ಜಯನಗರಕ್ಕೆ ಮತ್ತೊಂದು ಗರಿ; ಪ್ರಕೃತಿ ವನ ಲೋಕಾರ್ಪಣೆ
Recommended Video
ಬೆಂಗಳೂರು, ಅಕ್ಟೋಬರ್ 31 : ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದು ಜಯನಗರ. ಉತ್ತಮವಾದ ಪಾರ್ಕ್ಗಳು ಜಯನಗರದಲ್ಲಿವೆ. ಇದಕ್ಕೆ ಹೊಸ ಸೇರ್ಪಡೆ 1.5 ಎಕರೆ ವಿಸ್ತೀರ್ಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 'ಪ್ರಕೃತಿ ವನ'.
In Pics: ಬೆಂಗಳೂರಿನ ಹೊಸ ಸೆಲ್ಫಿ ಸ್ಟಾಟ್; ಜಯನಗರದ ಪ್ರಕೃತಿ ವನ
ಗುರುವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಿಬಿಎಂಪಿಯ ವಾರ್ಡ್ ನಂಬರ್ 167ರಲ್ಲಿ ಪಾಲಿಕೆ ನಿರ್ಮಾಣ ಮಾಡಿರುವ 'ಪ್ರಕೃತಿ ವನ' ಲೋಕಾರ್ಪಣೆ ಮಾಡಿದರು. ಕಂದಾಯ ಸಚಿವ ಆರ್. ಅಶೋಕ, ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಮೇಯರ್ ಎಂ. ಗೌತಮ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಬಿಬಿಎಂಪಿ 1.25 ಕೋಟಿ ರೂ. ವೆಚ್ಚದಲ್ಲಿ 'ಪ್ರಕೃತಿ ವನ' ನಿರ್ಮಾಣ ಮಾಡಿದೆ. ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಆಯುಕ್ತರ ಕಚೇರಿ ಪಕ್ಕದಲ್ಲಿ ವನ ಇದ್ದು, ಮುಂಭಾಗದಲ್ಲಿ ಅಂಬರ ಚುಂಚನ ಗಡಿಯಾರ ಗೋಪುರವಿದೆ.
ಹೆಸರಿಗೆ ತಕ್ಕಂತೆ 'ಪ್ರಕೃತಿ ವನ' ಪರಿಸರ ಸ್ನೇಹಿಯಾಗಿದೆ. ಈ ಪಾರ್ಕ್ನಲ್ಲಿ ಮಳೆ ನೀರನ್ನು ಇಂಗಿಸಲು ಎರಡು ಬೃಹತ್ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಅಪರೂಪದ ಗಿಡಮೂಲಿಕೆ ಮತ್ತು ವಿವಿಧ ಪ್ರದೇಶಗಳ ಸಸ್ಯಗಳು ಇಲ್ಲಿವೆ.

ಪ್ರಕೃತಿ ವನಕ್ಕೆ 1.25 ಕೋಟಿ ರೂ. ವೆಚ್ಚ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ ನಂಬರ್ 167ರಲ್ಲಿ 'ಪ್ರಕೃತಿ ವನ' ನಿರ್ಮಾಣ ಮಾಡಿದೆ. 1.5 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ಪಾರ್ಕ್ಗೆ 1.25 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಪ್ರಕೃತಿ ದೇವನ ಮೂರ್ತಿ
ಜಯನಗರದ ಸೌತ್ ಎಂಡ್ ಸರ್ಕಲ್ ಸಮೀಪದಲ್ಲಿರುವ ಪ್ರಕೃತಿ ವನದಲ್ಲಿ 43 ಅಡಿ ಎತ್ತರದ ಪ್ರಕೃತಿ ದೇವನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ವನದಲ್ಲಿ ಮೂರ್ತಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ನದಿ ಮೂಲ, ಮರ ಕಡಿಯಬೇಡಿ ಎಂಬ ಸಂದೇಶ ಸಾರುವ ಕಲಾಕೃತಿಗಳು ಇಲ್ಲಿವೆ.

ಪ್ರಕೃತಿವನದಲ್ಲಿ ಪರಿಸರ ಪ್ರೀತಿ
1.5ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಪ್ರಕೃತಿ ವನದಲ್ಲಿ 8000 ಮತ್ತು 12,000 ಲೀಟರ್ ಸಾಮರ್ಥ್ಯದ ಎರಡು ಬೃಹತ್ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಹೆಸರಿಗೆ ತಕ್ಕಂತೆ ಪರಿಸರ ಕಾಳಜಿ ಇದೆ.

ಜಯನಗರದಲ್ಲಿ ಹಲವು ಪಾರ್ಕ್
ಧನ್ವಂತರಿ ವನ, ಸಂಜೀವಿನಿ ಉದ್ಯಾನ, ಡಾ. ರಾಜ್ ಕುಮಾರ್ 14.7 ಅಡಿ ಕಂಚಿನ ಪ್ರತಿಮೆ, ಪಾರ್ತವಮ್ಮ ರಾಜ್ ಕುಮಾರ್ ಪ್ರತಿಮೆ, ಅಂಬರ ಚುಂಬನ ಗಡಿಯಾರ ಗೋಪುರದ ಬಳಿಕ ಸೌತ್ ಎಂಡ್ ಸರ್ಕಲ್ ಬಳಿ ಈಗ'ಪ್ರಕೃತಿವನ' ನಿರ್ಮಾಣಗೊಂಡಿದೆ. ಅಪರೂಪದ ಗಿಡಮೂಲಿಕೆ ಗಳು ಮತ್ತು ವಿವಿಧ ಪ್ರದೇಶಗಳ ಸಸ್ಯಗಳು ಇಲ್ಲಿವೆ.












Click it and Unblock the Notifications