ಲಾರಿ ಡಿಕ್ಕಿ; 5 ವಲಸೆ ಕಾರ್ಮಿಕರು ಸಾವು, 15 ಜನರಿಗೆ ಗಾಯ
ಭೋಪಾಲ್, ಮೇ 10 : ಮಧ್ಯಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 5 ಜನ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಗೂಡ್ಸ್ ರೈಲು ಡಿಕ್ಕಿ ಹೊಡೆದು 14 ವಲಸೆ ಕಾರ್ಮಿಕರು ಮೃತಪಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು.
ವಲಸೆ ಕಾರ್ಮಿಕರು ಸಂಚಾರ ನಡೆಸುತ್ತಿದ್ದ ಲಾರಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಭೋಪಾಲ್ನಿಂದ ಸುಮಾರು 200 ಕಿ. ಮೀ. ದೂರದಲ್ಲಿ ಈ ಅಪಘಾತ ನಡೆದಿದೆ. ಐವರು ಮೃತಪಟ್ಟಿದ್ದು, 15 ಜನರು ಗಾಯಗೊಂಡಿದ್ದಾರೆ.
ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದ 18 ವಲಸೆ ಕಾರ್ಮಿಕರು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಕ್ಕೆ ಸೇರಿದವರು. ಲಾಕ್ ಡೌನ್ ಪರಿಣಾಮ ಮಾವಿನ ಹಣ್ಣು ಸಾಗಣೆ ಮಾಡುವ ಲಾರಿಯಲ್ಲಿ ಅವರು ತಮ್ಮ ತವರು ರಾಜ್ಯಕ್ಕೆ ವಾಪಸ್ ತೆರಳುತ್ತಿದ್ದರು.

ನರಸಿಂಘರ್ ಎಂಬ ಪ್ರದೇಶದಲ್ಲಿ ಲಾರಿ ಪಲ್ಟಿಯಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎಲ್ಲಾ ಕಾರ್ಮಿಕರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಒಬ್ಬ ಕಾರ್ಮಿಕರಿಗೆ ತೀವ್ರ ಜ್ವರ ಇದ್ದು ಅವರ ಮೇಲೆ ನಿಗಾ ಇಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
"ಹೈದರಾಬಾದ್ನಿಂದ ದೆಹಲಿಗೆ ಆಗ್ರಾಕ್ಕೆ ಮಾವಿನ ಹಣ್ಣು ಸಾಗಣೆ ಮಾಡುತ್ತಿದ್ದ ಲಾರಿಯಲ್ಲಿ ವಲಸೆ ಕಾರ್ಮಿಕರು ಪ್ರಯಾಣ ಮಾಡುತ್ತಿದ್ದರು. ಲಾರಿ ಚಾಲಕ, ನಿರ್ವಾಹಕ ಸೇರಿ 20 ಜನರಿದ್ದರು. ಲಾರಿ ಪಲ್ಟಿಯಾದ ಪರಿಣಾಮ 5 ಜನರು ಮೃತಪಟ್ಟಿದ್ದಾರೆ" ಎಂದು ನರಸಿಂಘರ್ ಜಿಲ್ಲಾಧಿಕಾರಿ ದೀಪಕ್ ಸಕ್ಸೇನಾ ಹೇಳಿದ್ದಾರೆ.
ಶುಕ್ರವಾರ ಮಹಾರಾಷ್ಟ್ರದಲ್ಲಿ ಹಳಿಯ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದಿತ್ತು. 16 ಜನರು ಈ ಅಪಘಾತದಲ್ಲಿ ಮೃತಪಟ್ಟಿದ್ದರು.












Click it and Unblock the Notifications