ಕಾಂಗ್ರೆಸ್ ನ ರಕ್ತದಲ್ಲೇ ವಂಚನೆ ಅನ್ನೋದಿದೆ: ಮೋದಿ ಲೇವಡಿ
ಭೋಪಾಲ್ (ಮಧ್ಯಪ್ರದೇಶ), ನವೆಂಬರ್ 18 : ಕಾಂಗ್ರೆಸ್ ನ ರಕ್ತದಲ್ಲೇ ವಂಚನೆ ಅನ್ನೋದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭಾ ಚುನಾವಣೆ ಪ್ರಚಾರದ ಸಲುವಾಗಿ ಛಿಂದಾವರದಲ್ಲಿ ಭಾಷಣ ಮಾಡಿದ ಅವರು, ಕಾಂಗ್ರೆಸ್ ಪಕ್ಷವು ಜನರ ದಾರಿ ತಪ್ಪಿಸುವುದನ್ನು ಮುಂದುವರಿಸಿದೆ. ವಂಚನೆ ಎಂಬುದು ಅದರ ರಕ್ತದಲ್ಲೇ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಜನರು ಪಕ್ಷಕ್ಕೆ ಪ್ರಾಶಸ್ತ್ಯ ನೀಡುವುದಿಲ್ಲ. ಇದು ಅದೇ ಕಾಂಗ್ರೆಸ್. ಮಧ್ಯಪ್ರದೇಶದ ಪ್ರಣಾಳಿಕೆಯಲ್ಲಿ ಹಸುವಿಗೆ ಪ್ರಾಮುಖ್ಯ ನೀಡುತ್ತದೆ. ಕೇರಳದ ಬೀದಿಬೀದಿಗಳಲ್ಲಿ ಹಸುಗಳನ್ನು ಕೊಂದು, ಗೋ ಮಾಂಸ ಭಕ್ಷಣೆ ಮಾಡುವುದು ಇದೇ ಪಕ್ಷ ಅಲ್ಲವಾ ಎಂದು ಲೇವಡಿ ಮಾಡಿದರು.
ಒಂದು ಪರಿವಾರ ಮತ್ತು ಒಬ್ಬ ಚಾಯ್ ವಾಲಾ ನಡುವೆ ಆಗೇಬಿಡಲಿ ಮುಕಾಬಲಾ!
ಗೋಹತ್ಯೆ ವಿಚಾರವಾಗಿ ಅಧಿಸೂಚನೆ ಹೊರಡಿಸಿದಾಗ ಕಳೆದ ವರ್ಷ ಕೇರಳದ ಕಣ್ಣೂರಿನಲ್ಲಿ ಬಿಜೆಪಿ ಹಾಗೂ ಎನ್ ಡಿಎ ವಿರುದ್ಧ ಪ್ರತಿಭಟನಾರ್ಥವಾಗಿ ಕರುವನ್ನು ಕೊಂದಿದ್ದರು ಎಂದು ಮೋದಿ ಹೇಳಿದರು.
ಗೋಮೂತ್ರ ಹಾಗೂ ಗೋಮಯಕ್ಕೆ ವಾಣಿಜ್ಯವಾಗಿ ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ಕಾಂಗ್ರೆಸ್ ಇದೀಗ ಮಧ್ಯಪ್ರದೇಶದ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದೆ.
ಸವಲತ್ತಿನ ಹೆಸರಲ್ಲಿ ಸರಕಾರದಿಂದ ನಕಲಿ ಫಲಾನುಭವಿಗಳು ಪಡೆಯುತ್ತಿದ್ದ 90 ಸಾವಿರ ಕೋಟಿಯನ್ನು ತಂತ್ರಜ್ಞಾನ ಮೂಲಕ ತಡೆಯುವಲ್ಲಿ ನಮ್ಮ ಸರಕಾರ ಪ್ರತಿ ವರ್ಷ ತಡೆಯುತ್ತಿದೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಸವಾಲು
ನನ್ನ ವಿರುದ್ಧ ಕಾಂಗ್ರೆಸ್ ನಾಯಕರು ಭಾರೀ ವಾಗ್ದಾಳಿ ನಡೆಸಿದರು. ನನಗೆ ಅದರ ಹಿಂದಿನ ಕಾರಣ ಗೊತ್ತು. ಆಧಾರ್ ನೋಂದಣಿ ಮೂಲಕ ಆರು ಕೋಟಿ ನಕಲಿ ಫಲಾನುಭವಿಗಳನ್ನು ಪತ್ತೆ ಮಾಡಲಾಗಿದೆ. ನಮ್ಮ ಸರಕಾರವು 90 ಸಾವಿರ ಕೋಟಿ ರುಪಾಯಿ ಉಳಿತಾಯ ಮಾಡಿದೆ.
230 ಸದಸ್ಯತ್ವ ಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 28ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11ನೇ ತಾರೀಕು ಫಲಿತಾಂಶ ಬರಲಿದೆ.