ಜೀವ ಜಲಕ್ಕಾಗಿ ಜೀವವನ್ನೇ ಪಣಕ್ಕಿಡುವ ಮಹಿಳೆಯರು!
ಭೋಪಾಲ್, ಜೂನ್ 2: ಮನೆ ಮನೆಗೂ ನೀರು ಪೂರೈಸುವ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಿದೆ. ನಗರ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಂದಿಗೂ ಸಂಪೂರ್ಣವಾಗಿ ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ. ಒಂದೆಡೆ ಕೆಲ ನಗರ ಪ್ರದೇಶಗಳಲ್ಲಿ ನೀರು ವ್ಯರ್ಥವಾಗಿ ಪೋಲಾಗುತ್ತಿದ್ದರೆ, ಮತ್ತೊಂದೆಡೆ ಹನಿ ನೀರಿಗೂ ಪರದಾಡುವಂತ ಪರಿಸ್ಥಿತಿ ಇರುತ್ತದೆ.
ದೇಶದಲ್ಲಿ ಹಲವೆಡೆ ಅವಧಿಗೂ ಮುನ್ನವೇ ಮುಂಗಾರು ಶುರುವಾಗಿದ್ದು, ಅಸ್ಸಾಂನಲ್ಲಂತೂ ಪ್ರವಾಹದಿಂದ ಜನ ಕಂಗಾಲಾಗಿದ್ದಾರೆ. ಎಲ್ಲಿ ನೋಡಿದರೂ ನೀರು ಎನ್ನುವಂತ ಪರಿಸ್ಥಿತಿ ಅಸ್ಸಾಂ ಹಲವು ಜಿಲ್ಲೆಗಳಲ್ಲಿದೆ.
ಆದರೆ ಮಧ್ಯ ಪ್ರದೇಶದ ಪರಿಸ್ಥಿತಿಯೇ ಬೇರೆ ಇದೆ. ರಾಜ್ಯದ ಹಳ್ಳಿಯ ಜನ ನೀರು ಕುಡಿಯಬೇಕೆಂದರೆ ಕಿಲೋಮೀಟರ್ ದೂರಗಳಷ್ಟು ನಡೆಯಬೇಕು, ನೀರಿಗಾಗಿ ಇಲ್ಲಿನ ಮಹಿಳೆಯರು ಅಕ್ಷರಶಃ ಪ್ರಾಣವನ್ನೇ ಒತ್ತೆ ಇಡುತ್ತಾರೆ.
ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಘುಸಿಯಾ ಜನರ ನೀರಿನ ಪರಿಸ್ಥಿತಿ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ವೀಡಿಯೊ ಬಿಡುಗಡೆ ಮಾಡಿದೆ. ಟ್ವಿಟರ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಜನರು ನೀರಿಗಾಗಿ ತಮ್ಮ ಪ್ರಾಣವನ್ನೇ ಒತ್ತೆಯಿಡುವ ವೀಡಿಯೋ ಈಗ ವೈರಲ್ ಆಗಿದೆ.

ಹಗ್ಗದ ಸಹಾಯವಿಲ್ಲದೆ ಬಾವಿಗೆ ಇಳಿಯುವ ಮಹಿಳೆಯರು
ಎಎನ್ಐ ಹಂಚಿಕೊಂಡಿರುವ ವೀಡಿಯೋದಲ್ಲಿ ಯಾವುದೇ ಸಹಾಯವಿಲ್ಲದೆ ಆಳವಾದ ಬಾವಿಗೆ ಇಳಿಯುವ ಮಹಿಳೆಯರು ಸಣ್ಣ ನೀರಿನ ಒರತೆಗಳಿಂದ ಗುಂಡಿಯಲ್ಲಿ ಸಂಗ್ರಹವಾಗಿರುವ ನೀರನ್ನು ಸಣ್ಣ ಪಾತ್ರೆಗಳ ಸಹಾಯದಿಂದ ಬಕೆಟ್, ಬಿಂದಿಗೆಗೆ ತುಂಬಿಕೊಳ್ಳುತ್ತಾರೆ. ಹಗ್ಗದ ಸಹಾಯದಿಂದ ಇವುಗಳನ್ನು ಮೇಲಕ್ಕೆ ಎತ್ತಿಕೊಳ್ಳುತ್ತಾರೆ.
ನೀರು ತುಂಬಿದ ನಂತರ ಸೀರೆಯನ್ನು ಉಟ್ಟಿರುವ ಮಹಿಳೆಯೊಬ್ಬಳು ಹಗ್ಗ, ಮೆಟ್ಟಿಲುಗಳ ಸಹಾಯವಿಲ್ಲದೇ ಬಾವಿಯ ಗೋಡೆಯನ್ನು ಹತ್ತುವುದನ್ನು ಕಾಣಬಹುದು. ಅದೇ ವಿಡಿಯೋದಲ್ಲಿ ಮತ್ತೋರ್ವ ಯುವತಿ ಕೂಡ ಅದೇ ರೀತಿ ಬಾವಿಯ ಒಳಗಿಂದ ಮೇಲಕ್ಕೆ ಹತ್ತುವುದನ್ನು ನೋಡಬಹುದು, ಈ ವೇಳೆ ಹಗ್ಗವಾಗಲಿ, ಮೆಟ್ಟಿಲಾಗಲಿ ಸಹಾಯ ಪಡೆಯುವುದಿಲ್ಲ ಗೋಡೆಯಲ್ಲಿರುವ ಸಣ್ಣ ಕಲ್ಲುಗಳನ್ನು ಹಿಡಿದು ಆಳವಾದ ಬಾವಿಯಿಂದ ಮೇಲಕ್ಕೆ ಹತ್ತುವುದು ಅಪಾಯಾಕಾರಿಯಾದರು ಇವರಿಗೆ ಬೇರೆ ದಾರಿಯಿಲ್ಲ.
|
ಬುಡಕಟ್ಟು ಜನಾಂಗದವರೇ ಹೆಚ್ಚಾಗಿರುವ ಗ್ರಾಮ
ದಿಂಡೋರಿ ಜಿಲ್ಲೆಯ ಜನರು ಕಳೆದ ಕೆಲವು ವರ್ಷಗಳಿಂದ ತೀವ್ರವಾದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರೇ ಈ ಜಿಲ್ಲೆಯಲ್ಲಿ ಹೆಚ್ಚಾಗಿದ್ದಾರೆ.
ಗ್ರಾಮದಲ್ಲಿ ಮೂರು ಬಾವಿಗಳಿದ್ದು ಎಲ್ಲವೂ ಬತ್ತಿ ಹೋಗಿವೆ, ಕೈಪಂಪುಗಳಲ್ಲಿ ನೀರು ಬರುತ್ತಿಲ್ಲ. ಕಳೆದ ಒಂದು ವರ್ಷದಿಂದ ಘುಸಿಯಾ ಗ್ರಾಮದಲ್ಲಿ ಪರಿಸ್ಥಿತಿ ಹೀಗೆ ಇದೆ. ಆದರೂ ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಲು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮುಂದಾಗಿಲ್ಲ.

ನೀರಿನ ವ್ಯವಸ್ಥೆ ಮಾಡಲು ಆಗ್ರಹ
ಸ್ಥಳೀಯ ನಿವಾಸಿ ಕುಸುಮ್ ಮಾತನಾಡಿ, "ನಾವು ಬಹಳ ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ, ಆಡಳಿತವು ನಮ್ಮ ಸಮಸ್ಯೆ ಬಗ್ಗೆ ಗಮನ ಕೊಡುತ್ತಿಲ್ಲ, ಸರ್ಕಾರಿ ನೌಕರರು ಮತ್ತು ರಾಜಕೀಯ ಮುಖಂಡರು ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೋರ್ವ ನಿವಾಸಿ ರೂಡಿಯಾ ಬಾಯಿ ಮಾತನಾಡಿ, "ಗ್ರಾಮದಲ್ಲಿ ಬಹುತೇಕ ಬಾವಿಗಳು ಬತ್ತಿ ಹೋಗಿವೆ. ಹಗಲು ರಾತ್ರಿ ಎನ್ನದೆ ಬಾವಿಗೆ ಇಳಿದು ನೀರು ಸಂಗ್ರಹಿಸಬೇಕು. ಗ್ರಾಮದಲ್ಲಿ ಮೂರು ಬಾವಿಗಳಲ್ಲೂ ಸಹ ನೀರಿಲ್ಲ, ಕೈಪಂಪುಗಳಲ್ಲಿ ನೀರಿಲ್ಲ. ಒಂದು ವರ್ಷದಿಂದ ಪರಿಸ್ಥಿತಿ ಹೀಗೆಯೇ ಇದೆ" ಎಂದು ಹೇಳಿದ್ದಾರೆ.

ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರ ನಿರ್ಧಾರ
ಕಳೆದ ಒಂದು ವರ್ಷದಿಂದ ನೀರಿಗೆ ಸಮಸ್ಯೆಯಿದ್ದರೂ ಬಗೆಹರಿಸದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಗ್ರಾಮದ ಪ್ರತಿಯೊಂದು ಮನೆಗೂ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕೊಳಾಯಿ ಸಂಪರ್ಕ ಕಲ್ಪಿಸುವವರೆಗೆ ಮತದಾನ ಮಾಡಬಾರದು ಎಂದು ನಿರ್ಧರಿಸಿದ್ದಾರೆ. ಸ್ಥಳೀಯರು, ರಾಜಕೀಯ ಮುಖಂಡರ ಬಗ್ಗೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರವು ಪ್ರತಿ ಮನೆಗೆ ಕುಡಿಯುವ ನೀರನ್ನು ಪೂರೈಸಲು 'ನಲ್ಜಲ್' ಯೋಜನೆಯನ್ನು ನಡೆಸುತ್ತಿದೆ. ಆದರೆ ಇಲ್ಲಿ ಮಾತ್ರ 'ನಲ್ಜಲ್' ಯೋಜನೆಯು ಅನುಷ್ಠಾನವಾಗಿಲ್ಲ. ಜನರು ಪ್ರತಿ ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಆಶ್ಚರ್ಯ ಎಂದರೆ ಘುಸಿಯಾ ಗ್ರಾಮ ನರ್ಮದಾ ನದಿಗೆ ಕೇವಲ 3 ಕಿಲೋ ಮೀಟರ್ ದೂರದಲ್ಲಿದೆ.












Click it and Unblock the Notifications