ಆಂಧ್ರದ ಜನತೆಗೆ ಕರ್ನಾಟಕದಲ್ಲಿ ಕ್ಯಾನ್ಸರ್ ಚಿಕಿತ್ಸೆ ಕೂಡ ಫ್ರೀ!
ಬೆಂಗಳೂರು, ಮೇ. 05: ಆಂಧ್ರ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವರಿಗೆ ವೈಎಸ್ಆರ್ ಆರೋಗ್ಯ ಶ್ರೀ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆ. ಬಿಪಿಎಲ್ಗಿಂತಲೂ ಮೇಲ್ಪಟ್ಟ ವರ್ಗದ ಜನತೆ ಆರೋಗ್ಯ ರಕ್ಷಣೆಗೆ ನಯಪೈಸೆ ವೆಚ್ಚವಿಲ್ಲದೇ ಆರೋಗ್ಯ ರಕ್ಷಾ ಯೋಜನೆ ಪರಿಚಯಿಸಿದ ದೇಶದ ಏಕೈಕ ರಾಜ್ಯವಿದು.
ಉದ್ಯೋಗಿಗಳಿಗೆ ಪ್ರತ್ಯೇಕ ವಿಮಾ ಯೋಜನೆ. ಕಾರ್ಯನಿರತ ಪತ್ರಕರ್ತರ ಅರೋಗ್ಯ ಯೋಜನೆ. ಇದರ ಜತೆಗೆ ಈ ವರ್ಷದಿಂದ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಸೇರ್ಪಡೆ. ವೈಎಸ್ಆರ್ ಆರೋಗ್ಯ ಶ್ರೀ ಯೋಜನೆ ಅಡಿಯಲ್ಲಿ ಬಡವರು ಬೆಂಗಳೂರಿನ ಎಚ್ಸಿಸಿ, ಕಿದ್ವಾಯ್ ಸೇರಿದಂತೆ ಪ್ರತಿಷ್ಠಿತ ಆಸ್ಪತ್ರೆಗಲ್ಲಿ ಸೂಪರ್ ಸ್ಪೆಷಾಲಿಟಿ ಶಸ್ತ್ರ ಚಿಕಿತ್ಸೆ ಪಡೆದರೂ ಐದು ಪೈಸೆ ಪಾವತಿ ಮಾಡುವಂತಿಲ್ಲ.
ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲಿ ಬಡವರಿಗೆ, ಬಡತನ ರೇಖೆಗಿಂತಲೂ ಮೇಲಿರುವ ಎಲ್ಲಾ ವರ್ಗಕ್ಕೂ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಕೊಟ್ಟಿರುವ ಆರೋಗ್ಯ ರಕ್ಷಣೆ ಯೋಜನೆಗಳು. ವೈಎಸ್ಆರ್ ಆರೋಗ್ಯ ಶ್ರೀ ಯೋಜನೆ ಅಡಿ ಬೆಂಗಳೂರಿನ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆ ಎಚ್ಸಿಜಿಯಲ್ಲಿ ನೆರೆ ರಾಜ್ಯದ ಆಂಧ್ರ ಪ್ರದೇಶದ ಜನತೆಗೆ ಕ್ಯಾನ್ಸರ್ ಗೆ ಉಚಿತ ಚಿಕಿತ್ಸೆ ಲಭ್ಯವಿದೆ.
ಇಲ್ಲಿ ವೈಎಸ್ಆರ್ ಆರೋಗ್ಯ ಶ್ರೀ ಹೆಲ್ಪ್ ಡೆಸ್ಕ್ ಇದೆ. ಆಂಧ್ರ ಪ್ರದೇಶದ ಸರ್ಕಾರಿ ಉದ್ಯೋಗಿಗಳಿಗೂ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಆಂಧ್ರ ಪ್ರದೇಶದಿಂದ ಯಾರೇ ಬಂದರೂ ಅವರ ವಿವರ ಪಡೆದು ಚಿಕಿತ್ಸೆ ಕೊಡಿಸಲು ಬೆಂಗಳೂರಿನ ಫೋರ್ಟೀಸ್, ಕಿದ್ವಾಯಿ, ಎಂ.ಎಸ್. ರಾಮಯ್ಯ ಮತ್ತಿತರ ಒಡಂಬಡಿಕೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸೌಲಭ್ಯ ಕಲ್ಪಿಸಲಾಗುತ್ತದೆ.
