ಕೆಂಗೇರಿಯಲ್ಲಿ ಮರ್ಸಿಡಿಸ್ ಬೆಂಜ್ ಕಾರು ಡಿಕ್ಕಿಯಾಗಿ ಯುವತಿ ಸಾವು: ಕೇಸ್ ಮುಚ್ಚಿಹಾಕಲು ಕುಡುಕ ಚಾಲಕ ಆಫರ್ ಮಾಡಿದ್ದೆಷ್ಟು ಕೋಟಿ?
ಬೆಂಗಳೂರು, ನವೆಂಬರ್, 06: ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡ್ತಿದ್ದ ಸಂಧ್ಯಾ (30) ಎಂಬ ಯುವತಿ ರಸ್ತೆ ದಾಟುವಾಗ, Mercedes-Benz ಕಾರು ಡಿಕ್ಕಿಯಾಗಿ ಮೃತಪಟ್ಟ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ. ಬಳಿಕ ಸಂಧ್ಯಾ ಕುಟುಂಬಕ್ಕೆ ಕುಡಿದು ಕಾರು ಚಾಲನೆ ಮಾಡಿದ್ದ ಧನುಷ್ 1.5 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ. ಆಮೇಲೆ ಏನಾಯ್ತು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನವೆಂಬರ್ 2 ರಂದು ಕೆಂಗೇರಿ ಬಸ್ ನಿಲ್ದಾಣದ ಬಳಿ ಸಂಜೆ 6:45ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಧನುಷ್ (20) ಚಲಾಯಿಸುತ್ತಿದ್ದ Mercedes-Benz ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಸಂಧ್ಯಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಈ ಭೀಕರ ರಸ್ತೆ ಅಪಘಾತ ಇಡೀ ಬೆಂಗಳೂರಿಗರನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಟೆಕ್ಕಿ ಸಂಧ್ಯಾ ಅವರ ಮೇಲೆ ಕುಡಿದು ಬೆನ್ಜ್ ಕಾರು ಓಡಿಸುವ ಮೂಲಕ ಅಟ್ಟಹಾಸ ಮೆರೆದಿದ್ದು, ಈ ವೇಳೆ ಕಾರು ಗುದ್ದಿದ ರಭಸಕ್ಕೆ ಸಂಧ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ, ನವೆಂಬರ್ 2 ರಂದು ಸಂಜೆ 6.45ಕ್ಕೆ ಆರೋಪಿ ಧನುಷ್ ಹಾಗೂ ಗೆಳೆಯರು ಎಣ್ಣೆ ಪಾರ್ಟಿ ಮುಗಿಸಿ ರಸ್ತೆಯಲ್ಲಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದರು.
ಇನ್ನು ಈ ವೇಳೆ ಕೆಂಗೇರಿ ಬಸ್ ನಿಲ್ದಾಣದ ಬಳಿ ಟೆಕ್ಕಿ ಸಂಧ್ಯಾ ಅವರು ರಸ್ತೆ ದಾಟುತ್ತಿದ್ದು, ವೇಗವಾಗಿ ಬರುತ್ತಿದ್ದ ಕಾರು ಟೆಕ್ಕಿ ಸಂಧ್ಯಾಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಮೇಲೆ ಹಾರಿದ ಸಂಧ್ಯಾ ಅವರ ದೇಹ ಛಿದ್ರ ಛಿದ್ರವಾಗಿದೆ. ಸಂಧ್ಯಾ ಅವರು ತಮ್ಮ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ವೇಳೆ ಕೆಂಗೇರಿ ಬಸ್ ನಿಲ್ದಾಣ ಬಳಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಇನ್ನು ಅಪಘಾತದ ಬಳಿಕ ಸಂಧ್ಯಾ ಅವರಿಗೆ ತೀವ್ರ ರಕ್ತಸ್ರಾವವಾಗಿದ್ದು, ಕೂಡಲೇ ಅವರನ್ನು ಸ್ನೇಹಿತರು, ಸ್ಥಳೀಯರು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಂಧ್ಯಾ ಸಾವನ್ನಪ್ಪಿದ್ದರು. ಸಂಧ್ಯಾ ಒಬ್ಬರಿಗೇ ಅಷ್ಟೇ ಅಲ್ಲದೆ, ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೂ ಬೆನ್ಜ್ ಕಾರು ಡಿಕ್ಕಿ ಹೊಡೆದಿದ್ದು, ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸೈಯ್ಯದ್ ಎಂಬ ವ್ಯಕ್ತಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇನ್ನು ಕುಡಿದ ಅಮಲಿನಲ್ಲಿ ಅತೀ ವೇಗವಾಗಿ ಕಾರು ಚಾಲನೆ ಮಾಡಿದ್ದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಇನ್ನು ಅಪಘಾತದ ಬಳಿಕ ಆರೋಪಿ ಧನುಷ್ ಹಾಗೂ ಸ್ನೇಹಿತರು ಸ್ಥಳದಿಂದ ಓಡಿಹೋಗಲು ಪ್ರಯತ್ನಿಸಿದ್ದಾರೆ. ಪರಾರಿಯಾಗುತ್ತಿದ್ದ ಆರೋಪಿಗಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೆ ಪೊಲೀಸರು ಆರೋಪಿ ಧನುಷ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಅಪಘಾತಕ್ಕೆ ಕಾರಣವಾದ ಬೆನ್ಜ್ ಕಾರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕಾರಿನಲ್ಲಿ ತೆರಳುತ್ತಿದ್ದ ವೇಳೆ ಆರೋಪಿ ಧನುಷ್ ಹಾಗೂ ಸ್ನೇಹಿತರು ಕುಡಿದ ಮತ್ತಿನಲ್ಲಿದ್ದರು. ಆರೋಪಿ ಚಾಲಕನನ್ನು ಪೊಲೀಸರು ಮದ್ಯಪಾನ ಪರೀಕ್ಷೆಗೊಳಪಡಿಸಿದ್ದು, ಈ ವೇಳೆ ಆರೋಪಿ ಚಾಲಕನ ಆಲ್ಕೋಮೀಟರ್ ಪರೀಕ್ಷೆಯು 177 ಎಂಜಿ/ 100 ಎಂಎಲ್ ರಕ್ತದ ಆಲ್ಕೋಹಾಲ್ ಅಂಶವನ್ನು ಹೊಂದಿತ್ತು ಎಂದು ತೋರಿಸಿದೆ. ಇದು ಕಾನೂನುಬದ್ಧವಾಗಿ ಅನುಮತಿಸುವ 30 ಎಂಜಿ/ 100 ಎಂಎಲ್ಗಿಂತ ಹೆಚ್ಚಿನದಾಗಿದೆ ಎಂದು ತಿಳಿದುಬಂದಿದೆ.
ಕೋಟಿ ಕೋಟಿ ಆಫರ್: ಸಂಧ್ಯಾ ಸಾವಿಗೆ ಸಂಬಂಧಿಸಿದಂತೆ ಅವರ ಸಹೋದರ ಪೊಲೀಸ್ ಶೇಖರ್ ದೂರು ದಾಖಲಿಸಿದ್ದಾರೆ. ಇದೀಗ ಪ್ರಕರಣ ಹಿಂತೆಗೆದುಕೊಳ್ಳುವಂತೆ ಆರೋಪಿ ಧನುಷ್ ಸಂಬಂಧಿಕರು 1.5 ಕೋಟಿ ರೂಪಾಯಿ ಆಫರ್ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕಾರು ಚಲಾಯಿಸುತ್ತಿದ್ದ ಆರೋಪಿ ಧನುಷ್ ಕೋಟ್ಯಾಧಿಪತಿ ಪರಮಶಿವಯ್ಯ ಎಂಬುವವರ ಒಬ್ಬನೇ ಪುತ್ರ ಎಂದು ತಿಳಿದುಬಂದಿದೆ.
