ರಾಜ್ಯ ಸರ್ಕಾರದಿಂದ ಸಪ್ತಪದಿ ಕಾರ್ಯಕ್ರಮ: ವಿಶೇಷತೆ ಏನು?
ಬೆಂಗಳೂರು, ಜನವರಿ 10: ವಿಧಾನಸೌಧದಲ್ಲಿ ಸಪ್ತಪದಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಯಡಿಯೂರಪ್ಪ ವಿವಾಹ ನಡೆಯುವ ಒಂದು ತಿಂಗಳ ಮುನ್ನ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಬೇಕು.
ಸಾಮೂಹಿಕ ವಿವಾಹಕ್ಕೆ ಬರುವ ಎಲ್ಲರಿಗೂ ಊಟ ವ್ಯವಸ್ಥೆ ಇರುತ್ತದೆ.ಈ ನೆಪದಲ್ಲಿ ಯಾವುದೇ ಬಾಲ್ಯ ವಿವಾಹ ನಡೆಯದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದರು.

ಮದುವೆ ಮಾಡಲು ಮನೆ ಮಾರಿಕೊಂಡು , ಸಾಲ ಮಾಡಿಕೊಂಡು ನಂತರ ಸಾಕಷ್ಟು ಕಷ್ಟ ಅನುಭವಿಸುವ ಪೋಷಕರಿಗೆ ನೆರವು ನೀಡಲು ಸರ್ಕಾರ ನಿರ್ಧರಿಸಿದೆ. ಎಲ್ಲಾ ವರ್ಗಕ್ಕೆ ಮತ್ತು ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ತಂದಿದ್ದೇವೆ.
ಸಪ್ತಪದಿ ಯೋಜನೆಯಿಂದ ವಿವಾಹ ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿದೆ ಎಂದು ಹೇಳಿದರು.ಮಸೀದಿ ಇಲ್ಲವೆ ಚರ್ಚ್ ಗಳಲ್ಲೂ ಅವರದೇ ಸ್ವಂತ ಖರ್ಚಿನಲ್ಲಿ ಸಾಮೂಹಿಕ ವಿವಾಹ ನಡೆಸಿದರೆ ನಮ್ಮ ಅಭ್ಯಂತರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಪ್ತಪದಿ ಕಾರ್ಯಕ್ರಮದ ರಾಯಭಾರಿಗಳಾಗಿ ಇನ್ ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಮತ್ತು ನಟ ಯಶ್ ಸರಕಾರದ ಜತೆ ಕೈ ಜೋಡಿಸಲಿದ್ದಾರೆ ಎಂದರು.
ಏಪ್ರಿಲ್ 26 ಹಾಗೂ ಮೇ 24ರಂದು ಸರ್ಕಾರದ ವತಿಯಿಂದ ಸಾಮೂಹಿಕ ವಿವಾಹ ನಡೆಸಲಾಗುತ್ತದೆ. ವಧುವಿಗೆ 8 ಗ್ರಾಂ ಚಿನ್ನದ ತಾಳಿ ವರನಿಗೆ 10 ಸಾವಿರ ರೂ. ನಗದು ನೀಡಲಾಗುತ್ತಿದೆ.












Click it and Unblock the Notifications