ಜನ ಸೇವೆ ಬಗ್ಗೆ ಬದ್ಧತೆ ಇರುವ ಒಬ್ಬ ಜನ ನಾಯಕ ನಿಜವಾಗಿಯೂ ರೂಪಿಸಬೇಕಾದ ಯೋಜನೆಗಳನ್ನು ಜಗನ್ ತನ್ನ ಜನತೆಗೆ ಕೊಟ್ಟಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಆಂಧ್ರದ ಬಡವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದು ಆಂಧ್ರ ಪ್ರದೇಶದ ಆರೋಗ್ಯ ವಿಮೆಗಳ ವಸ್ತುಸ್ಥಿತಿ.
ಕರುನಾಡಿನ ಕರುಣಾಜನಕ ಕಥೆ
ರಾಜ್ಯದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬವೂ ಚಿಕಿತ್ಸೆ ಪಡೆಯಬಹುದು. ಆದರೆ ಆಯುಷ್ಮಾನ್ ಭಾರತ್ - ಅರೋಗ್ಯ ಕರ್ನಾಟಕ ಯೋಜನೆ ಅಡಿ ಚಿಕಿತ್ಸೆ ಪಡೆಯಲು ರೂಪಿಸಿರುವ ನಿಯಮಗಳನ್ನು ಪಾಲನೆ ಮಾಡುವಷ್ಟರಲ್ಲಿ ರೋಗಿ ಇಹ ಲೋಕ ತ್ಯಜಿಸಬೇಕಾಗುತ್ತದೆ. ಇನ್ನು ಕ್ಯಾನ್ಸರ್ ಚಿಕಿತ್ಸೆ ವಿಚಾರ ಬಂದರೆ ಬಡವರಿಗೆ ಇರುವುದು ಕೇವಲ ಕಿದ್ವಾಯಿ ಮಾತ್ರ. ಕ್ಯಾನ್ಸರ್ ರೋಗಕ್ಕೆ ದುಬಾರಿ ಶುಲ್ಕ ತಗಲುತ್ತದೆ. ಹೀಗಾಗಿ ಕರ್ನಾಟಕದಲ್ಲಿ ಕ್ಯಾನ್ಸರ್ ಪೀಡಿತ ಬಡವರು ಚಿಕಿತ್ಸೆ ಪಡೆಯಬೇಕಾದರೆ, ಸರ್ಕಾರದ ಅರೋಗ್ಯ ವಿಮೆಯನ್ನು ನಂಬಿ ಕೂರುವಂತೆಯೇ ಇಲ್ಲ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ
ಕರ್ನಾಟಕದಲ್ಲಿ ಆಯುಷ್ಮಾನ್ ಭಾರತ್- ಅರೋಗ್ಯ ಕರ್ನಾಟಕ ವಿಮೆ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಹೊಂದಿರುವರು ಆರೋಗ್ಯದಲ್ಲಿ ಏರು ಪೇರಾದರೆ ಮೊದಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ತೋರಿಸಿಕೊಳ್ಳಬೇಕು. ಅಲ್ಲಿನ ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಿಕ್ಕಿ, ನಿಮ್ಮ ಮೇಲೆ ಕರುಣೆ ಬೀರಿ ಯಾವುದಾದರೂ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಿದರೆ ಮಾತ್ರ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಅಡಿ ಚಿಕಿತ್ಸೆ ದೊರೆಯಲಿದೆ. ಆದರೆ, ನಮ್ಮ ಆರೋಗ್ಯ ಇಲಾಖೆಯ ವೈದ್ಯರಿಗೆ ಮೇಲಾಧಿಕಾರಿಗಳು ಕೊಟ್ಟಿರುವ ಕಟ್ಟಪ್ಪಣೆಗಳನ್ನು ಪಾಲಿಸುವ ದಾವಂತದಲ್ಲಿ ರೋಗಿ ನರಳುತ್ತಿದ್ದರೂ ಇವರಿಗೆ ಇಲ್ಲಿಯೇ ಚಿಕಿತ್ಸೆ ಕೊಡಿಸಬಹುದು ಎಂದು ಷರಾ ಬರೆದು ಸರ್ಕಾರಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಿದ್ದಾರೆ. ಹೀಗಾಗಿ ಜನ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದಡಿ ಚಿಕಿತ್ಸೆ ಪಡೆಯಾಗದ ಸ್ಥಿತಿ ಇಲ್ಲಿದೆ. ಇದು ಕರ್ನಾಟಕಕ್ಕೆ ಕಾಮನ್ ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟಿರುವ ಆರೋಗ್ಯ ಕೊಡುಗೆ.