ಸಂಧ್ಯಾಗೆ ಗುದ್ದಿರುವ ಬೆಂಜ್ ಕಾರು LV ಟ್ರಾವೆಲ್ಸ್ಗೆ ಸೇರಿದ್ದು ಎನ್ನಲಾಗಿದೆ. ಟ್ರಾವೆಲ್ಸ್ ಮಾಲೀಕರು ಆಗಿರುವ ಪರಮಶಿವಯ್ಯ ಒಬ್ಬನೇ ಮಗನಿಗೆ ಐಷಾರಾಮಿ ಬೆಂಜ್ ಕಾರನ್ನು ಕೊಡಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಇದೀಗ ಕಾರು ಮಾಲೀಕನ ಕಡೆಯವರು ಬಂದು ಎಫ್ಐಆರ್ ಮಾಡಬೇಡಿ. ಹಣ ಕೊಡುತ್ತೇವೆ ಅಂತಾ ಹೇಳಿದ್ದರು. ನಮಗೆ ಹಣ ಬೇಡ, ಸಂಧ್ಯಾ ಬೇಕು. ಈ ಘಟನೆ ಬಗ್ಗೆ ಎಲ್ಲಾ ತಿಳಿದುಕೊಂಡು ಪೊಲೀಸ್ ಠಾಣೆಗೆ ಹೋಗಿ ಎಫ್ಐಆರ್ ಹಾಕಲು ಮುಂದಾಗಿದ್ದೆವು. ಆದರೆ ಅಲ್ಲಿ ಎಫ್ಐಆರ್ ಹಾಕುವುದಕ್ಕೆ ಹಿಂದೇಟು ಹಾಕಿದ್ದು, ಬಳಿಕ ಎಫ್ಐಆರ್ ದಾಖಲು ಮಾಡಿಕೊಂಡರು ಎಂದು ಸಂಧ್ಯಾ ಸಹೋದರ ಹೇಳಿದ್ದಾರೆ. ಅಲ್ಲದೆ, ಆತ ಶೋಕಿಯಲ್ಲಿ ಕುಡಿದು ಕಾರು ಓಡಿಸಿ ನಮ್ಮ ಅಕ್ಕನ ಜೀವ ತೆಗೆದಿದ್ದಾನೆ. ಅವರಿಗೆ ಶಿಕ್ಷೆ ಆಗಲೇಬೇಕೆಂದು ಹೇಳುಬ ಮೂಲಕ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
"ಹಣವು ಎಲ್ಲವನ್ನೂ ಪರಿಹರಿಸಬಹುದಾದರೆ, ಅದು ನನ್ನ ಸಹೋದರಿಯನ್ನು ಮರಳಿ ತರಬಹುದೇ? ಹಣ ಬರುತ್ತದೆ ಮತ್ತು ಹೋಗುತ್ತದೆ. ಆದರೆ, ಕಳೆದುಹೋದ ಜೀವನವು ಭರಿಸಲಾಗದದು. ನನ್ನ ತಂಗಿಗೆ ನ್ಯಾಯ ದೊರಕಿಸಿಕೊಡಲು ನಾವು ನಿರ್ಧರಿಸಿದ್ದೇವೆ," ಎಂದು ಶೇಖರ್ ಹೇಳಿದರು.
"ಸಂಧ್ಯಾ ಒಬ್ಬ ಪ್ರತಿಭಾವಂತ ಕಲಾವಿದೆ, ಒಬ್ಬ ವರ್ಣಚಿತ್ರಗಾರ್ತಿ, ವಿಡಿಯೋ ಜಾಕಿ, ಗಾಯಕಿಯಾಗಿದ್ದವರು. ಅವರು ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ತಮ್ಮ ಐಟಿ ವೃತ್ತಿಜೀವನವನ್ನು ತೊರೆದರು. ಅವರ ಪತಿ ಶಿವಕುಮಾರ್, ಡಿಸೆಂಬರ್ನಲ್ಲಿ ತಮ್ಮ ಮೂರು ವರ್ಷಗಳ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಮುಂದಿನ ತಿಂಗಳು ವಾರಣಾಸಿಗೆ ಪ್ರಯಾಣಿಸುವ ಯೋಜನೆ ಮಾಡಿಕೊಂಡಿದ್ದೆವು," ಎಂದು ಹೇಳಿದರು.
ಗೃಹ ಸಚಿವರು ಹೇಳಿದ್ದೇನು.?: ಈ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು , ತನಿಖೆಯಲ್ಲಿ ಅವ್ಯವಹಾರ ತನಿಖೆಯಲ್ಲಿ ಲೋಪ ಕಂಡುಬಂದರೆ, ಪೊಲೀಸ್ ಆಯುಕ್ತರು ಕ್ರಮ ಕೈಗೊಳ್ಳುತ್ತಾರೆ. ಅಂತಹ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಈ ಹಿಂದೆಯೂ ಅಪಘಾತಗಳಲ್ಲಿ ಭಾಗಿಯಾಗಿರುವ ಪ್ರಭಾವಿ ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡುತ್ತೇನೆ ಎಂದು ತಿಳಿಸಿದ್ದಾರೆ.












Click it and Unblock the Notifications