು ರಾಜಕಾರಣಿಗಳು ಕೂಡ ತಮ್ಮ ಪ್ರಶಸ್ತಿಗಳನ್ನು ಮರಳಿಸಿದ್ದಾರೆ.












Click it and Unblock the Notifications