ಶಾಸಕರಿಂದ ಶಿಫಾರಸು ಮಾಡಿಸಬೇಕು
ನೆರೆ ಆಂಧ್ರ ಪ್ರದೇಶದ ವೈಎಸ್ಆರ್ ಆರೋಗ್ಯ ಶ್ರೀ ಯೋಜನೆ ಅಡಿ ಚಿಕಿತ್ಸೆ ಪಡೆಯಲು ಇಚ್ಛಿಸುವ ರೋಗಿಗಳು ಅವರ ಇಚ್ಛೆಯಂತೆ ಈ ಯೋಜನೆಯಡಿ ನೊಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಆಸ್ಪತ್ರೆ ಆಯ್ಕೆ ಕೂಡ ರೋಗಿ ಅಥವಾ ಅವರ ಕುಟುಂಬದ ವಿವೇಚನೆಗೆ ನೀಡಲಾಗಿದೆ. ನಮ್ಮ ರಾಜ್ಯದ ವಿಚಾರಕ್ಕೆ ಬಂದರೆ, ಇಲ್ಲಿ ಬಡವರಿಗೆ ಖಾಸಗಿ ಆಸ್ಪತ್ರೆ ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇಲ್ಲ. ವೈದ್ಯರ ಶಿಫಾರಸು ಮೇರೆಗೆ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಅದಕ್ಕೆಲ್ಲಾ,ಸ್ಥಳೀಯ ಶಾಸಕರಿಂದ ಶಿಫಾರಸು ಮಾಡಿಸಬೇಕು.
ಬಡವರಿಗೆ ಒಂದು ವಿಶೇಷ ಯೋಜನೆ ಇಲ್ಲಿಲ್ಲ
ರಾಜ್ಯದಲ್ಲಿ ಕ್ಯಾನ್ಸರ್ , ಹೃದಯ, ಕಿಡ್ನಿ ಸಂಬಂಧಿ ಗಂಭೀರ ಕಾಯಿಲೆಗಳಿಗೆ ತುತ್ತಾದರೆ, ತುರ್ತಾಗಿ ಖಾಸಗಿ ಆಸ್ಪತ್ರೆಗಳಲ್ಲಿಉತ್ತಮ ಚಿಕಿತ್ಸೆ ಪಡೆಯುವಂತಹ ಯಾವ ಯೋಜನೆಯೂ ಕರ್ನಾಟಕದಲ್ಲಿಲ್ಲ. ಒಂದು ವೇಳೆ ಸಾಲ ಮಾಡಿಚಿಕಿತ್ಸೆ ಪಡೆದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮನವಿ ಸಲ್ಲಿಸಿದ್ರೆ, ನೂರು ರೂಪಾಯಿ ಖರ್ಚು ಆಗಿದ್ದರೆ, ಹತ್ತು ರೂಪಾಯಿ ಬಿಡುಗಡೆ ಮಾಡಿ ಕೈತೊಳೆದುಕೊಳ್ಳುತ್ತಾರೆ. ನೆರೆ ರಾಜ್ಯ ಆಂಧ್ರದ ಜನತೆಗೆ ಕೊಟ್ಟಿರುವಷ್ಟು ಸೌಲಭ್ಯಗಳನ್ನು ಶ್ರೀಮಂತ ಆದಾಯ ಹೊಂದಿರುವ,ದೇಶದ ಐಟಿ ಹಬ್ ಕರ್ನಾಟಕದಲ್ಲಿ ಕೊಡಲಾಗುತ್ತಿಲ್ಲ. ಇದು ಕಾಮನ್ ಮ್ಯಾನ್ ಸರ್ಕಾರದ ವಾಸ್ತವ ಸಂಗತಿ.
Recommended Video